ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಸಮುದಾಯ ಭವನವೊಂದಕ್ಕೆ ತಮಿಳುನಾಡಿನ ನಾಯಕ ಪೆರಿಯಾರ್ ಹೆಸರಿಟ್ಟಿದ್ದ ಜಿಬಿಎ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭಾರಿ ಪ್ರತಿಭಟನೆಯ ನಂತರ ಅಧಿಕಾರಿಗಳು ಹೆಸರನ್ನು ಬದಲಿಸಿದ್ದಾರೆ. ಸತತ ಒತ್ತಡ ಹಾಗೂ ಸಂಘರ್ಷದ ವಾತಾವರಣದ ನಡುವೆ ಪೆರಿಯಾರ್ ಹೆಸರನ್ನು ತೆರವುಗೊಳಿಸಿ ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್ ಎಂದು ಮರುನಾಮಕರಣ ಮಾಡಲಾಗಿದೆ.
ಕನ್ನಡಿಗರ ದುಡ್ಡಿನಲ್ಲಿ ಪೆರಿಯಾರ್ ಹೆಸರಿಗೆ ವಿರೋಧ
ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಂ.ವಿ. ಗಾರ್ಡನ್ ನಲ್ಲಿ ಜಿಬಿಎ ಅನುದಾನದಡಿ ಹೊಸ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ಆದರೆ ಈ ಭವನಕ್ಕೆ ತಮಿಳುನಾಡಿನ ಚಳವಳಿಗಾರ ಪೆರಿಯಾರ್ ಇ.ವಿ. ರಾಮಸಾಮಿ ಅವರ ಹೆಸರನ್ನು ಇಡಲಾಗಿತ್ತು. ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿದ ಕಟ್ಟಡಕ್ಕೆ ಕರ್ನಾಟಕದ ಸಾಹಿತಿಗಳು ಅಥವಾ ಮಹನೀಯರ ಹೆಸರಿಡಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಮುಖಂಡರು ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಆದರೂ ಅಧಿಕಾರಿಗಳು ಆರಂಭದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಅಧಿಕಾರಿಗಳ ವಿಳಂಬ ಧೋರಣೆಯಿಂದ ಆಕ್ರೋಶಗೊಂಡ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಎಂ.ವಿ. ಗಾರ್ಡನ್ ನ ಸಮುದಾಯ ಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ತಮಿಳು ಮುಖಂಡರು ಹಾಗೂ ಕನ್ನಡ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಮತ್ತು ಪ್ರತಿಭಟನಾಕಾರರನ್ನು ಚದುರಿಸಿದರು.
ಕೊನೆಗೂ ಮಣಿದ ಜಿಬಿಎ: ಇಂದಿರಾ ಗಾಂಧಿ ಹೆಸರು ಫಿಕ್ಸ್
ಕನ್ನಡಪರ ಸಂಘಟನೆಗಳ ಉಗ್ರ ಹೋರಾಟ ಮತ್ತು ಸ್ಥಳೀಯವಾಗಿ ಉಂಟಾದ ಘರ್ಷಣೆಯ ತೀವ್ರತೆಯನ್ನು ಅರಿತ ಜಿಬಿಎ ಆಡಳಿತ ಮಂಡಳಿ ಕೊನೆಗೂ ಹೆಸರನ್ನು ಬದಲಿಸಲು ನಿರ್ಧರಿಸಿದೆ. ವಿವಾದಿತ ಪೆರಿಯಾರ್ ಕನ್ವೆನ್ಷನ್ ಹಾಲ್ ಹೆಸರನ್ನು ಅಧಿಕೃತವಾಗಿ ತೆರವುಗೊಳಿಸಿ ಅದರ ಬದಲಾಗಿ ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್ ಎಂದು ಮರುನಾಮಕರಣ ಮಾಡಿ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಶಿವಾಜಿನಗರದಲ್ಲಿ ನಡೆಯುತ್ತಿದ್ದ ಹೆಸರಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.







