ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಬೀದಿಬದಿ ವ್ಯಾಪಾರಿ ಮೊಹಮ್ಮದ್ ಇರ್ಫಾನ್ ಈಗ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೇ ನೇರ ಎಚ್ಚರಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಇರ್ಫಾನ್, ಬಡವರ ಪರವಾಗಿ ಧ್ವನಿ ಎತ್ತುತ್ತಲೇ ರಾಜಕೀಯ ನಾಯಕರಿಗೆ ಇರಬೇಕಾದ ಬದ್ಧತೆಯ ಬಗ್ಗೆ ಖಡಕ್ ಮಾತುಗಳನ್ನು ಆಡಿದ್ದಾರೆ.
ಮಾತು ತಪ್ಪಿದರೆ ಹೋರಾಟ ಗ್ಯಾರಂಟಿ
ರಾಹುಲ್ ಗಾಂಧಿ ಅವರೊಂದಿಗಿನ ಭೇಟಿಯ ವೇಳೆ ಇರ್ಫಾನ್ ಅತ್ಯಂತ ನಿಸ್ಸಂಕೋಚವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೀವು ಈಗ ಭರವಸೆ ನೀಡುತ್ತಿದ್ದೀರಿ, ಆದರೆ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತು ತಪ್ಪಿದರೆ ನಾವು ಸುಮ್ಮನಿರುವುದಿಲ್ಲ. ನಿಮ್ಮ ವಿರುದ್ಧವೂ ಬೀದಿಗಿಳಿದು ಬೃಹತ್ ಹೋರಾಟ ಮಾಡುತ್ತೇವೆ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ದೇಶದಲ್ಲಿ ದಿನಗೂಲಿ ಕಾರ್ಮಿಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಮತ್ತು ಹೆಚ್ಚುತ್ತಿರುವ ಆತ್ಮಹತ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇರ್ಫಾನ್, ಸರ್ಕಾರದ ದಾಖಲೆಗಳಲ್ಲಿ ಕನಿಷ್ಠ ವೇತನ 18,000 ರೂಪಾಯಿ ಎಂದಿದ್ದರೂ, ವಾಸ್ತವದಲ್ಲಿ ಕಾರ್ಮಿಕರಿಗೆ ಸಿಗುತ್ತಿರುವುದು ಕೇವಲ 13 ರಿಂದ 14 ಸಾವಿರ ರೂಪಾಯಿ ಮಾತ್ರ. 10-11 ಗಂಟೆಗಳ ಕಾಲ ಕಠಿಣ ಶ್ರಮ ಪಟ್ಟರೂ ಕಾರ್ಮಿಕರ ಬದುಕು ಹಸನಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಮದುವೆ ವಿಷಯ ಪ್ರಸ್ತಾಪಿಸಿದ ಪ್ರಿಯಾಂಕಾ ಗಾಂಧಿ
ಇದೇ ಭೇಟಿಯ ವೇಳೆ ಒಂದು ಕುತೂಹಲಕಾರಿ ಪ್ರಸಂಗವೂ ನಡೆಯಿತು. ರಾಹುಲ್ ಮತ್ತು ಇರ್ಫಾನ್ ಸಂಭಾಷಣೆ ನಡೆಸುತ್ತಿದ್ದಾಗ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಕರೆ ಮಾಡಿದ್ದರು. ಈ ವೇಳೆ ಇರ್ಫಾನ್ ಜೊತೆ ಮಾತನಾಡಿದ ಪ್ರಿಯಾಂಕಾ, ದಯವಿಟ್ಟು ರಾಹುಲ್ ಗಾಂಧಿಗೆ ಮದುವೆಯಾಗಲು ಹೇಳಿ, ಅವರು ನನ್ನ ಮಾತು ಕೇಳುತ್ತಿಲ್ಲ ಎಂದು ಮನವಿ ಮಾಡಿದರು. ಇದಕ್ಕೆ ಚಟಾಕಿ ಹಾರಿಸಿದ ಇರ್ಫಾನ್, ರಾಹುಲ್ ಗಾಂಧಿ ಅವರು ಮದುವೆಯಾಗದಿರುವುದೇ ಒಳಿತು. ಅವರು ಅತ್ಯಂತ ಸರಳ ಮತ್ತು ಒಳ್ಳೆಯ ಹೃದಯವುಳ್ಳ ವ್ಯಕ್ತಿ ಎಂದು ಹಾಸ್ಯ ಚಟಾಕಿ ಹಾರಿಸಿ ಅಲ್ಲಿ ನೆರೆದಿದ್ದವರನ್ನು ನಗಿಸಿದರು.
ಯಾವುದೇ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಯೂಟ್ಯೂಬ್ ಮತ್ತು ಗೂಗಲ್ ಮೂಲಕ ಜ್ಞಾನ ಸಂಪಾದಿಸಿರುವ ಇರ್ಫಾನ್, ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿ ಮಾತನಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗಿಂತ ಮೊದಲು ತಮಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಇಚ್ಛೆಯಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಕೊಳಚೆ ಪ್ರದೇಶಗಳಲ್ಲಿ 12 ವರ್ಷದ ಪುಟ್ಟ ಮಕ್ಕಳಿಗೂ ಗಾಂಜಾ ಮತ್ತು ಮಾದಕ ದ್ರವ್ಯಗಳು ಎಲ್ಲಿ ಸಿಗುತ್ತವೆ ಎಂಬುದು ಗೊತ್ತಿದೆ. ಹೀಗಿದ್ದರೂ ಪೊಲೀಸರು ಯಾಕೆ ಮೌನವಾಗಿದ್ದಾರೆ ಎಂಬ ಕಠಿಣ ಪ್ರಶ್ನೆಯನ್ನು ಅಮಿತ್ ಶಾ ಅವರ ಮುಂದಿಡಲು ನಾನು ಕಾಯುತ್ತಿದ್ದೇನೆ ಎಂದು ಇರ್ಫಾನ್ ಹೇಳಿದ್ದಾರೆ. ಇರ್ಫಾನ್ ಅವರ ಈ ದಿಟ್ಟ ನಡೆ ಮತ್ತು ಸಾಮಾಜಿಕ ಕಳಕಳಿಯನ್ನು ಕಂಡು ರಾಹುಲ್ ಗಾಂಧಿ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದಾರೆ. ಇಂತಹ ಯುವಕರೇ ದೇಶದ ನಿಜವಾದ ಆಸ್ತಿ ಎಂದು ಬಣ್ಣಿಸಿದ್ದಾರೆ.








