ಮದುವೆಗೆ ಕುಜ ದೋಷ ಅಡ್ಡಿ – ವಿಷ ಸೇವಿಸಿ ಮಹಿಳಾ ಪೊಲೀಸ್ ಕಾನ್ಸಟೇಬಲ್ ಆತ್ಮಹತ್ಯೆ…
6 ವರ್ಷಗಳಿಂದ ಪ್ರೀತಿಸಿದ ಯುವಕನನ್ನ ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಧಾ ಎಂದು ಗುರುತಿಸಲಾಗಿದೆ.
ಜ್ಯೋತಿಷಿ ಹೇಳಿದ ಮಾತು ನಂಬಿ ಪ್ರಿಯಕರ ಮದುವೆಯಾಗಲಿಲ್ಲ ಎನ್ನುವ ಕಾರಣಕ್ಕೆ ವಿಷ ಕುಡಿದಿದ್ದ ಯುವತಿಯನ್ನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಸತತ 18 ದಿನಗಳ ಆಸ್ಪತ್ರೆಯ ಜೀವನ್ಮರಣದ ಹೋರಾಟದ ನಂತರ ಯುವತಿ ಸಾವನ್ನಪ್ಪಿದ್ದಾಳೆ.
ಭದ್ರಾವತಿ ತಾಲೂಕಿನ ಕಲ್ಲಾಪುರ ನಿವಾಸಿಯಾಗಿರುವ ತೀರ್ಥಹಳ್ಳಿ ಪೊಲೀಸ್ ಕಾನ್ಸ್ಟೇಬಲ್ ಸುಧಾ ಹಾಗೂ ಭದ್ರಾವತಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಪ್ರವೀಣ್ ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಆರಂಭದಲ್ಲಿ ಹೆತ್ತವರ ವಿರೋಧವಿತ್ತಾದರೂ ನಂತರ ಒಪ್ಪಿಕೊಂಡಿದ್ದರು.
ಜಾತಿ ಅಡ್ಡಿಯ ನಡುವೆಯೂ ಇಬ್ಬರು ಮದುವೆಗೆ ಸಿದ್ಧರಾಗಿದ್ದರು. ಆದರೆ ಪ್ರವೀಣ್ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು. ಅಲ್ಲದೇ ಯುವತಿ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದಿದ್ದರು ಎನ್ನಲಾಗಿದೆ.
ಮೇ. 30 ರಂದು ಭದ್ರಾವತಿ ತಾಲೂಕು ಉಬ್ರಾಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಮೊಕಾಶಿಯನ್ನ ಭೇಟಿಯಾಗಿ ನೀನು ಇಲ್ಲದೆ ನಾನು ಸಾಯುವುದಾಗಿ ಹೇಳಿದ್ದಾಳೆ. ಸುಧಾಳನ್ನ ಬೈಕ್ನಲ್ಲಿ ಕೂರಿಸಿಕೊಂಡು ಪ್ರವೀಣ್ ಆರ್ಎಂಸಿ ಯಾರ್ಡ್ ಬಳಿ ಕರೆದುಕೊಂಡು ಬಂದು ವಿಷ ಸೇವಿಸಿ ಸತ್ತು ಬಿಡೋಣ ಎಂದು ನಾಟಕವಾಡಿದ್ದಾನೆ. ಮೊದಲು ನೀನು ಕುಡಿ ಎಂದು ಸುಧಾಳಿಗೆ ವಿಷದ ಬಾಟಲ್ ನೀಡಿದ್ದಾನೆ. ವಿಷ ಸೇವಿಸಿದ ಸುಧಾ, ಪ್ರವೀಣ್ ವಿಷ ಸೇವಿಸುವುದನ್ನ ಕಾಣಲಿಲ್ಲವೆಂದು ಪೊಲೀಸರಿಗೆ ನಂತರ ಹೇಳಿಕೆ ಕೊಟ್ಟಿದ್ದಾರೆ. ಮದುವೆಗೆ ನಿರಾಕರಣೆ ಮತ್ತು ವಿಷ ಕುಡಿಯಲು ಕಾರಣವಾದ ಪ್ರವೀಣ್ ಮತ್ತು ಆತನ ತಾಯಿ ಲಕ್ಷ್ಮಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.