ರಾಜ್ಯದಲ್ಲಿ ಇದೀಗ ಗಾಯಕ ಸೋನು ನಿಗಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸೋನು ನಿಗಮ್ ಇತ್ತೀಚೆಗೆ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದಕ್ಕೆ ‘ಹೀಗೆ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ನಲ್ಲಿ ಅಟ್ಯಾಕ್ ಆಗಿದ್ದು ಎಂದು ಹೇಳುವ ಮೂಲಕ ವಿವಾದ ಮೈ ಮೇಲೆ ಎಳೆದುಕೊಂಡಿದ್ದರು.ಈ ಹೇಳಿಕೆಯಲ್ಲಿ ಅವರು ಕನ್ನಡ ಭಾಷೆಯ ಪ್ರಾಮುಖ್ಯತೆ ಅಥವಾ ನುಡಿಯ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ್ದು, ಉಗ್ರರ ದಾಳಿಗೆ ಹೋಲಿಕೆ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರು ನಗರದ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ FIR ದಾಖಲಾಗಿದೆ. ಅಷ್ಟೇ ಅಲ್ಲ, ರಾಜ್ಯಾದ್ಯಂತ ಆಕ್ರೋಶ ಸಿಡಿದೆದ್ದಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಯುವಕರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಇಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಜರುಗಿದ್ದು, ಸೋನು ನಿಗಮ್ ತಕ್ಷಣವೇ ಬಂಧನಕ್ಕೆ ಒಳಪಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಕನ್ನಡವನ್ನು ಉಗ್ರರ ದಾಳಿಗೆ ಹೋಲಿಸುವಂತಹ ಹೇಳಿಕೆ ನೀಡಿರುವ ಗಾಯಕನನ್ನು ಕರ್ನಾಟಕದಲ್ಲಿ ಯಾರು ಸಹಿಸಲಾರರು. ಇವರನ್ನು ಕಾನೂನಿನಡಿಯಲ್ಲಿ ತಕ್ಷಣವೇ ಬಂಧಿಸಿ ತಕ್ಕ ಪಾಠ ಕಲಿಸಬೇಕು ಎಂದು ನಾರಾಯಣಗೌಡ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಸೋನು ನಿಗಮ್ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. “ಕನ್ನಡವು ನಮ್ಮ ಆಸ್ತಿಯೂ, ಅಸ್ತಿತ್ವವೂ. ಯಾರೇ ಆಗಿರಲಿ, ನುಡಿಯ ಮೇಲೆ ಕೆಟ್ಟದು ಮಾತನಾಡಿದರೆ ಕೈಕಟ್ಟಿ ಕುಳಿತಿರುವುದಿಲ್ಲ ಎಂಬ ಮಾತು ಕೇಳಿಬಂತು.
ಇದಕ್ಕೆ ಉತ್ತರವಾಗಿ ಸೋನು ನಿಗಮ್ ತಮ್ಮ ಇನ್ ಸ್ಟಾಗ್ರಾಂ ಅಕೌಂಟಿನಲ್ಲಿ ಈ ಕುರಿತಂತೆ ಮತ್ತಷ್ಟು ಸ್ಪಷ್ಟನೆಯನ್ನು ನೀಡಿದ್ದು, ಕನ್ನಡ ನನ್ನ ಎರಡನೇ ಭಾಷೆ. ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ. ಆದರೂ, ಅಂದಿನ ಸಮಾರಂಭದಲ್ಲಿ ನನ್ನ ಮೇಲೆ ಜಬದಸ್ತು ಮಾಡಿದ್ದಕ್ಕಷ್ಟೇ ನಾನು ಒರಟಾಗಿ ಉತ್ತರಿಸಬೇಕಾಯಿತು ಎಂದು ಹೇಳಿದ್ದಾರೆ. ಆದರೆ ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ಟ್ಯಾಗ್ ಅಭಿಯಾನಗಳು ಜೋರಾಗಿ ನಡೆಯುತ್ತಿವೆ. ಅನೇಕ ಕನ್ನಡ ನಟರು, ಸಾಹಿತಿಗಳು ಮತ್ತು ಅಭಿಮಾನಿಗಳು ಸೋನು ನಿಗಮ್ ಹೇಳಿಕೆಯನ್ನು ಖಂಡಿಸುತ್ತಿರುವ ವಿಚಾರಗಳು ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.
ಈ ಪರಿಸ್ಥಿತಿಯಲ್ಲಿ ಪೊಲೀಸರು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.