ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದರು ಮತ್ತು ಅವರನ್ನು ಹುಡುಕುವ ಜವಾಬ್ದಾರಿಯನ್ನು ಸ್ವತಃ ಎಚ್ ಡಿ ದೇವೇಗೌಡರೇ ನನಗೆ ನೀಡಿದ್ದರು ಎಂಬ ಆಘಾತಕಾರಿ ವಿಷಯವನ್ನು ಸಚಿವ ಚಲುವರಾಯಸ್ವಾಮಿ ಬಹಿರಂಗಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಾರ ಬಾಗಿಲು ತಟ್ಟಲು ಹೋಗಿದ್ದರು ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅಂದು ದೇವೇಗೌಡರು ನನ್ನನ್ನು ಕರೆದು, ನನ್ನ ಮಗ ಕಾಣುತ್ತಿಲ್ಲ, ಎಲ್ಲಿದ್ದಾನೋ ಹುಡುಕಿ ವಿಧಾನಸಭೆಗೆ ಕರೆದುಕೊಂಡು ಬಾ, ಇಲ್ಲದಿದ್ದರೆ ನನ್ನ ಮರ್ಯಾದೆ ಹೋಗುತ್ತದೆ ಎಂದು ಬೇಡಿಕೊಂಡಿದ್ದರು. ಅವರ ಮರ್ಯಾದೆ ಉಳಿಸಲು ನಾನು ಬೆಳಿಗ್ಗೆ 9 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ ಎಂದು ವಿವರಿಸಿದರು.
ಚರ್ಚೆಗೆ ಬರಲಿ ಎಂದು ಸವಾಲು
ತಾನು 9 ಗಂಟೆಗೆ ಬಾಗಿಲು ತಟ್ಟಿದ್ದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಬಾಗಿಲು ತಟ್ಟಿದ ವಿಚಾರವನ್ನು ನಾನು ಬಿಚ್ಚಿಡಲು ಆರಂಭಿಸಿದರೆ ಅವರು ತಡೆದುಕೊಳ್ಳಲು ಸಾಧ್ಯವಿಲ್ಲ. ಕುಮಾರಸ್ವಾಮಿ ಅವರಿಗೆ ಧೈರ್ಯವಿದ್ದರೆ ಯಾವುದೇ ಮಾಧ್ಯಮದ ಮುಂದೆ ಅಥವಾ ವಿಧಾನಸೌಧಕ್ಕೆ ಬಂದು ಈ ಬಗ್ಗೆ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು. ಅಂದು ಸಿಎಂ ನಾಪತ್ತೆಯಾದಾಗ ದೇವೇಗೌಡರು ನನ್ನ ಸಹಾಯ ಕೋರಿದ್ದು ಸುಳ್ಳಾದರೆ ಅವರು ಸ್ಪಷ್ಟನೆ ನೀಡಲಿ ಎಂದರು.
ನಿದ್ದೆಯಿಲ್ಲದ ರಾತ್ರಿಗಳು
ಕುಮಾರಸ್ವಾಮಿ ಅವರಿಗೆ ಈಗ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕನಸಿನಲ್ಲೂ ಅವರಿಗೆ ಡಿ ಕೆ ಶಿವಕುಮಾರ್, ಚೆಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರೇ ಕಾಣುತ್ತಿದ್ದಾರೆ. ನಮಗೆ ಪಕ್ಷ ದೊಡ್ಡ ಜವಾಬ್ದಾರಿಗಳನ್ನು ನೀಡಿದೆ, ಆದರೆ ಅವರಿಗೆ ಕೇಂದ್ರದಲ್ಲಿ ಅಂದುಕೊಂಡ ಖಾತೆ ಸಿಗದಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಹೊಟ್ಟೆ ಉರಿಗೆ ನಮ್ಮಲ್ಲಿ ಮದ್ದಿಲ್ಲ ಎಂದು ಲೇವಡಿ ಮಾಡಿದರು.
ಹಿಟ್ ಅಂಡ್ ರನ್ ರಾಜಕಾರಣ ಬೇಡ
ತಮ್ಮ ವಿರುದ್ಧ ಯಾವುದೇ ದಾಖಲೆಗಳಿಲ್ಲದಿದ್ದರೂ ಸುಮ್ಮನೆ ಆರೋಪ ಮಾಡುವುದನ್ನು ಕುಮಾರಸ್ವಾಮಿ ನಿಲ್ಲಿಸಲಿ. ಅವರ ರೀತಿ ಹಿಟ್ ಅಂಡ್ ರನ್ ಮಾಡುವುದು ನನಗೆ ಬರುವುದಿಲ್ಲ. ಅವರ ಬಳಿ ದಾಖಲೆಗಳಿದ್ದರೆ ತೆಗೆದುಕೊಂಡು ಬರಲಿ, ನಾನು ಕೂಡ ನನ್ನ ಬಳಿ ಇರುವ ದಾಖಲೆಗಳೊಂದಿಗೆ ಸಿದ್ಧನಿದ್ದೇನೆ. ಕೇಂದ್ರ ಸಚಿವರಾಗಿ ಕೆಲಸ ಮಾಡುವುದನ್ನು ಬಿಟ್ಟು ರಾಜ್ಯದಲ್ಲಿ ಕೇವಲ ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಈಗ ಭಾರಿ ಸಂಚಲನ ಮೂಡಿಸಿದೆ.








