ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿದ್ದು, ಸಚಿವ ಕೆ.ಎಚ್. ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ನೀಡಿದರೆ, ರಾಜೀನಾಮೆ ನೀಡುವುದಾಗಿ ಶಾಸಕರು ಹಾಗೂ ಪರಿಷತ್ ಸದಸ್ಯರು ಬೆದರಿಕೆ ಹಾಕಿದ್ದಾರೆ.
ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ಖಚಿತವಾದರೆ ರಾಜೀನಾಮೆ ನೀಡುವುದಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಣ ಬೆದರಿಕೆ ಹಾಕಿದೆ. ಹೀಗಾಗಿ ರಾಜಕೀಯ ಹಗ್ಗ-ಜಗ್ಗಾಟವೇ ನಡೆಯುತ್ತಿದೆ. ನಮ್ಮ ಬೇಡಿಕೆಗೆ ಮಣಿಯದಿದ್ದರೆ ರಾಜೀನಾಮೆ ಕೊಡ್ತೀವಿ ಎಂದು ಕೋಲಾರ ಶಾಸಕರು ಹೇಳುತ್ತಿದ್ದಾರೆ. ಎಂಎಲ್ಸಿ ಅನಿಲ್ ಕುಮಾರ್, ಶಾಸಕ ನಂಜೇಗೌಡ, ಕೊತ್ತೂರು ಮಂಜುನಾಥ್, ಬಂಗಾರಪೇಟೆ ನಾರಾಯಣಸ್ವಾಮಿ ಸೇರಿದಂತೆ ಪ್ರಮುಖರು ರಾಜೀನಾಮೆ ನೀಡುವ ಸಂದೇಶ ರವಾನಿಸಿದ್ದಾರೆ. ರಾಜೀನಾಮೆ ಬೆದರಿಕೆ ಮೂಲಕ ಒತ್ತಡ ತಂತ್ರಕ್ಕೆ ರಮೇಶ್ ಕುಮಾರ್ ಬಣ ಮುಂದಾಗಿದೆ.
ಮಾಜಿ ಸಚಿವ ರಮೇಶ್ ಕುಮಾರ್, ಸಚಿವ ಎಂ.ಸಿ.ಸುಧಾಕರ್, ಶಾಸಕರಾದ ಕೊತ್ತೂರು ಮಂಜು ಹಾಗೂ ಮಾಲೂರು ನಂಜೇಗೌಡ, ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ಹಾಗೂ ಅನಿಲ್ ಕುಮಾರ್ ರಹಸ್ಯ ಸಭೆ ನಡೆಸಿ, ಈ ನಿರ್ಧಾರ ಕೈಗೊಂಡಿದ್ದಾರೆ. ಇನ್ನೊಂದೆಡೆ ಮುನಿಯಪ್ಪ ಕೂಡ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೆ ಇದು ತಲೆನೋವಾಗಿದೆ. ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದ್ದ ನಾಯಕರೇ ಹೀಗೆ ಮಾಡುತ್ತಿದ್ದರೆ, ಕಾಂಗ್ರೆಸ್ ರಾಜ್ಯ ಗೆಲ್ಲುವುದು ಹೇಗೆ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಕೇಳುತ್ತಿದ್ದಾರೆ.