ಸಿಎಂ ಬಡವರಿಗೆ ಪ್ಯಾಕೇಜ್ ಘೋಷಿಸಿದ್ರಾ.? : ಬಿಎಸ್ ವೈ ಸುದ್ದಿಗೋಷ್ಠಿಯ ಮುಖ್ಯಾಂಶಗಳು
ಬೆಂಗಳೂರು :ಈವರೆಗೆ 7.5 ಲಕ್ಷ ಕೋವಿಶೀಲ್ಡ್ 1.44 ಲಕ್ಷ ಕೋವ್ಯಾಕ್ಸಿನ್ ಸೇರಿದಂತೆ 8.14 ಲಕ್ಷ ಕೊರೋನಾ ಲಸಿಕೆ ಖರೀದಿಸಲಾಗಿದೆ. ಮೊದಲ ಡೋಸ್ ಲಸಿಕೆ ನಡೆದ ನಂತ್ರ, ಎರಡನೇ ಡೋಸ್ ಲಸಿಕೆ ನೀಡೋದಕ್ಕೆ ಈಗ ಇರುವಂತ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ 18 ರಿಂದ 44 ವರ್ಷದವರಿಗೆ ಕೊರೋನಾ ಲಸಿಕೆ ನೀಡಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕೋವಿಡ್ ನಿರ್ವಹಣೆ ಕುರಿತಂತೆ ಸಚಿವ, ಶಾಸಕರ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಜನರಿಗೆ ವಿವರಿಸಿದರು.
ಇವತ್ತು ಕೋವಿಡ್-19 ನಿಯಂತ್ರಣ ಕುರಿತಂತೆ ನಾವು ಏನ್ ಏನ್ ಕ್ರಮ ಕೈಗೊಂಡಿದ್ದೇವೆ ಈ ಬಗ್ಗೆ ಜನರಿಗೆ ಮಾಹಿತಿ ಕೊಡುವಂತದ್ದು ಪ್ರಮುಖವಾದಂತ ಉದ್ದೇಶವಾಗಿದೆ ಎಂದು ಮಾತು ಆರಂಭಿಸಿದ ಯಡಿಯೂರಪ್ಪ, ಏಪ್ರಿಲ್ 24 ರಂದು ರಾಜ್ಯದಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದ್ದು, ಬಳಿಕ ಮೇ ತಿಂಗಳಿನಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿದರ ಬಗ್ಗೆ ವಿವರಿಸಿದರು. ಜೊತೆಗೆ ಈ ಕಠಿಣ ಕ್ರಮಗಳಿಂದಾಗಿ 39 ಸಾವಿರಕ್ಕೆ ಪ್ರಕರಣಗಳ ವರದಿ ಇಳಿದಿದೆ. ನಿಬರ್ಂಧಗಳ ಹಿನ್ನಲೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಮಾರ್ಚ್ ನಲ್ಲಿ ಆರೋಗ್ಯ ಇಲಾಖೆಯ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಬೆಡ್, 600ಕ್ಕೂ ಹೆಚ್ಚು ವೆಂಟಿಲೇಟರ್ ಸೌಲಭ್ಯ ಇತ್ತು. ಈಗ ಇವುಗಳನ್ನು ಮತ್ತಷ್ಟು ಹೆಚ್ಚು ಮಾಡಲಾಗಿದೆ. ಈಗ 26 ಸಾವಿರದಷ್ಟು ಆಕ್ಸಿಜನ್ ಬೆಡ್ 1145 ಐಸಿಯು, 2019 ವೆಂಟಿಲೇಟರ್, 1248 ಹೆಚ್ ಎಸ್ ಸಿ ಬೆಡ್ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಆಕ್ಸಿಜನ್ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ತಲೆದೂಡಿರುವ ಆಕ್ಸಿಜನ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 965 ಮೆಟ್ರಿಕ್ ಟನ್ ನಿಂದ 1700ಕ್ಕೆ ಹೆಚ್ಚಿಸಿದೆ. ಮೇ.11ರಂದು 1800 ಟುನ್, ಮೇ.12ರಂದು 800 ಟನ್ ಆಮ್ಲಜನಕ ಪಡೆದಿದ್ದೇವೆ. 127 ಆಮ್ಲಜನಕ ಉತ್ಪಾದಿಸುವಂತ ಘಟಕಗಳನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿದೆ. ಅಲ್ಲದೆ ಸಂಚಾರಿ ಆಕ್ಸಿಜನ್ ಸೇವೆ ಬಗ್ಗೆ ಮಾಹಿತಿ ನೀಡಿದರು.