ಕನ್ನಡದ ಖ್ಯಾತ ರಂಗಭೂಮಿ ಕಲಾವಿದ ರಾಜಾರಾಮ್ ವಿಧಿವಶ
ಕನ್ನಡದ ಖ್ಯಾತ ರಂಗಭೂಮಿ ಕಲಾವಿದ ಆರ್ ಎಸ್ ರಾಜಾರಾಮ್ ಅವರು ಇಂದು ವಿಧಿವಶರಾಗಿದ್ದಾರೆ. ಟಿಪ್ಪುಸುಲ್ತಾನ್, ಕಿತ್ತೂರು ಚೆನ್ನಮ್ಮ, ವಿಗಡವಿಕ್ರಮರಾಯ, ಎಚ್ಚಮನಾಯಕ, ಕಾಕನ ಕೋಟೆ, ತುಘಲಕ್, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ರಾಜಾರಾಮ್ ಅವರು ತಮ್ಮ 84ನೇ ವಯಸ್ಸಿನಲ್ಲಿ ಬದುಕಿನ ಜರ್ನಿ ಕೊನೆಗೊಳಿಸಿದ್ದಾರೆ.
ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ರಾಜಾರಾಮ್ ಮಲ್ಲೇಶ್ವರದ ಸ್ನೇಹಿತರೊಡನೆ ರಸಿಕ ರಂಜನಿ ಕಲಾವಿದರು ಸ್ಥಾಪಿಸಿದರು. ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್, ಕೆ. ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದರು. ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿಯೂ ನಟಿಸಿದರು. ಅನೇಕ ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಾಜಾರಾಮ್ ಅವರ ನಿಧನಕ್ಕೆ ನಟ ಸೃಜನ್ ಲೋಕೇಶ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.