ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ | ಬೇಕಿತ್ತಾ ಈ ಸರ್ಕಾರ..?
ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ.. ನೆರೆಗೆ ಉತ್ತರ ತತ್ತರಿಸುತ್ತಿದ್ದರೂ ಯಾಕೀ ವಿಳಂಬ..? ಸುಮ್ನೆ ಟೈಂ ಪಾಸ್ ಗೆ ಸಿಎಂ ಆದ್ರಾ ಬಾಮ್ಮಾಯಿ ಸಾಹೇಬ್ರೆ..?
ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತೆ ಮುಖ್ಯಮಂತ್ರಿ ಬದಲಾದರೂ ರಾಜ್ಯದ ಜನರ ಹಣೆಬರಹ ಬದಲಾಗೋ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ಕೊರೊನಾ ಮೂರನೇ ಅಲೆಯ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಇನ್ನೊಂದೆಡೆ ಜಲಾಸುರ ಉತ್ತರ ಕರ್ನಾಟಕವನ್ನು ನುಂಗುತ್ತಾ ಬರುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಕಾಯಬೇಕಿದ್ದ ರಾಜ್ಯ ಸರ್ಕಾರ ಮಾತ್ರ ಇನ್ನೂ ಟೇಕ್ ಆಫ್ ಆಗ್ತಾನೆ ಇಲ್ಲ..!!
ಹೌದು..! ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ಸಂಕಷ್ಟಗಳು ಬರುತ್ತಲೇ ಇವೆ. ಆದ್ರೂ ಸರ್ಕಾರವನ್ನು ಎಳೆದುಕೊಂಡು ಬರುತ್ತಿದ್ದ ಬಿಎಸ್ ವೈ ಇತ್ತೀಚೆಗೆಷ್ಟೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಮೂಲಕ ಸಾಕಷ್ಟು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಪೂರ್ಣ ವಿರಾಮ ಇಟ್ಟರು. ಆದ್ರೆ ಈ ಪರಿಸ್ಥಿತಿಯಲ್ಲಿ ಬಿಎಸ್ ವೈ ರಾಜೀನಾಮೆ ನೀಡಬೇಕಿತ್ತಾ..?
ನೆರೆ, ಪ್ರವಾಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ರಾಜೀನಾಮೆ ಎಷ್ಟು ಸರಿ..?
ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ..
ಬಿಎಸ್ ವೈ ರಾಜೀನಾಮೆ ನೀಡುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದ್ರೆ ಈವರೆಗೂ ಸಂಪುಟ ರಚನೆ ಆಗಿಲ್ಲ. ಮಂತ್ರಿಗಿರಿಯ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಉಳಿದುಕೊಂಡು ಜನರ ಸೇವೆ ಮಾಡದೇ ಗೂಟದ ಕಾರಿಗಾಗಿ ಲಾಬಿ ಮಾಡುತ್ತಿದ್ದಾರೆ. ಅದರಲ್ಲೂ ಪ್ರವಾಹ ಪೀಡಿತ ಬೆಳಗಾವಿಯ ಎಲ್ಲಾ ಶಾಸಕರೂ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ನೆರೆ ಪೀಡಿತ ಪ್ರದೇಶಗಳಲ್ಲಿ ಜನರ ಸಾಯುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಸಚಿವಸ್ಥಾನಕ್ಕಾಗಿ ಲಾಬಿ ಮುಂದುವರೆಸಿದ್ದಾರೆ. ನೆರೆಯಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಕ್ಯಾಬಿನೆಟ್ ಕುಸ್ತಿ ಬೇಕಿತ್ತಾ..?
ಸುಮ್ನೆ ಟೈಂ ಪಾಸ್ ಗೆ ಸಿಎಂ ಆದ್ರಾ ಬಾಮ್ಮಾಯಿ ಸಾಹೇಬ್ರೆ..?
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗುವುದರಲ್ಲಿ ಬಿಎಸ್ ವೈ ಅವರ ಪಾತ್ರ ದೊಡ್ಡದು ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಎಂ ಹುದ್ದೆಯಲ್ಲಿ ಕೂರುತ್ತಿದ್ದೇನೆ ಎಂದು ಸ್ವತಃ ಬೊಮ್ಮಾಯಿ ಅವರಿಗೆ ಗೊತ್ತು. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಬೊಮ್ಮಾಯಿ ಅವರು ಕೂಡಲೇ ತಮ್ಮ ಟೀಂ ರೆಡಿ ಮಾಡಿಕೊಳ್ಳಬೇಕಿತ್ತು. ಆದ್ರೆ ಅವರ ನಡೆ ನೋಡಿದ್ರೆ ಸಂಪುಟ ರಚನೆ ವಿಳಂಬ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅವರು ಪದಗ್ರಹಣ ಮಾಡಿ ಇಂದಿಗೆ ಮೂರು ದಿನ ಕಳೆದರೂ ಈವರೆಗೂ ಸಂಪುಟ ಸೇರುವ ಹೆಸರುಗಳು ಅಂತಿಮವಾಗಿಲ್ಲ. ಇಂದು ದೆಹಲಿಗೆ ಭೇಟಿ ನೀಡಿದ್ದರೂ ಅಲ್ಲಿ ಸಂಪುಟ ರಚನೆ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆಗೂ ಉತ್ತರವಿಲ್ಲ.
ಬೇಕಿತ್ತಾ ಈ ಸರ್ಕಾರ..?
ಅಂತಿಮವಾಗಿ ಸದ್ಯದ ರಾಜ್ಯ ಬಿಜೆಪಿ ಸರ್ಕಾರದ ನಡೆ ನೋಡಿದ್ರೆ ಬೇಕಿತ್ತಾ ಈ ಸರ್ಕಾರ ಎಂದು ಅನಿಸದೇ ಇರದು. ಯಾಕೆಂದ್ರೆ ಕೊರೊನಾ ಮೂರನೇ ಅಲೆ ಎಚ್ಚರಿಕೆ ಗಂಟೆ. ನೆರೆ ಸಂಕಷ್ಟದಲ್ಲಿ ಜನರ ಬಗ್ಗೆ ಯೋಚಿಸದೇ ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಜನಪ್ರತಿನಿಧಗಳು ಓಡಾಡುತ್ತಿರುವುದು ನಾಚಿಗೇಡಿನ ಸಂಗತಿ.