ಕರ್ನಾಟಕದ ಭಜ್ಜಿ.. ಆದ್ರೆ ಟೀಮ್ ಇಂಡಿಯಾದ ಕೇರಂ ಬೌಲರ್..! ನಮ್ಮ ಬೆಂಗಳೂರಿನ ಕೆ. ಗೌತಮ್..!
ಕೃಷ್ಣಪ್ಪ ಗೌತಮ್.. ನಮ್ಮ ಬೆಂಗಳೂರಿನ ಯುವಕ.. ಇದೀಗ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಲು ರೆಡಿಯಾಗಿದ್ದಾರೆ.
ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆಫ್ ಸ್ಪಿನ್ನರ್ ಕಮ್ ಕೆಳ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ ಮೆನ್ ಆಗಿರುವ ಕೆ. ಗೌತಮ್ ಈಗಾಗಲೇ ರಾಜ್ಯ ಕ್ರಿಕೆಟ್ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದಾರೆ. ಹಾಗೇ ಐಪಿಎಲ್ ನಲ್ಲೂ ಕೂಡ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ.
ಕರ್ನಾಟಕ ವಿವಿಧ ವಯೋಮಿತಿ ಟೂರ್ನಿಯಲ್ಲಿ ಆಡಿ 2012ರಲ್ಲಿ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದರು. ಆದ್ರೆ ಗೌತಮ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ನಾಲ್ಕು ವರ್ಷಗಳ ಬಳಿಕ ಮತ್ತೆ ರಾಜ್ಯ ತಂಡವನ್ನು ಸೇರಿಕೊಂಡ್ರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಇಲ್ಲಿಯವರೆಗೆ 42 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರುವ ಗೌತಮ್, 1045 ಹಾಗೂ 166 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಹಾಗೇ 47 ಲಿಸ್ಟ್ ಎ ಪಂದ್ಯಗಳಲ್ಲಿ 558 ರನ್ ಹಾಗೂ 70 ವಿಕೆಟ್ ಗಳನ್ನು ಕಬಳಿಸಿದ್ದಾರೆ. 62 ದೇಶಿ ಟಿ-ಟ್ವೆಂಟಿ ಪಂದ್ಯಗಳಲ್ಲಿ 594 ರನ್ ಹಾಗೂ 41 ವಿಕೆಟ್ ಗಳನ್ನು ಪಡೆದಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಸದ್ಯ ರಾಜಸ್ತಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಟಿ-ಟ್ವೆಂಟಿ ಸ್ಪೆಷಲಿಸ್ಟ್ ಆಲ್ ರೌಂಡರ್ ಆಗಿರುವ ಗೌತಮ್ ಅವರು ಸ್ಪಿನ್ ದಂತ ಕತೆ ಎರಪಲ್ಲಿ ಪ್ರಸನ್ನ ಅವರ ಶಿಷ್ಯ. ಹರ್ಭಜನ್ ಸಿಂಗ್ ಶೈಲಿಯನ್ನು ಅನುಕರಣೆ ಮಾಡುವ ಗೌತಮ್ ಅವರನ್ನು ಒಡನಾಡಿಗಳು ಪ್ರೀತಿಯಿಂದ ಭಜ್ಜಿ ಅಂತ ಕರೆಯುತ್ತಾರೆ. ಆರ್. ಅಶ್ವಿನ್ ಅವರ ಪ್ರೇರಣೆ ಹಾಗೂ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಸಲಹೆ, ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಿಂದ ಗೌತಮ್ ಒಬ್ಬ ಅದ್ಭುತ ಸ್ಪಿನ್ನರ್ ಆಗಿ ರೂಪುಗೊಂಡಿದ್ದಾರೆ.
ಆರಂಭದಲ್ಲಿ ನಾನು ಹರ್ಭಜನ್ ಸಿಂಗ್ ಅವರನ್ನು ಅನುಕರಣೆ ಮಾಡಿಕೊಂಡು ಬೌಲಿಂಗ್ ಮಾಡುತ್ತಿದ್ದೆ. ಹೀಗಾಗಿ ನನ್ನ ಸ್ನೇಹಿತರು ನನ್ನನ್ನು ಭಜ್ಜಿ ಅಂತ ಕರೆಯುತ್ತಿದ್ದರು ಎಂದು ಹೇಳುತ್ತಾರೆ ಗೌತಮ್.
ಹಾಗಂತ ನಾನು ಹರ್ಭಜನ್ ಸಿಂಗ್ ಅವರಂತೆ ದೂಸ್ರಾ ಎಸೆತಗಳನ್ನು ಹಾಕುತ್ತಿರಲಿಲ್ಲ. ಆದ್ರೆ ನಾನು ಕೇರಂ ಎಸೆತಗಳನ್ನು ಎಸೆಯುತ್ತಿದ್ದೆ. ಕೇರಂ ಎಸೆತಗಳನ್ನು ಹಾಕಲು ನಾನೇ ಕಲಿತುಕೊಂಡೆ. ಅತ್ಯುತ್ತಮ ಮಟ್ಟದಲ್ಲಿ ಆಡುವಾಗ ನಾವು ನಮ್ಮತನವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಯಶ ಸಾಧಿಸಲು ಸಾಧ್ಯ ಎನ್ನುತ್ತಾರೆ ಕೆ. ಗೌತಮ್.
ಇನ್ನು ಐಪಿಎಲ್ ನಲ್ಲಿ ಆಡುವಾಗ ಒತ್ತಡಗಳು ಇರುತ್ತಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗೌತಮ್, ಐಪಿಎಲ್ ನಲ್ಲಿ ನಿಮ್ಮ ಬೆಲೆ ಎಷ್ಟು ಎಂಬುದರ ಬಗ್ಗೆ ಯೋಚನೆ ಮಾಡಬಾರದು. ನೈಜ ಆಟವನ್ನು ಆಡಬೇಕು ಅಷ್ಟೇ. ಫ್ರಾಂಚೈಸಿ ಎಷ್ಟು ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಆಟದಲ್ಲಿ ನಿಮ್ಮ ಪ್ರದರ್ಶನ ಹೇಗಿರುತ್ತೆ ಅನ್ನೋದು ಮುಖ್ಯವಾಗಿರುತ್ತದೆ. ಸಿಎಸ್ ಕೆ ತಂಡದಲ್ಲಿರುವಾಗ ಧೋನಿ ಭಾಯ್ ನನಗೆ ಸಲಹೆ ನೀಡಿದ್ದರು. ಆಟವನ್ನು ಆನಂದಿಸಬೇಕು. ನಮ್ಮ ನೈಜ ಆಟವನ್ನು ಆಡಬೇಕು. ಅದನ್ನು ಸರಿಯಾಗಿ ನಿಭಾಯಿಸಿದ್ರೆ ನಿನ್ನಿಂದ ಶ್ರೇಷ್ಠ ಪ್ರದರ್ಶನ ಬರುತ್ತೆ ಎಂದು ಧೋನಿ ಹೇಳಿದ್ದ ಮಾತನ್ನು ಗೌತಮ್ ಸದಾ ನೆನಪಿಸಿಕೊಳ್ಳುತ್ತಾರೆ.
ಇನ್ನು ಟೀಮ್ ಇಂಡಿಯಾಗೆ ಆಯ್ಕೆಯಾಗೋದು ಕನಸು. ಆ ಕನಸು ನನಸಾದಾಗ ಆಗುವ ಖುಷಿಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದ್ರಲ್ಲೂ ರಾಹುಲ್ ದ್ರಾವಿಡ್ ಸಾರ್, ಮಾರ್ಗದರ್ಶನದಲ್ಲಿ ಆಡುವುದು ನನಗೆ ಅಷ್ಟೇನೂ ಕಷ್ಟವೇನೂ ಆಗಲ್ಲ. ಭಾರತ ಎ ತಂಡದಲ್ಲಿರುವಾಗ ಅವರ ಮಾರ್ಗದರ್ಶನದಲ್ಲೇ ಆಡಿದ್ದೇನೆ. ಅವರ ಜೊತೆ ಇರುವುದೇ ದೊಡ್ಡ ಅನುಭವ. ಪಂದ್ಯಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎಂಬುದನ್ನು ಅವರು ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ. ಹಾಗೇ ಅವಕಾಶವನ್ನು ನೀಡುತ್ತಾರೆ ಅನ್ನೋದು ಗೌತಮ್ ಅವರ ಅಭಿಮತ.
ಒಟ್ಟಾರೆ, ಕರ್ನಾಟಕದಿಂದ ಮತ್ತೊಬ್ಬ ಕ್ರಿಕೆಟಿಗ ಟೀಮ್ ಇಂಡಿಯಾಗೆ ಎಂಟ್ರಿಯಾಗುತ್ತಿದ್ದಾರೆ. ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಮಯಾಂಕ್ ಅಗರ್ ವಾಲ್, ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾದ ಕ್ಯಾಪ್ ಧರಿಸಿದ್ದಾರೆ. ಇವರ ಜೊತೆಗೆ ಕೆ.ಗೌತಮ್, ದೇವ್ ದತ್ ಪಡಿಕ್ಕಲ್, ಬೀದರ್ ಮೂಲದ ವರುಣ್ ಚಕ್ರವರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಕೊಡುವ ದಿನವನ್ನು ಎದುರು ನೋಡುತ್ತಿದ್ದಾರೆ.