ಉಡುಪಿ: ನಿನ್ನೆಯಿಂದ ಕೃಷ್ಣನ ತವರು ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದ ಉಡುಪಿ ನಗರ ಸಂಪೂರ್ಣ ಜಲಾವೃತಗೊಂಡಿದೆ.
ಕೃಷ್ಣಮಠದ ಕೆರೆ, ಬೈಲಕೆರೆ, ನಿಟ್ಟೂರು, ಕೊಡಂಕೂರು, ಚಿಟ್ಪಾಡಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.
ಕಳೆದ ನಾಲ್ಕು ದಶಕಗಳ ಬಳಿಕ ಅಂದರೆ 1980ರ ನಂತರ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಭೀಕರ ಪ್ರವಾಹ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೆರೆಯಲ್ಲಿ ಸಿಲುಕಿದವರನ್ನು ದೊಣಿ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ರವಾನೆ ಮಾಡುತ್ತಿದ್ದಾರೆ.
ಉಡುಪಿ ನಗರದ ಅಂಗಡಿ-ಗೋದಾಮುಗಳಿಗೆ ನೀರು ನುಗ್ಗಿದ್ದು ಲಕ್ಷಾಂತರ ಮೌಲ್ಯದ ಹಾನಿಯಾಗಿದೆ. ಕೃಷ್ಣಮಠದ ಪಾರ್ಕಿಂಗ್ ಆವರಣ ಸಂಪೂರ್ಣ ಜಲಾವೃತಗೊಂಡಿದೆ.
ಉಡುಪಿ-ಮಣಿಪಾಲ ಸಂಪರ್ಕ ಕಡಿತ
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾ ಮಳೆಗೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಉಡುಪಿ-ಮಣಿಪಾಲ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಲ್ಪೆ-ಮೊಳಕಾಲ್ಮೂರು ಹಾಗೂ ಮಣಿಪಾಲ-ಆಗುಂಬೆ ನಡುವಿನ ಸಂಪರ್ಕ ಕಡಿತಗೊಂಡಿದೆ. ಪುತ್ತಿಗೆ ಮಠದ ವಿದ್ಯಾಪೀಠಕ್ಕೆ ಮಳೆ ನೀರು ನುಗ್ಗಿದೆ. ಜತೆಗೆ ಪುತ್ತಿಗೆ ಮಠದ ಗೋಶಾಲೆ ಕೂಡ ಸಂಪೂರ್ಣ ಜಲಾವೃತಗೊಂಡಿದೆ.
ಜಿಲ್ಲೆಯ ಸ್ವರ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಸುರಕ್ಷಿತ ಪ್ರದೇಶಗಳಿಗೆ ನದಿ ಸುತ್ತಮುತ್ತಲಿನ ಗ್ರಾಮಸ್ಥರ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಪೆರ್ಡೂರಿನ ಪುತ್ತಿಗೆ ಪರಿಸರದಲ್ಲಿ ರಸ್ತೆ ಸಂಚಾರ ಬಂದ್ ಅಗಿದ್ದು, ಬನ್ನಂಜೆ, ಕೊಡವೂರು, ಗುಂಡಿಬೈಲ್ ಪ್ರದೇಶಗಳು ಜಲಾವೃತಗೊಂಡಿವೆ. ಕೃಷ್ಣಮಠ ಪರಿಸರದ ಕಲ್ಸಂಕ ಬೈಲ ಕೆರೆಯಲ್ಲೂ ನೆರೆ ಉಂಟಾಗಿದೆ.
ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ.