ಬ್ಯಾಡ್ಮಿಟನ್ ಟೂರ್ನಿಯ ಮೇಲೆ ಕರೊನಾ ಕೆಂಗಣ್ಣು – ಭಾರತೀಯರಿಗೆ ತಗುಲಿದ ಸೋಂಕು
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ, 7 ಭಾರತೀಯ ಆಟಗಾರರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಕುರಿತು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮಾಹಿತಿ ನೀಡಿದ್ದು, ಎಲ್ಲಾ ಸೋಂಕಿತ ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಠಾಕರ್, ತ್ರಿಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಅಮನ್ ಸಿಂಗ್ ಮತ್ತು ಖುಷಿ ಗುಪ್ತಾ ಎಂದು ಹೇಳಲಾಗುತ್ತಿದೆ. ಆದರೆ, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕರೋನಾ ಪಾಸಿಟಿವ್ ಆಟಗಾರರ ಹೆಸರನ್ನ ಬಹಿರಂಗಪಡಿಸಿಲ್ಲ.
ಆಟಗಾರರ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಜನವರಿ 12 ರಂದು ನಡೆಸಲಾಗಿತ್ತು. ಪಾಸಿಟಿವ್ ಬಂದಿರುವ ಆಟಗಾರರೊಂದಿಗೆ ಪಂದ್ಯವಾಡಿದ ಎಲ್ಲಾ ಆಟಗಾರರಿಗೆ ಮುಂದಿನ ಸುತ್ತಿನಲ್ಲಿ ವಾಕ್ ಓವರ್ ನೀಡಲಾಗಿದೆ. ಟೂರ್ನಿಯ ಎರಡನೇ ಸುತ್ತಿನ ಪಂದ್ಯ ಗುರುವಾರ ನಡೆಯಲಿದೆ.
ಬ್ಯಾಡ್ಮಿಂಟನ್ ಪಂದ್ಯಗಳು ಜನವರಿ 11 ರಂದು ಪ್ರಾರಂಭವಾಗಿತ್ತು. ಟೂರ್ನಿ ಆರಂಭಕ್ಕೂ ಮುನ್ನವೇ ಇಬ್ಬರು ಭಾರತೀಯ ಆಟಗಾರರಾದ ಬಿ. ಸಾಯಿ ಪ್ರಣೀತ್ ಮತ್ತು ಧ್ರುವ ರಾವತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕೊರೊನಾ ಭೀತಿಯಿಂದಾಗಿ ಇಂಗ್ಲೆಂಡ್ ತಂಡ ಕೂಡ ಟೂರ್ನಿಯಿಂದ ಹಿಂದೆ ಸರಿದಿತ್ತು. ಇಂಡಿಯಾ ಓಪನ್ ಟೂರ್ನಿಯು BWF ವರ್ಲ್ಡ್ ಟೂರ್ ಸೂಪರ್ 500 ನ ಭಾಗವಾಗಿದೆ. ಜನವರಿ 16ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ಸ್ಟಾರ್ ಷಟ್ಲರ್ ಗಳು ಭಾಗವಹಿಸುತ್ತಿದ್ದಾರೆ.
ಟೂರ್ನಿಯ ಎರಡನೇ ದಿನ ಸೈನಾ ನೆಹ್ವಾಲ್, ಲಕ್ಷ್ಯ ಸೇನ್ ಮತ್ತು ಎಚ್ಎಸ್ ಪ್ರಣಯ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ. ಜೆಕ್ ಗಣರಾಜ್ಯದ ತೆರೆಜಾ ಸ್ವಾಬಿಕೋವಾ ನಿವೃತ್ತಿಯಾದ ಕಾರಣ ಸೈನಾ ಎರಡನೇ ಸುತ್ತಿಗೆ ತಲುಪಿದ್ದಾರೆ.
ಎರಡನೇ ಸುತ್ತು ತಲುಪಿದ ಸಿಂಧು
ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಕೂಡ ತಮ್ಮ ಮೊದಲ ಪಂದ್ಯವನ್ನು ಗೆದ್ದು, ಎರಡನೇ ಸುತ್ತು ಸಹ ತಲುಪಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಸಿಂಧು, 21-5, 21-16 ನೇರ ಸೆಟ್ಗಳಿಂದ ಭಾರತದ ಆಟಗಾರ್ತಿಯೇ ಆದ ಶ್ರೀಕೃಷ್ಣ ಪ್ರಿಯಾ ಅವರನ್ನು ಸೋಲಿಸಿದರು.