ಅಂಜನಾದ್ರಿಯಲ್ಲಿ ಕುಂಕುಮ ಅರ್ಚನೆಗೆ ನಿರ್ಬಂಧ
ಕೊಪ್ಪಳ: ಇಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರು ಕೈಗೊಳ್ಳುವ ಕುಂಕುಮ ಅರ್ಚನೆ ಸೇವೆಯನ್ನು ನಿರ್ಬಂಧಿಸಲಾಗಿದೆ.
ಹನುಮ ಜಯಂತಿ ನಿಮಿತ್ತ ದೇವಸ್ಥಾನಕ್ಕೆ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಹೀಗಾಗಿ ವಿಶೇಷ ದರ್ಶನ, ವಿಶೇಷ ಸೇವೆ, ಮುಖ್ಯವಾಗಿ ಕುಂಕುಮ ಅರ್ಚನೆ ಹಾಗೂ ಇತರ ಯಾವುದೇ ಸೇವೆಗೆ ಅವಕಾಶ ಇರುವುದಿಲ್ಲ ಎಂದು ತಹಶೀಲ್ದಾರ್ ಯು. ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ ಅಂಗವಾಗಿ ಭಕ್ತರಿಂದ ಕೆಲವರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಭಕ್ತರಿಂದ ಯಾವುದೇ ಹೆಚ್ಚುವರಿ ಹಣ ಪಡೆದುಕೊಳ್ಳಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಭಕ್ತರು ಕುಂಕುಮಾರ್ಚನೆ ಮತ್ತು ಇತರೆ ಯಾವುದೇ ಸೇವೆ ಪಡೆಯಲು ಸರ್ಕಾರ ನಿಗಧಿ ಮಾಡಿದ ಸೇವಾ ಶುಲ್ಕ ಪಾವತಿಸಿ ಪ್ರಸಾದ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಪ್ರತ್ಯೇಕ ಕುಂಕುಮಾರ್ಚನೆ ಅಥವಾ ಇನ್ಯಾವುದೇ ಸೇವೆಗಳಿಗೆ ಅಂಜನಾದ್ರಿಯಲ್ಲಿ ಅವಕಾಶ ಇಲ್ಲ. ಯಾವುದೇ ಪ್ರಕಟಣೆ ಅಥವಾ ಸೇವೆಗಳ ಖಾಸಗಿ ವ್ಯಕ್ತಿಗಳು ಮಾಡಿದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಚ್ಚರಿಕೆ ರವಾನಿಸಿದ್ದಾರೆ.