ಕೆಳದಿ ಅರಸ ಶಿವಪ್ಪ ನಾಯಕನ ಕೃಷಿ ಮತ್ತು ತೋಟಗಾರಿಕೆ ಆಸಕ್ತಿಯೂ ಹಾಗೂ ಕೃಷಿ ವಿಶ್ವ ವಿದ್ಯಾಲಯಕ್ಕೆ ಶಿವಪ್ಪನಾಯಕ ನಾಮಕರಣದ ಸೌಭಾಗ್ಯವು: Saakshatv Naavu kelada charitre episode16
ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಮಲೆನಾಡು ಕಂಡ ಅತ್ಯಂತ ಶ್ರೇಷ್ಠ ಅರಸರಲ್ಲಿ ಒಬ್ಬರಾದ ಕೆಳದಿಯ ಶಿವಪ್ಪನಾಯಕರ ಹೆಸರನ್ನು ನಾಮಾಂಕಿತ ಮಾಡಿರುವುದು ಬಹಳ ಸಂತೋಷದ ಸಂಗತಿ. ಈ ಘೋಷಣೆ ಒಂದರ್ಥದಲ್ಲಿ ಐತಿಹಾಸಿಕ ಘೋಷಣೆಯಾಗಿದೆ ಏಕೆಂದರೆ ಈ ವಿಶ್ವವಿದ್ಯಾಲಯಕ್ಕೆ ಈ ಹೆಸರಿಗಿಂತ ಸೂಕ್ತ ಹೆಸರು ಬೇರೆ ಯಾವುದೂ ಇರಲಿಲ್ಲ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಕ್ಷೇತ್ರದಲ್ಲಿ ಶಿವಪ್ಪ ನಾಯಕರು ನೀಡಿರುವ ಅಮೂಲ್ಯವಾದ ಕೊಡುಗೆ ಅವಿಸ್ಮರಣೀಯವಾಗಿದೆ. ಇಂದಿಗೂ ಸಹ ಚಾಲ್ತಿಯಲ್ಲಿರುವ ಕಂದಾಯ ನೀತಿಗಳು ಶ್ರೀ ಶಿವಪ್ಪ ನಾಯಕರ ಕೊಡುಗೆಯಾಗಿದೆ. ಕೇವಲ ದೇಶ ಅಲ್ಲದೆ ವಿದೇಶಗಳಲ್ಲೂ ಸಹ ಶಿವಪ್ಪನಾಯಕರ ಕಂದಾಯ ನೀತಿಗಳು ಪ್ರಸಿದ್ಧಿ ಪಡೆದಿತ್ತು. ಪ್ರಸಿದ್ಧ ಬ್ರಿಟಿಷ್ ಅಧಿಕಾರಿಯಾಗಿದ್ದ ಥಾಮಸ್ ಮನ್ರೋ ಶಿವಪ್ಪನಾಯಕನ ಸಿಸ್ತು (ಶಿಸ್ತು ಅಲ್ಲ) ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಇದರ ಬಗ್ಗೆ ಪ್ರಸಂಶನೆಯನ್ನು ವ್ಯಕ್ತಪಡಿಸಿದ್ದು ಇಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂದು ನಮ್ಮ ರಾಜ್ಯದ ಸಾಕಷ್ಟು ಜನರಿಗೆ ಸಿಸ್ತಿನ ಶಿವಪ್ಪ ನಾಯಕರು ಒಬ್ಬ ಮಹಾನ್ ಯೋಧ ಎಂದು ಮಾತ್ರ ಗೊತ್ತಿದೆ ಹೊರೆತು ಅವರು ಮೂಲದಲ್ಲಿ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಯ ಬಗ್ಗೆ ಯಾರಿಗೂ ಸಹ ಮಾಹಿತಿ ಇರುವುದಿಲ್ಲ. ಇಂದು ನಾವೆಲ್ಲರೂ ಸೇವಿಸುತ್ತಿರುವ ಕಾಫಿಗೂ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. Saakshatv Naavu kelada charitre episode16

ನಮ್ಮ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ನಡೆಸಿದ ಸಾಕಷ್ಟು ಸಂಶೋಧನೆಯ ಫಲವಾಗಿ ರಾಜ್ಯದ ಜನರಿಗೆ ಕೃಷಿ ತೆರಿಗೆಯನ್ನು ವಿಧಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ರೀ ಶಿವಪ್ಪ ನಾಯಕರು ನಿಜಾರ್ಥದಲ್ಲಿ ನಮ್ಮ ರಾಜ್ಯದ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಪಿತಾಮಹ ಎಂದೇ ಸಂಬೋಧಿಸಬಹುದು. ಇಂದು ಮಾನ್ಯ ಮುಖ್ಯಮಂತ್ರಿಗಳು ನೂತನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಶ್ರೀ ಶಿವಪ್ಪನಾಯಕರ ಹೆಸರಿನಲ್ಲಿ ನಾಮಾಂಕಿತ ಮಾಡುವ ಮೂಲಕ ಅವರಿಗೆ ಎಂದೋ ಸಲ್ಲಬೇಕಾದ ಗೌರವವನ್ನು ಸಲ್ಲಿಸಿರುವುದು ನಿಜಕ್ಕೂ ಶ್ಲಾಘನೀಯ. ನಾನು ಎರಡು ವರ್ಷಗಳ ಕೆಳಗೆ ಶಿವಪ್ಪ ನಾಯಕರು ಬಿದನೂರಿನ ಹತ್ತಿರ ಕುಂಬತ್ತಿಯಲ್ಲಿ ಸ್ಥಾಪಿಸಿದ ರಾಜ್ಯದ ಪ್ರಥಮ ಕೃಷಿ ಸಂಶೋಧನಾ ಕೇಂದ್ರದ ಬಗ್ಗೆ ಲೇಖನವನ್ನು ಪ್ರಕಟನೆ ಮಾಡಿದಾಗ ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದೇಶದ ಪ್ರಖ್ಯಾತ ದಿನಪತ್ರಿಕೆಗಳಲ್ಲಿ ಒಂದಾದ ಹಿಂದೂ ಪತ್ರಿಕೆ ಸಹ ಈ ಸಂಶೋಧನಾ ಲೇಖನವನ್ನು ಪ್ರಕಟಣೆ ಮಾಡಿದಾಗ, ಈ ಸುದ್ದಿಯ ಫಲಶೃತಿಯಾಗಿ ಭಾರತ ದೇಶಾದ್ಯಂತ ಶಿವಪ್ಪ ನಾಯಕರು ಸ್ಥಾಪಿಸಿದ ಪ್ರಥಮ ಕೃಷಿ ಸಂಶೋಧನಾ ಕೇಂದ್ರದ ಬಗ್ಗೆ ಜನರಿಗೆ ಅರಿವಾಗುತ್ತದೆ.

ನನಗೆ ವೈಯಕ್ತಿಕವಾಗಿ ವಿಮಾನನಿಲ್ದಾಣದಕ್ಕಿಂತ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಶ್ರೀ ಶಿವಪ್ಪ ನಾಯಕರ ಹೆಸರನ್ನು ಇಟ್ಟಿರುವುದು ಬಹಳ ಸಂತಸ ತಂದಿದೆ ಹಾಗೂ ಈ ನಿರ್ಧಾರ ಸೂಕ್ತವಾಗಿದೆ. ಈ ನೂತನ ವಿಶ್ವವಿದ್ಯಾಲಯದ ಕುಲಪತಿಗಳಿಗೆ ನನ್ನದೊಂದು ಚಿಕ್ಕ ಬೇಡಿಕೆ ತಾವು ದಯವಿಟ್ಟು ಶಿವಪ್ಪನಾಯಕರು ಪ್ರಪ್ರಥಮ ಬಾರಿಗೆ ನಿರ್ಮಾಣ ಮಾಡಿದ ಕೃಷಿ ಸಂಶೋಧನಾ ಕೇಂದ್ರದ ಕೇಂದ್ರ ಬಿಂದು ಆಗಿದ್ದ ಕುಂಬತ್ತಿಯ ಪರಿಸರವನ್ನು ಸಂರಕ್ಷಿಸಬೇಕು ಹಾಗೂ ಈ ಕ್ಷೇತ್ರದ ಮಹಿಮೆ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ತಿಳಿಸುವಲ್ಲಿ ತಾವು ಸಹಕರಿಸಬೇಕಾಗಿ ಕಳಕಳಿಯ ವಿನಂತಿ ಮಾಡುವೆ. ನಾನು ಎರಡು ವರ್ಷಗಳ ಹಿಂದೆ ಬರೆದಿದ್ದ ಲೇಖನವನ್ನು ಈ ಸಂದರ್ಭದಲ್ಲಿ ಮತ್ತೆ ತಮ್ಮ ಜೊತೆಗೆ ಹಂಚಿಕೊಳ್ಳಲು ಇಚ್ಛಿಸುತ್ತಿರುವೆ.
***
1913ರಲ್ಲಿ ಮೈಸೂರು ರಾಜ್ಯದ ಪ್ರಥಮ ಕೃಷಿ ನಿರ್ದೇಶಕರಾಗಿದ್ದ ಡಾ|| ಲೆಸ್ಲಿ. ಸಿ. ಕೋಲ್ಮನ್, ಪ್ರಪ್ರಥಮ ಬಾರಿಗೆ ಕೃಷಿ ಬಗ್ಗೆ ಸಂಶೋಧನೆ ನಡೆಸಲು ಹೆಬ್ಬಾಳ ಫಾರ್ಮ್, ಮಾರತೂರ್ ಫಾರ್ಮ್, ಬಬ್ಬೂರ ಫಾರ್ಮ್, ನಾಗೇನಹಳ್ಳಿ ಕಬ್ಬು ಫಾರ್ಮ್, ಬಾಳೆಹೊನ್ನೂರು ಕಾಫಿ ಫಾರ್ಮ್ ಮತ್ತು ಕೂರ್ಗ್ ಕಾಫಿ ಫಾರ್ಮ್ ಅನ್ನು ಸ್ಥಾಪಿಸಿರುವ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದಕ್ಕೂ ಮುಂಚೆ ಅಂದರೆ 17ನೇ ಶತಮಾನದಲ್ಲಿ ಕೆಳದಿಯ ಶ್ರೀ ಶಿವಪ್ಪನಾಯಕರು ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಅದರಲ್ಲಿ ನಡೆಸಿದ ಸಮೀಕ್ಷೆ ಮತ್ತು ಪ್ರಯೋಗದ ಪರಿಣಾಮವಾಗಿ ರಚನೆಯಾಗಿದೆ
“ಶಿವಪ್ಪನಾಯಕನ ಶಿಸ್ತು”, ಇದು ಯಾರಿಗೂ ತಿಳಿಯದ ನಮ್ಮ ಮಲೆನಾಡಿನ ಇತಿಹಾಸದ ಒಂದು ಪ್ರಮುಖ ಅಂಶ.

ಶಿವಪ್ಪನಾಯಕ ತನ್ನ ರಾಜ್ಯದ ಭೂಮಿಯ ಫಲವತ್ತತೆಯಾ ಅಧಾರದ ಮೇಲೆ ಭೂಮಿಯನ್ನು ಐದು ಪ್ರಕಾರದಲ್ಲಿ ವರ್ಗೀಕರಿಸಿದ (ಉತ್ತಮ, ಮಧ್ಯಮ, ಕನಿಷ್ಠ, ಅಧಮಮ, ಅಧಮಧ್ಯಮಮ). ಶಿವಪ್ಪನಾಯಕ ಒಂದು ಪ್ರದೇಶದಲ್ಲಿ ಹನ್ನೆರಡು ವರ್ಷಗಳ ಕಾಲದ ಸರಿಸುಮಾರು ಇಳುವರಿಯನ್ನು ಗಣನೆಗೆ ತೆಗೆದುಕೊಂಡು ಅದರ ಆಧಾರದ ಮೇಲೆ ಕಂದಾಯ ಕರವನ್ನು ವಸೂಲಿ ಮಾಡುವ ಪದ್ದತಿಯನ್ನು ಜಾರಿಗೆ ತಂದಿದ್ದರು. ಶಿವಪ್ಪನಾಯಕನಿಗೆ ಕೃಷಿ ಚಟುವಟಿಕೆ ಬಗ್ಗೆ ಹೆಚ್ಚಾದ ಆಸಕ್ತಿ ಇದ್ದು, ಅದರಲ್ಲಿ ಹೊಸ ಹೊಸ ತಂತ್ರಜ್ಞಾನ ಮತ್ತು ಭತ್ತದ ಇಳುವರಿಯನ್ನು ಜಾಸ್ತಿ ಮಾಡಲು, ರಾಜ್ಯದ ವತಿಯಿಂದ ಬೇರೆ ಬೇರೆ ಜಾಗದಲ್ಲಿ ತೋಟ ಮತ್ತು ಗದ್ದೆಗಳ ನಿರ್ವಹಣೆ ಮಾಡಲಾಗುತ್ತಿತ್ತು. ಇಂತಹ ಒಂದು ತೋಟದಲ್ಲಿ ಸಣ್ಣ ಅರಮನೆ ನಿರ್ಮಿಸಿ ಅಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಅದರಲ್ಲಿ ಪ್ರತಿ ವರ್ಷ ಉಪಯೋಗಿಸುವ ಬೀಜದ ಪ್ರಮಾಣ, ಕೃಷಿಗೆ ತಗಲುವ ವೆಚ್ಚ ಮತ್ತು ಫಸಲಿನ ಇಳುವರಿಯ ಪ್ರಮಾಣ ಮತ್ತು ಗುಣಮಟ್ಟವನ್ನು ದಾಖಲಿಸಲಾಗುತ್ತಿತ್ತು. ಶಿವಪ್ಪನಾಯಕನ ಈ ಕೃಷಿ ಸಂಶೋಧನಾ ಕೇಂದ್ರ ಮತ್ತು ತೋಟದ ಮನೆಯ ಹೆಸರೇ “ಕುಂಬತ್ತಿ ಮಹಲ್”. ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕಾನನ್ 24 ಮಾರ್ಚ್ 1801ರಂದು ನಗರದ ಫತೇಹ್ ಪೇಟೆ ಹತ್ತಿರ ಇರುವ ಇಕ್ಕೇರಿ ರಾಜರ ತೋಟದ ಮನೆಗೆ ಭೇಟಿ ನೀಡಿ ಅಲ್ಲಿರುವ ವಾಸ್ತುಸ್ಥಿತಿಯ ಬಗ್ಗೆ ದಾಖಲೆ ಮಾಡಿದ್ದಾರೆ. ಅದೇ ರೀತಿ ಮೇ 1807 ರಲ್ಲಿ ತಯಾರಿಸಿದ ನಾಲ್ಕು × ನಾಲ್ಕು ಅಡಿಯ ನಗರ ನಕ್ಷೆಯಲ್ಲಿ, ಕುಂಬತ್ತಿ ಮಹಲ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಈ ಮಾಹಿತಿಯನ್ನು ಕೈಯಲ್ಲಿ ಹಿಡಿದು ಕ್ಷೇತ್ರಕಾರ್ಯಕ್ಕೆ ಮಿತ್ರರಾದ Prabandha Ambuthirtha Pradeep HG Kalyan Kumar Bhandya ಅವರ ಜೊತೆಗೆ ಹೊರಟಾಗ ನಮಗೆ ಸಿಕ್ಕಿದ್ದು ಶಿವಪ್ಪನಾಯಕನಿಗೆ ಶಿಸ್ತನ್ನು ರೂಪಿಸಲು ನಿರ್ಣಾಯಕ ಪಾತ್ರವಹಿಸಿದ ಶಿವಪ್ಪನಾಯಕನ “ಕುಂಬತ್ತಿ ಮಹಲ್”. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಕುಂಬತ್ತಿಯ ಸರ್ವೆ ಸಂಖ್ಯೆ 9 ರಲ್ಲಿ ಇರುವ ಪ್ರದೇಶದಲ್ಲಿ ಕುಂಬತ್ತಿ ಮಹಲ್ ಅವಶೇಷಗಳು ಛಿದ್ರ ಛಿದ್ರವಾಗಿ ಬಿದ್ದಿದೆ.
24 ಮಾರ್ಚ್ 1801ರಂದು ಫ್ರಾನ್ಸಿಸ್ ಬುಕಾನನ್ ಕುಂಬತ್ತಿ ಮಹಲ್ ಗೆ ಭೇಟಿ ನೀಡಿದಾಗ ಅಲ್ಲಿ ಇಕ್ಕೇರಿ ರಾಜರ ಕರಿ ಹಂಚು ಸೂರಿನ ಅರಮನೆ, ಅದರಲ್ಲಿ ಇರುವ ಎಲ್ಲಾ ರೀತಿಯ ಸವಲತ್ತುಗಳು (ಸ್ನಾನದ ಗೃಹ, ಶೌಚಾಲಯ) ಮತ್ತು ನೀರಿನ ವ್ಯವಸ್ಥೆ ಬಗ್ಗೆ ಹೇಳುತ್ತಾನೆ. ಮಹಲ್ ಪಕ್ಕದಲ್ಲಿ ಕುದರೆ ಲಾಯ, ದನದ ಕೊಟ್ಟಿಗೆ ಹಾಗೂ ಒಂದು ಸಣ್ಣ ನೀರಿನ ಹಳ್ಳ ಹರಿದು ಶರಾವತಿ ನದಿಯನ್ನು ಸೇರುತ್ತದೆ ಎಂದು ಪ್ರಸ್ತಾಪ ಮಾಡಿದ್ದಾರೆ. ಈ ಸಣ್ಣ ಹಳ್ಳದ ಹೆಸರು ” ಪಾದ ಗೋಪಿ” ಎಂದು ಸ್ಥಳೀಯರು ಕರೆಯುತ್ತಾರೆ ಎಂದು ತಮ್ಮ ಕಡತಗಳಲ್ಲಿ ದಾಖಲಿಸಿದ್ದಾರೆ. ಇಲ್ಲಿನ ತೋಟದಲ್ಲಿ ಅಡಿಕೆ, ತೆಂಗು ಮತ್ತು ಭತ್ತವನ್ನು ಬೆಳಸುತ್ತಿದ್ದು ಅದನ್ನು ಸರ್ಕಾರದ ಮೇಲ್ವಿಚಾರಕ ನಡೆಸಿಕೊಂಡು ಹೋಗುತ್ತಿರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ.Saakshatv Naavu kelada charitre episode16

ಆದರೆ ಇಂದು ಕುಂಬತ್ತಿ ಮಹಲ್ ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿ ಬಿದ್ದಿದ್ದು, ನಮ್ಮ ಇಂದಿನ ಕಂದಾಯ ಪದ್ಧತಿಗೆ ಕಾರಣವಾದ ಸ್ಥಳ ಹಾಳು ಕೊಂಪೆ ಆಗಿರುವುದು ನಮ್ಮ ಇತಿಹಾಸ ಮತ್ತು ಪರಂಪರೆಗೇ ಕಪ್ಪು ಚುಕ್ಕೆ. ಕಾರಣಗಿರಿ ದೇವಸ್ಥಾನದ ಹತ್ತಿರ ಹರಿಯುವ ಪಾದ ಗೋಪಿ ಶರಾವತಿ ನದಿಯನ್ನು ಸೇರುವ ಜಾಗದ ಎಡಬದಿಯಲ್ಲಿ ಒಂದು ಕಾಲದಲ್ಲಿ ಶಿವಪ್ಪನಾಯಕರ ತೋಟದ ಅರಮನೆ ಕುಂಬತ್ತಿ ಮಹಲ್ ಆಗಿತ್ತು. ಇಲ್ಲಿ ಇಂದು ಸರಿಸುಮಾರು ಒಂದು ಎಕರೆ ಪ್ರದೇಶದಲ್ಲಿ ಅಂದು ನಿರ್ಮಿಸಿದ ಅರಮನೆ ತಳಪಾಯವನ್ನು ಗಮನಿಸ ಬಹುದು. ಅರಮನೆ ಪಕ್ಕದಲ್ಲಿ ಒಂದು ಸುಂದರವಾದ ಬಾವಿ ಇದ್ದು, ಇದಕ್ಕೆ ಕಲ್ಲಿನ ವಿಶಾಲವಾದ ಮುಚ್ಚಳವಿದೆ. ಈ ಬಾವಿಯಿಂದ ನೀರನ್ನು ಯಂತ್ರದ ಮೂಲಕ ಮೇಲೆ ಎತ್ತಿ ಬಾವಿಯ ಮೇಲೆ ನಿರ್ಮಾಣ ಮಾಡಿದ ನೀರಿನ ಕಾಲುವೆ ಮೂಲಕ ತೋಟಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಅರಮನೆಯ ಒಳ ಪ್ರಾಂಗಣದಲ್ಲಿ ಇನ್ನೊಂದು ವಿಶಿಷ್ಠವಾದ ಚೌಕಾಕಾರದ ಬಾವಿ ಇದ್ದು ಇದರಿಂದ ಇದರ ಪಕ್ಕದಲ್ಲಿ ಇರುವ ಸ್ನಾನದ ಗೃಹಕ್ಕೆ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಇಂದು ಈ ಚೌಕಿ ಬಾವಿಗೆ ಚಪ್ಪಡಿ ಕಲ್ಲನ್ನು ಹಾಕಿ ಮುಚ್ಚಲಾಗಿದೆ. ಸ್ನಾನದ ಗೃಹದಲ್ಲಿ ಬಿದ್ದಿರುವ ಕಲ್ಲಿಗೆ ಸ್ಥಳೀಯರು ರಾಣಿಯ ಕಲ್ಲುಯಂದು ಕರೆಯುತ್ತಾರೆ. ಕೆಳದಿ ಅರಸರ ವಾಸ್ತುಶಿಲ್ಪ ಮತ್ತು ವಿನ್ಯಾಸದ ಸಂಕೇತ ವಾಗಿರುವ ಚೌಕಾಕಾರದ ಒಳ ಪ್ರಾಂಗಣವನ್ನು ನಾವು ಇಲ್ಲಿ ಗಮನಿಸಿ ಬಹುದು. ಇದರ ಪಕ್ಕದಲ್ಲಿ ಇರುವ ಸ್ವಲ್ಪ ಎತ್ತರದ ಜಾಗದಲ್ಲಿ ಎರಡು ಐದು ಅಡಿ ಎತ್ತರದ ಕಲ್ಲಿನ ಕಂಬಗಳು ನಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಹಿಂದೆ ಒಟ್ಟು ಇಪ್ಪತೈದು (25) ಕಂಬಗಳು ಇದು, ಇದನ್ನು ಐದು ಸಾಲಿನಲ್ಲಿ ಜೋಡಿಸಲಾಗಿತ್ತು. ಹಿಂದೆ ಈ ಕಂಬಗಳ ಮೇಲೆ ಪಣತೆಯನ್ನು ನಿರ್ಮಾಣ ಮಾಡಿದ ಪರಿಣಾಮವಾಗಿ, ಸ್ಥಳೀಯರು ಈ ಕಂಬಗಳನ್ನು ಪಣತೆ ಕಂಬಯಂದು ಕರೆಯುತ್ತಾರೆ. ಅರಮನೆಯ ಒಂದು ಮೂಲೆಯಲ್ಲಿ ಶೌಚಾಲಯ ಇದ್ದು ಇಲ್ಲಿ ಹಿಂದೆ ಭಾರತೀಯ ಕ್ಲೋಸೆಟ್ ವ್ಯವಸ್ಥೆ ಇತ್ತು. ಈ ಶೌಚಾಲಯದ ಪಕ್ಕದಲ್ಲಿ ಇರುವ ಕಟ್ಟೆಗೆ ಮಡ್ಡಿ ಒಲೆ ಭೂತಪ್ಪರಾಯನ ಕಟ್ಟೆ ಎಂದು ಸ್ಥಳೀಯರು ಕರೆಯುತ್ತಾರೆ, ಇದು ಬಹುಶಃ ದನದ ಕೊಟ್ಟಿಗೆಯ ಪಕ್ಕದಲ್ಲಿ ಇದ್ದಿರಬಹುದು. ಈ ಅರಮನೆಯ ಇಪ್ಪತ್ತು ಮೂರು ಪಣತೆ ಕಂಬಗಳು, ಭಾರತೀಯ ಕ್ಲೋಸೆಟ್ ಮತ್ತು ಕಾರಣಗಿರಿ ದೇವಸ್ಥಾನದ ಹಿಂಭಾಗದ ಕೋಟೆಯ ಬತ್ತೆರಿ ಮೇಲೆ ಇದ್ದ ತೋಪು, ಎಲ್ಲವನ್ನೂ ಕದ್ದುಕೊಂಡು ಹೋಗಿ ಬೆಂಗಳೂರಿನ ಜಾನಪದ ಲೋಕದಲ್ಲಿ ಇಡಲಾಗಿದೆ. ಶಿವಪ್ಪನಾಯಕನ ಅರಮನೆ ಮತ್ತು ಸಂಶೋಧನಾ ಕೇಂದ್ರ, ಪಾದ ಗೋಪಿ ಶರಾವತಿಯನ್ನು ಸೇರುವ ಮನಮೋಹಕ ಪರಿಸರದಲ್ಲಿ ಇದ್ದು, ಸರಕಾರ ಇನ್ನಾದರು ಎಚ್ಚೆತ್ತು ಕೊಂಡು ಕುಂಬತ್ತಿ ಮಹಲ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಿಸ ಬೇಕು. ಬೆಂಗಳೂರಿಗೆ ಸೇರಿರುವ ಕುಂಬತ್ತಿ ಮಹಲ್ಗೆ ಸಂಭಂದ ಪಟ್ಟಿರುವ ಎಲ್ಲಾ ವಸ್ತುಗಳು ಮರಳಿ ಶಿವಮೊಗ್ಗಕ್ಕೆ ತರಬೇಕು.
ಶಿವಪ್ಪನಾಯಕರ ಸಿಸ್ತು (ಶಿಸ್ತು ಅಲ್ಲ) ಜೊತೆಗೆ ಕೆಳದಿ ಕಾಲದಲ್ಲಿ ಇದ್ದ ಬೇರೆ ಸುಂಕಗಳಲ್ಲಿ ಸಿದ್ಯ (Sidhaya), ಬಿರದ (birada), ಕುಲ ಬಿರದ (kula-birada), ಅರೆವಾಸಿ(arevasi), ಮೇಲು ವನ(meluvana), ಹಬ್ಬಕಾಣಿಕೆ(habba kanike), ಬೆಸ್ತ ಗರಿಕೆ (besta garike), ಬನದ ಸೊಗೆ (banada soge), ಮಡ್ಡಿಹಡಿಕೆ (madhihadike), ದೀವಗರಿಕೆ (divagarike), ಹರವೇರಿ ವರತ್ತಾನೆ (haravari vartane), ಉಂಬಲಿ ವರತ್ತಾನೆ (umbali vartane), ಮಾನಿಹದವರ ವರತ್ತಾನೆ(manihadavara vartane), ಸ್ಥಳ ಸುಂಕ (sthala sunka), ಸಂಭಂದ ಕಾಣಿಕೆ (sambhanda kanike), ಮೂಲವೀಸ(mulavisa) ಮತ್ತು ಅಸ್ವಾಮಿಕ(asvamika) ಪ್ರಮುಖವಾಗಿದೆ.
–ಸಂಗ್ರಹ ಮತ್ತು ಲೇಖನ
ಅಜಯ್ ಕುಮಾರ್ ಶರ್ಮ
ಇತಿಹಾಸ ಅಧ್ಯಯನಕಾರರು
ಶಿವಮೊಗ್ಗ
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ








