ಸಾಮರಸ್ಯದ ಕರಗ ಉತ್ಸವಕ್ಕೂ ಬೀರಿತಾ ಧರ್ಮಯುದ್ಧದ ಕರಿಛಾಯೆ?
ಬೆಂಗಳೂರು: ನಗರದ ಪ್ರಸಿದ್ಧ ಉತ್ಸವ ಕರಗಕ್ಕೆ ಧರ್ಮಯುದ್ಧದ ಕರಿಛಾಯೆ ಬಿಸಿ ತಟ್ಟಿದ್ದು, ತಲತಲಾಂತರದಿಂದ ನಡೆದುಕೊಂಡು ಬಂದಿದ್ದ, ಕರಗ ಮೂರ್ತಿಯನ್ನು ದರ್ಗಾಕ್ಕೆ ಕರೆದುಕೊಂಡು ಹೋಗುವುದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಪ್ರತಿವರ್ಷ ಅದ್ಧೂರಿಯಾಗಿ ಜರಗುತ್ತಿದೆ. ಪ್ರತಿವರ್ಷ ನಡೆಯುವ ಶ್ರೀ ಧರ್ಮರಾಯ ಕರಗ ಉತ್ಸವ ಮೂರ್ತಿಯು ಮಸ್ತಾನ್ ಸಾಬ್ ದರ್ಗಾದ ಒಳಗೆ ಕೊಂಡ್ಯೊಯಲಾಗುತ್ತದೆ. ಈ ಬಾರಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ದರ್ಗಾದ ಒಳಗೆ ಹೋಗಬಾರದೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಈ ಹಿನ್ನಲೆಯಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಮುಸ್ಲಿಂ ಧರ್ಮಗುರುಗಳು ಭೇಟಿ ನೀಡಿ, ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಏನೇ ವಿರೋಧ ಬಂದರೂ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಉತ್ಸವ ಭೇಟಿ ನೀಡಲಿ. ನೂರಾರು ವರ್ಷಗಳ ಇತಿಹಾಸದಂತೆ ಆಚರಣೆ ನಡೆಯಲಿದೆ ಎಂದು ಸಮಿತಿಯಿಂದ ಮನವಿ ಮಾಡಿದ್ದಾರೆ.
ಆದರೆ ಇದಕ್ಕೆ ಕೆಲ ಹಿಂದೂ ಪರ ಸಂಘಟನೆಗಳು ಕರಗ ಉತ್ಸವ ಮೂರ್ತಿಯನ್ನು ದರ್ಗಾಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿವೆ.
ಇನ್ನೂ ಕರಗ ಉತ್ಸವ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದರು. ಇಂದಿಗೂ ಕರಗ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ 50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
ರಾತ್ರಿ ಆರಂಭವಾಗುವ ಕರಗ ಸಾಮಾನ್ಯವಾಗಿ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಅಣ್ಣಮ್ಮ ದೇವಸ್ಥಾನ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಮಾರ್ಗವಾಗಿ ಕರಗ ಸಾಗುತ್ತದೆ. ವಿಶೇಷವೆಂದರೆ ಪ್ರತಿ ವರ್ಷ ಕರಗ ಉತ್ಸವ ಮೂರ್ತಿಯನ್ನು ಮಸ್ತಾನ್ ಸಾಬ್ ದರ್ಗಾದ ಒಳಗೆ ಕೊಂಡ್ಯೊಯಲಾಗುತ್ತದೆ.









