ಸಮರ್ಥ್ ಆರ್ಭಟ.. ಪಡಿಕಲ್ ಅಬ್ಬರ : ಸೆಮೀಸ್ ಗೆ ಕರ್ನಾಟಕ ಲಗ್ಗೆ
ನವದೆಹಲಿ : ನಾಯಕ ಆರ್ ಸಮರ್ಥ್ ಸೂಪರ್ ಆಟ… ದೇವದತ್ ಪಡಿಕಲ್ ಬೊಂಬಾಟ್ ಪ್ರದರ್ಶನ.. ವೇಗಿ ರೋಹಿತ್ ಮೋರೆ ಅದ್ಭುತ ದಾಳಿಯ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ನಲ್ಲಿ ಕೇರಳ ವಿರುದ್ಧ ಕರ್ನಾಟಕ ದಿಗ್ವಿಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸೆಮೀಸ್ ಗೆ ಲಗ್ಗೆ ಇಟ್ಟಿದೆ.
ಪಾಲಂನ ಏರ್ ಫೋರ್ಸ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 80 ರನ್ಗಳಿಂದ ಕೇರಳ ತಂಡವನ್ನು ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಕೇರಳ ಬೌಲರ್ ಗಳ ಮೇಲೆ ಸವಾರಿ ಮಾಡಿತು. ಆರಂಭಿಕರಾದ ಸಮರ್ಥ್ ಹಾಗೂ ದೇವದತ್ತ್ ಮೊದಲ ವಿಕೆಟ್ ಗೆ 245 ರನ್ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಆರ್.ಸಮರ್ಥ್ (192ರನ್, 158 ಎಸೆತ, 22 ಬೌಂಡರಿ, 3 ಸಿಕ್ಸರ್) ಹಾಗೂ ದೇವದತ್ ಪಡಿಕಲ್ (101ರನ್, 119 ಎಸೆತ, 10 ಬೌಂಡರಿ, 2 ಸಿಕ್ಸರ್) ಟೂರ್ನಿಯಲ್ಲಿ ನಾಲ್ಕನೇ ಸೆಂಚೂರಿ ಸಿಡಿಸಿದರು. ಮನೀಷ್ ಪಾಂಡೆ 34 ರನ್ ಬಾರಿಸಿದ್ರು. ಅಂತಿಮವಾಗಿ ನಿಗದಿತ 50 ಓವರ್ ಗಳಲ್ಲಿ ಕರ್ನಾಟಕ ತಂಡ ಮೂರು ವಿಕೆಟ್ ಕಳೆದುಕೊಂಡು 338 ರನ್ ಪೇರಿಸಿತು.
ಈ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಕೇರಳ ಉತ್ತಮ ಆರಂಭದ ಹೊರತಾಗಿ 80 ರನ್ ಗಳಿಂದ ಪಂದ್ಯ ಕೈಚಲ್ಲಿತು. ಕೇರಳ ಪರ ವತ್ಸಲ್ (92ರನ್, 96 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಮೊಹಮದ್ ಅಜರುದ್ದೀನ್ (52ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್)
ರಾಬಿನ್ ಉತ್ತಪ್ಪ 2, ವಿಷ್ಣು ವಿನೋದ್ 28, ಸಚಿನ್ ಬೇಬಿ 27 ರನ್ ಬಾರಿಸಿದ್ರು. ಅಂತಿಮವಾಗಿ 43.4 ಓವರ್ಗಳಲ್ಲಿ 258 ರನ್ಗಳಿಗೆ ಸರ್ವಪತನ ಕಂಡಿತು.
ಕರ್ನಾಟಕದ ಪರ ರೋಹಿತ್ ಮೋರೆ 36 ಕ್ಕೆ 5, ಶ್ರೇಯಸ್ ಗೋಪಾಲ್ 64ಕ್ಕೆ 2, ಕೆ.ಗೌತಮ್ 73ಕ್ಕೆ 2 ವಿಕೆಟ್ ಪಡೆದು ಮಿಂಚಿದ್ರು.









