ಭಗವಂತನ ಪಾದ ಸೇರಿದ ಪರಮ ಭಾಗವತೊತ್ತಮ: ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀಪಾದರು.
ಇಂದು ಪರಮಪದದ ಮಾರ್ಗ ಹಿಡಿದರು ಶ್ರೀಪಾದರು. ಅವರ ನೆನಪು ಹಸಿರು. ಸದಾ ಎದೆಯಲ್ಲರಳಿರುತ್ತದೆ. ಮನಸ್ಸು ಕುಗ್ಗಿ ಹಿಂದಣ ನೆನಪು ಉದಿಸಿದೆ. ರಂಗದಲ್ಲಿ ಅವರೊಡನೆ ಮದ್ದಳೆ ನುಡಿಸುವ ಆಶೀರ್ವಾದಪೂರ್ವಕ ಅವಕಾಶ ನನ್ನೆದೆಯಲ್ಲಿ ಅವರ ಬಗೆಗಿನ ನೆನಪು ಇಷ್ಟನ್ನು ಹೇಳಿಸಿದೆ.
ಶಂಕರಾಚಾರ್ಯರ ಶಿಷ್ಯರಾದ ತೋಟಕಾಚಾರ್ಯ ಪರಂಪರೆಯ ಮಠಾಧೀಶರಾದ ಶ್ರೀ ಶ್ರೀ ಕೇಶಾವಾನಂದ ಭಾರತಿ ಶ್ರೀಪಾದರು ಯಕ್ಷಗಾನ ಮತ್ತು ಸಂಗೀತವನ್ನು ತಮ್ಮ ಉಸಿರಾಗಿಸಿಕೊಂಡಿದ್ದವರು. ಇಂದು ನಾದಲೀನವಾಗಿದ್ದಾರೆ.
ರಸ ಸಿದ್ಧಾಂತ ಹೇಳುವುದು ಪ್ರತಿಪಾದಿಸುವ ರಸದಲ್ಲಿ ಕಲಾವಿದ ಒಂದಾಗಬಾರದೆಂದು. ಒಂದಾದರೆ ತಪ್ಪಾ ಸರಿಯಾ ಅನ್ನುವ ಮಾತಲ್ಲ ಇಲ್ಲಿ ಮುಖ್ಯವಾಗುವುದು. ನನಗಿಲ್ಲಿ ಮುಖ್ಯವಾಗುವುದು ಒಂದಾಗುವ ಮನಸ್ಸಿನ ಮುಖದ ಸೌಂದರ್ಯವನ್ನು ನೊಡುವ ಬಗೆಯಷ್ಟೆ.
ರಸದೊಂದಿಗೆ ಶ್ರೀಪಾದರಿಗಿರುವ ಸ್ಪಂದನೆ ಅಸಾಮಾನ್ಯ.
ಇದನ್ನು ರಂಗದಲ್ಲಿ ಅನುಭವಿಸಿದ ಭಾಗ್ಯ ನನ್ನದು. ಜೀವದ ನಿಜ ಗುಣ ಸ್ಪಂದನೆಯೇ ಆಗಿದೆ. ಜೀವದ್ದೇನು ಬಂತು ಇಡೀ ಪ್ರಕೃತಿಯೇ ಸ್ಪಂದನೆಯ ಸಾಕಾರವಲ್ಲವೇ. ಯಕ್ಷಗಾನ ಪ್ರಬಂಧದ ಸಾಹಿತ್ಯ ಶ್ರೀ ಪಾದರಿಗೆ ಒಂದು ಜೀವಂತ ವಸ್ತು.
ಶ್ರೀ ಪಾದರು ರಾಗ ರಾಗಿಣಿಯರ ಮೂಲಕ ಆ ಸಾಹಿತ್ಯಕ್ಕೆ ಕೊಡುವ ಉಡುಗೆ. ಈ ಎರಡು ಜೀವಗಳನ್ನು ಮುಂದಿಟ್ಟು ಶ್ರೀ ಪಾದರು ಅವುಗಳನ್ನು ತಮ್ಮೊಳಗು ಮಾಡಿ ರಸಿಕರನ್ನು ರಸವಂತರನ್ನಾಗಿ ಮಾಡುತ್ತಾರೆ. ಗಾನಕ್ಕಿರುವ ಸಾಹಿತ್ಯ, ಅದಕ್ಕಿರುವ ರಾಗ ಮತ್ತು ಅದನ್ನು ಪ್ರಸ್ತುತಿ ಪಡಿಸುವಲ್ಲಿ ಶ್ರೀ ಪಾದರು ಅವುಗಳಿಗೆ ಕೊಡುವ ತಮ್ಮ ಜೀವ ದ್ರವ್ಯ ಇವುಗಳ ತ್ರಿಪುಟಿಯನ್ನೇ ನಾವು ಶ್ರೀ ಪಾದರ ಪ್ರಸ್ತುತಿಯಲ್ಲಿ ನೋಡುವುದು.
ತತ್ವ ಶಾಸ್ತ್ರದಲ್ಲಿ ಮಾತೊಂದಿದೆ. ಸೌಂದರ್ಯವು ಕಲಾವಿದನಿಗೆ ತನ್ನ ಅನುಭವದಲ್ಲಿ ಯಾವ ರೀತಿಯಲ್ಲಿ ಯಥಾರ್ಥವೋ; ಸತ್ಯವು ತತ್ವಶಾಸ್ತ್ರಜ್ಞನಿಗೆ ತನ್ನನುಭವದಲ್ಲಿ ಯಥಾರ್ಥವೇ ಸರಿ. ಶ್ರೀ ಪಾದರ ವಿಷಯಕ್ಕೆ ಬರುವಾಗ ಈ ಸೂತ್ರ ಮುರಿದು ಬೀಳುತ್ತದೆ. ಶ್ರೀ ಪಾದರಲ್ಲಿ ಸತ್ಯವೂ ಸೌಂದರ್ಯವೂ ಜತೆಯಾಗಿ ಕಾಣಸಿಗುತ್ತದೆ. ಯಾಕೆಂದರೆ ಅವರೊಬ್ಬ ಕಲಾವಿದ ಮಾತ್ರವಲ್ಲದೆ ನಿಜ ತತ್ವಶಾಸ್ರಜ್ಞನ ಮಿಡಿತ ಹೊಂದಿರುವ ಇರುವ ಮಾನವ ಶ್ರೇಷ್ಠ.
ನನಗೆ ಇವರ ಪ್ರಸ್ತುತಿಯನ್ನು ನೋಡುವಾಗ ನೆನಪಾಗುವುದು ಸತ್ಯ ಮತ್ತು ಸೌಂದರ್ಯದ ನಡುವಿರುವ ಶಿವನನ್ನು. ಭಕ್ತಿ ರಸ, ಕರುಣ ರಸಗಳು ಶ್ರೀ ಪಾದರಿಗೆ ಸಿದ್ಧಿಸಿದೆ. ಹಾಗೆಂದು ಉಳಿದ ರಸಗಳು ಸಿದ್ಧಿಸಲಿಲ್ಲವೆಂದಲ್ಲ. ಅವುಗಳ ಪ್ರಸ್ತುತಿ ತಮ್ಮ ನೆಲೆಯನ್ನು ಗಮನದಲ್ಲಿರಿಸಿ ರಂಗಕ್ಕೆ ಒಗ್ಗುವಂತೆ ಬಳಸುವ ಸಂಯಮ ಶ್ರೀ ಗಳಿಗಿದೆ. ಶ್ರೀ ಪಾದರ ಭಕ್ತಿ ರಸದ ಪ್ರಸ್ತುತಿಯನ್ನು ಕಂಡಾಗ ಪಾತಂಜಲ ಯೋಗದರ್ಶನದ ಸಮಾಧಿ ಪಾದದ ಸೂತ್ರವೊಂದರ ಭಾವ ನೆನಪಾಗುತ್ತದೆ. ಆ ಸೂತ್ರ ಹೇಳುವುದು ತಜ್ಜಪಸ್ತದರ್ಥಭಾವನಮ್ . ವ್ಯಾಸಮಹರ್ಷಿಯ ಭಾಷ್ಯ ಹೀಗೆ ಹೇಳುತ್ತದೆ. ವಾಚ್ಯತ್ವವನ್ನೂ ವಾಚಕತ್ವವನ್ನೂ ಅರಿತುಕೊಂಡಿರುವ ಯೋಗಿಯು ಅದನ್ನು ಜಪಿಸಬೇಕು ಮತ್ತು ಅದರ ಅರ್ಥವನ್ನು ಭಾವಿಸಬೇಕು ಎನ್ನುವುದು. ಪ್ರಣವೋಪಾಸನೆಯನ್ನು ಅನುದಿನವೂ ಮಾಡುವ ಶ್ರೀ ಪಾದರಲ್ಲಿ ಭಕ್ತಿರಸದ ಸಂದರ್ಭದಲ್ಲಿ ಭಗವತ್ ತತ್ವದ ಅನುಸಂಧಾನ ವಿಶೇಷವಾಗಿ ಅವರಲ್ಲಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇದಿಷ್ಟು ಹೇಳಿದರೆ ಭಕ್ತಿ ರಸದ ಮಟ್ಟಿಗೆ ರಸ ಸಿದ್ಧಾಂತ ಶ್ರೀ ಪಾದರಿಗನ್ವಯವಾಗುದಿಲ್ಲ. ಕರುಣ ರಸ ಮತ್ತು ಭಕ್ತಿ ರಸ, ಶ್ರೀ ಪಾದರ ಕ್ಷಮೆಕೇಳುತ್ತಾ ಬರೆಯುತ್ತಾ ಇದ್ದೇನೆ. ಅವೆರಡರವರ weakness. ಇದು ಯಾಕೆನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು. ಅದಕ್ಕಾಗಿಯೇ ಮೇಲೆ ಹೇಳಿದ್ದು ಮಾನವಶ್ರೇಷ್ಟನೆಂದು. ಜರ್ಮನಿಯ ಸೌಂದರ್ಯಶಾಸ್ತ್ರಜ್ಞ ಆಡಮ್ ಮುಲ್ಲರ್ ಮಹಾಶಯ ಹೇಳುವಂತೆ ಎರಡು ವಿಧದ ಸೌಂದರ್ಯಗಳಿವೆ. ಒಂದು ಸಾಮಾಜಿಕ. ಇನ್ನೊಂದು ವೈಯಕ್ತಿಕ. ಸಾಮಾಜಿಕ ಸೌಂದರ್ಯಶಾಸ್ತ್ರದ ಪ್ರಕಾರ ಸೌಂದರ್ಯವು ಜನರನ್ನು ಸೂರ್ಯ ಗ್ರಹರನ್ನಾಕರ್ಷಿಸಿದಂತೆ ಆಕರ್ಷಿಸುತ್ತದೆ. ವೈಯಕ್ತಿಕ ಸೌಂದರ್ಯಶಾಸ್ತ್ರದಲ್ಲಿ ತಾನೇನನ್ನು ಯೋಚಿಸುತ್ತೇನೆಯೋ ಅದೇ ತಾನಾಗುವಂತೆ. ಶ್ರೀ ಪಾದರ ಭಕ್ತಿ ರಸ ಕೇಳುವಾಗ ಈ ತತ್ವ ನೆನಪಾಗುತ್ತದೆ.
ಭರತಾಗಮನ ಪ್ರಸಂಗದಲ್ಲಿ ಭರತ -ರಾಮರ ಸಂವಾದದ ಹಾಡುಗಳನ್ನು ಮನೋಜ್ಞವಾಗಿ ಪ್ರಸ್ತುತ ಪಡಿಸುತ್ತಾರೆ. ಶ್ರೀ ಪಾದರಿಗೆ ತುಂಬಾ ಪ್ರಿಯವಾದ ಪ್ರಸಂಗವೂ ಹೌದು. ಇಲ್ಲಿ ಗಾನದೊಂದಿಗೊಂದಾಗುತ್ತಾರೆ. ತಾವು ಬೇರೆಯಲ್ಲ ಗಾನ ಬೇರೆಯಲ್ಲವೆಂಬ ತಾದಾತ್ಮ್ಯ ಕಾಣಸಿಗುತ್ತದೆ. ಶ್ರೀ ಪಾದರ ಗಾನದಲ್ಲಿ ಅಥವಾ ಭಾಗವತಿಕೆಯಲ್ಲಿರುವ ಶ್ರದ್ಧೆ ಅನುಸರಣೀಯ ಮತ್ತು ಅಧ್ಯಯನ ಯೋಗ್ಯವೂ ಕೂಡ. ಕೇವಲ ಶ್ರೀ ಮಠದಲ್ಲಿ ಮಾತ್ರ ಜಾಗಟೆ ಹಿಡಿಯುವ ಶ್ರೀ ಪಾದರು ಪ್ರದರ್ಶನದ ನಿರ್ವಹಣೆಯಲ್ಲಿ ತೋರುವ ಅಪರಿಮಿತ ಶ್ರದ್ಧೆ ಪದ್ಯದ ಆಯ್ಕೆಯಿಂದ ತೊಡಗಿ ಅವುಗಳನ್ನು ತಮ್ಮದೇ ಹಸ್ತಾಕ್ಷರದಲ್ಲಿ ಕಾಗದದಲ್ಲಿ ಬರೆದು, ಕ್ರಮಸಂಖ್ಯೆಯೊಡನೆ, ಕಲಾವಿದರ ಅವಗಾಹನೆಗೆ ಕೊಟ್ಟರೆ ಮುಗಿಯಿತು! ಅದರಲ್ಲೊಂದು ಪದ ತಪ್ಪಿದರೂ ಆಗುವ ಬೇಸರ ಶ್ರೀ ಪಾದರಲ್ಲಿ ಕಲೆಯಲ್ಲಿರುವ ಅಸಾಧಾರಣ ಅನ್ಯಾದೃಶ ಪ್ರೀತಿ ವ್ಯಕ್ತವಾಗುತ್ತದೆ. ಕಲಾವಿದರ ಆಯ್ಕೆ, ಪಾತ್ರ ಹಂಚೊಣ, ಅರ್ಥವನ್ನು ಹೇಳುವಾಗ ತೋರುವ ಸ್ಪಂದನ, ಓರೆಗಣ್ಣಿಂದ ಜಿನುಗುವ ಭಾವಪಣೂರ್ಣ ಕಿರುನಗು, ಪಾತ್ರಧಾರಿ ರಂಗ ನಡೆಯಲ್ಲೊ ಅರ್ಥಗಾರಿಕೆಯಲ್ಲೋ ತಪ್ಪಿದರೆ ಆಗುವ ಬೇಸರ, ಭಾಗವತರಾಗಿ ಶ್ರೀ ಪಾದರು ರಂಗದ ಮೇಲೆ ಇಡುವ ಹಿಡಿತ ಇವೆಲ್ಲ ಅನ್ಯತ್ರ ಅಲಭ್ಯ.
ಶ್ರೀಪಾದರ ಗಾಯನ ಶೈಲಿ ಯಕ್ಷಗಾನದ ಅಭಿಜಾತೀಯ ಅಂಶಗಳನ್ನು ಗಮನದಲ್ಲಿರಿಸಿಕೊಂಡಿರುವ ತಮ್ಮದೇ ಆದ ಮನೋಧರ್ಮೀಯತೆಯನ್ನು ಒಳಗೊಂಡಿದೆ. ಅತೀ ದೀರ್ಘವೂ ಅಲ್ಲದ ಗಾಯನ ಪದ್ದತಿಯಲ್ಲಿ ರಸ ಭರಿತ ಮೌನವು ಗಂಭೀರವಾಗಿ ಸಮಾವೇಶಗೊಳ್ಳುತ್ತದೆ. ವಾದಕನಂತೂ ಅತೀ ಜಾಗರೂಕತೆಯಿಂದ ನುಡಿಸಬೇಕು. ಅಷ್ಟು ಸೂಕ್ಷ್ಮವಾದ ಪ್ರಸ್ತುತಿ ಶ್ರೀ ಪಾದರದ್ದು. ಕರ್ಣಾಟಕೀ ಮತ್ತು ಹಿಂದುಸ್ತಾನೀ ಸಂಗೀತ ಪದ್ದತಿ ಎರಡರಲ್ಲೂ ಪ್ರವೇಶವಿರುವ ಶ್ರೀ ಪಾದರು ಅವುಗಳ ಛಾಯೆಯನ್ನು ಯಕ್ಷಗಾನದಲ್ಲೂ ತೋರಿಸುತ್ತಾರೆ. ಶ್ರೀ ಪಾದರು ಚೆನ್ನಾದ ಹರಿಕಥಾ ಸಂಕೀರ್ತನಕಾರ ಮಾತ್ರವಲ್ಲದೆ ಹೃದ್ಯವಾದ ಹಾಡುಗಬ್ಬಗಳನ್ನೂ ಕನ್ನಡ, ಹಿಂದಿ, ತುಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ರಚಿಸಿದ್ದಾರೆ. ಕವಿಗಳೂ ಹೌದು.
ಹಾರ್ಟ್ಮೆನ್ ಹೇಳುವಂತೆ “beauty is not in the external world, not in the thing in itself, nor in the soul of man, but in the semblense produced by the artist. A thing is not beautiful in itself, but the artist transforms it into beauty”.(ಸೌಂದರ್ಯವಿರುವುದು ಹೊರಪ್ರಪಂಚದಲ್ಲಲ್ಲ. ವಸ್ತುವಿನಲ್ಲೂ ಅಲ್ಲ, ಆಂತರ್ಯದಲ್ಲಿ ಅಲ್ಲ. ಅದಿರುವುದು ಕಲಾವಿದ ಹುಟ್ಟಿಸುವ ಸಾದೃಶ್ಯದಲ್ಲಿ. ವಸ್ತು ಅದಾಗಿಯೇ ಸುಂದರವಲ್ಲ. ಕಲಾವಿದ ಅದನ್ನು ಸುಂದರವನ್ನಾಗಿ ಮಾರ್ಪಡಿಸುತ್ತಾನೆ.).
ಗಾನಕ್ಕೆ ಶ್ರೀ ಪಾದರು ತುಂಬುವ ಸೌಂದರ್ಯ ಅವರ ಅತ್ಯುನ್ನತ ಆಲೋಚನೆಯಿಂದ ಒಡಮೂಡಿದ್ದಾಗಿದೆ. ಕಲೆಯ ಅತ್ಯುನ್ನತ ನೆಲೆಯೆಂದರೆ ಜೀವನದ ಕಲೆ. ಅಂಥಾ ಕಲೆಯ ಬಗ್ಗೆ, ಕಲಾವಿದರ ಬಗೆಗಿನ ಶ್ರೀಗಳ ಪ್ರೀತಿಯನ್ನು ವಿವರಿಸಲಾಸಾಧ್ಯ. ಯಕ್ಷಗಾನ ಕಲಾವಿದರಿಗೆ ಯಾವ ಮಠಗಳೂ ಪ್ರವೇಶವೇ ನೀಡದ ಕಾಲದಲ್ಲಿ ಅವರಿಗೆ ಮಠಾಧೀಶರಾಗಿಯೂ ಪ್ರೇಮದ ಅಮೃತಧಾರೆ ಹರಿಸಿದವರವರು. ಯಕ್ಷಗಾನ ಕಲಾವಿದರನ್ನು ಮಠದೊಳಗೆ ಬಿಟ್ಟುಕೊಂಡದ್ದಷ್ಟೇ ಅಲ್ಲ… ಅವರ ಊಟೋಪಚಾರದ ವ್ಯವಸ್ಥೆಗೂ ಶ್ರೀಗಳು ಸ್ವತಃ ಸಿದ್ಧರಾಗುತ್ತಿದ್ದರು. ಅದೆಷ್ಟೋ ಕಲಾವಿದರಿಗೆ ಭರವಸೆಯ ಬೆಳಕು. ಕಷ್ಟ ಎಂದು ಬಂದು ಕಣ್ಣೀರುಗರೆದ ಯಾವೊಬ್ಬ ವ್ಯಕ್ತಿಯೂ ಕನಿಷ್ಠ ಕಷ್ಟದ ಪರಿಹಾರವಿರದೇ ಮಠದಿಂದ ಹೊರಹೋಗಿದ್ದೇ ಇಲ್ಲ. ಕಲಾವಿದರು ಹಣಕಾಸಿನ ಕಷ್ಟದಲ್ಲಿದ್ದರೆ ಶ್ರೀಗಳು ಕೂಡಲೇ ಕಲಾವಿದರ ಮನೆಗೆ ಒಂದು ಮೊತ್ತದ ಹಣವನ್ನು ಕಳುಹಿಸಿಕೊಡುತ್ತಿದ್ದರು.ಅಂತಹ ತಾಯಿಪ್ರೀತಿಯ ಕರುಣಾಮಯಿ ಎಡನೀರು ಕೇಶವಾನಂದ ಭಾರತೀ ಶ್ರೀಗಳು.
ಆದರೆ ಯಕ್ಷಗಾನದ ವಿಚಾರಕ್ಕೆ ಬಂದರೆ ಅಷ್ಟೇ ಕಟ್ಟುನಿಟ್ಟು. ತಮ್ಮ ಎಡನೀರು ಮೇಳದ ಯಕ್ಷಗಾನದಲ್ಲಿ ಕೇವಲ ಪೌರಾಣಿಕ ಪ್ರಸಂಗ ಮಾತ್ರವಿರಬೇಕೆಂಬ ನಿಯಮವನ್ನು ಜಾರಿಮಾಡುವುದರ ಮೂಲಕ ಈ ನೆಲದ ಮೌಲ್ಯ ಉಳಿಸಲು ಟೊಂಕ ಕಟ್ಟಿದ ಮಹಾ ಕಲಾತಪಸ್ವಿ ಅವರು.
ಶ್ರೀ ಪಾದರ ಒಟ್ಟು ಜೀವನ ಸಾತ್ವಿಕ ಸೌಂದರ್ಯದಿಂದ ಕೂಡಿರುವುದ್ದಾಗಿದೆ. ಅದು ಅವರು ಆರಾಧಿಸುವ ದಕ್ಷಿಣಾಮೂರ್ತಿ- ಗೋಪಾಲಕೃಷ್ಣ ದೇವರ ಪೂಜೆಯಲ್ಲೂ ಕಲಾಪೂರ್ಣವಾಗಿ ಬಿಂಬಿತವಾಗುತ್ತದೆ. ಶ್ರುತಿ ಬದ್ಧವಾಗಿ ಪಠಿಸುವ ವೇದ ಸೂಕ್ತಗಳು, ಲಾಲಿತ್ಯದಿಂದ ಗೋಪಾಲಕೃಷ್ಣ ದೇವರಿಗರ್ಪಿಸುವ ವಿಷ್ಣುಸಹಸ್ರನಾಮ ಸಹಿತ ಅರ್ಚನೆ ಇವೆಲ್ಲದರಲ್ಲಿಯೂ ಶ್ರೀ ಪಾದರಲ್ಲಿರುವ ಕಲಾವಿದತ್ವ ಇಣುಕುತ್ತಾ ದೇವರ ಸೇವೆಗೈಯುತ್ತಾ ಇರುತ್ತದೆ. ದೇವರಿಗೆ ತೋರುವ ಆರತಿಗಳಲ್ಲಿರುವ ಲಯ ಬದ್ಧತೆ, ಸೌಂದರ್ಯ ಭಕ್ತ ಜನರಲ್ಲಿ ಕೃತಾರ್ಥತೆಯ ಭಾವ ಉದ್ದೀಪಿಸುತ್ತದೆ.
ಇದಿಷ್ಟನ್ನು ಶ್ರೀ ಪಾದರಂತರ್ಯಾಮಿ ಗೋಪಾಲಕೃಷ್ಣ ದೇವರಿಗೆ ಅರ್ಪಿಸುತ್ತೇನೆ.
ಚಾರಿತ್ರಿಕ ಮೂಲಭೂತ ಹಕ್ಕು ಮೊಕದ್ದಮೆ:
ಸ್ವತಂತ್ರ ಭಾರತದ ಇತಿಹಾಸದಲ್ಲೇ ಚಾರಿತ್ರಿಕವಾಗಿ ಅತ್ಯಂತ ಮಹತ್ವ ಪಡೆದ ಮೊಕದ್ದಮೆಗಳಲ್ಲಿ ಅಗ್ರಮಾನ್ಯವಾದುದು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ vs. ಸ್ಟೇಟ್ ಆಫ್ ಕೇರಳ. ಶ್ರೀಮದೆಡನೀರು ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ಹೂಡಿದ ಮೊಕದ್ದಮೆ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠದವರೆಗೂ ತಲುಪಿ, ಹದಿಮೂರು ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ತೀರ್ಮಾನಗೊಂಡ ಮೊಕದ್ದಮೆ ಇದಾಗಿದೆ.ಆ ಹದಿಮೂರು ನ್ಯಾಯಮೂರ್ತಿಗಳು : ಮುಖ್ಯ ನ್ಯಾಯಮೂರ್ತಿ ಎಸ್.ಎಮ್.ಸಿಕ್ರಿ, ನ್ಯಾ.ಮೂ.ಜೆ.ಎಮ್.ಶೇಲಟ್,ನ್ಯಾ.ಮೂ.ಕೆ.ಎಸ್.ಹೆಗ್ಡೆ, ನ್ಯಾ.ಮೂ.ಎ.ಎನ್.ಗ್ರೋವರ್,ನ್ಯಾ.ಮೂ.ಎ.ಎನ್.ರೇ, ನ್ಯಾ.ಮೂ.ಜಗನ್ಮೋಹನ್ ರೆಡ್ಡಿ, ನ್ಯಾ.ಮೂ.ಡಿ.ಜಿ.ಪಲೆಕರ್, ನ್ಯಾ.ಮೂ.ಹೆಚ್.ಆರ್.ಖನ್ನಾ, ನ್ಯಾ.ಮೂ.ಕೆ.ಕೆ.ಮಾಥ್ಯ್ಯೂ, ನ್ಯಾ.ಮೂ.ಎಮ್.ಹೆಚ್ .ಬೆಗ್, ನ್ಯಾ.ಮೂ.ಎಸ್.ಎನ್. ದ್ವಿವೇದಿ, ನ್ಯಾ.ಮೂ. ಎ.ಕೆ. ಮುಖರ್ಜಿಯಾ, ನ್ಯಾ.ಮೂ. ವೈ.ವಿ.ಚಂದ್ರಚೂಡ್. ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಅತಿ ಹೆಚ್ಚು ನ್ಯಾಯಮೂರ್ತಿಗಳ (೧೩)ಸಮ್ಮುಖ ತೀರ್ಮಾನಗೊಂಡ ಐತಿಹಾಸಿಕ ಮೊಕದ್ದಮೆ. ಮಾತ್ರವಲ್ಲ, ಬರೋಬ್ಬರಿ ಅರವತ್ತಾರು ದಿನಗಳ ಕಾಲ ಸಾವಧಾನವಾಗಿ ಅಹವಾಲು, ವಾದಗಳನ್ನು ನ್ಯಾಯಪೀಠದಿಂದ ಆಲಿಸಲ್ಪಟ್ಟ ಮೊಕದ್ದಮೆ ಇದು. ಭಾರತ ಕಂಡ ಶ್ರೇಷ್ಠ ನ್ಯಾಯವಾದಿಗಳೆಲ್ಲ ಈ ಮೊಕದ್ದಮೆಯಲ್ಲಿ ವಾದಿಸಿದ್ದಾರೆ.ಕೇರಳ ಸರಕಾರದ ಪರವಾಗಿ ಭಾರತ ದೇಶ ಕಂಡ ಶ್ರೇಷ್ಠ ಸಂವಿಧಾನ ತಜ್ಞ ಹೆಚ್. ಎಮ್.ಸೀರ್ವಾಯಿ ಮತ್ತು ನಿರೇನ್ ಡೇ, ಭಾರತ ಸರಕಾರದ ಅಟೋರ್ನಿ ಜನರಲ್ ವಾದಿಸಿದರು. ಮೊಕ್ಕದ್ದಮೆ ಹೂಡಿದವರ ಪರವಾಗಿ ಭಾರತ ದೇಶ ಕಂಡ ಐಕಾನಿಕ್ ನ್ಯಾಯವಾದಿಗಳಾದ ನಾನಿ ಫಾಲ್ಕಿವಾಲ ವಾದಿಸಿದ್ದರು. ಈ ಕೇಸ್ ನಿಂದ ಹೊರಬಂದ ತೀರ್ಮಾನದ ಬಹು ಮುಖ್ಯ ತಿರುಳೇನೆಂದರೆ ಸಂಸತ್ತು ಯಾವುದೇ ಸಂದರ್ಭದಲ್ಲೂ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಸಂವಿಧಾನದ ಮೂಲರೂಪ ಅಥವಾ ಮೂಲಧ್ಯೇಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದು.
***
ಒಂದು ದೃಷ್ಟಿಯಿಂದ ನೋಡಿದಾಗ ಅರಿವಾಗುತ್ತದೆ ಎಡನೀರು ಶ್ರೀಗಳಾದ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀಪಾದಂಗಳವರು ಹೂಡಿದ ಈ ಮೊಕದ್ದಮೆಯ ತೀವ್ರತೆ ಎಷ್ಟಿತ್ತೆಂದರೆ ಭಾರತದ ಸಂಸತ್ತು ಮತ್ತು ಸರ್ವೋಚ್ಚ ನ್ಯಾಯಾಲಯದ ನಡುವೆ ಸಂವಿಧಾನಕ್ಕೆ ತಿದ್ದುಪಡಿ ತರಲು ಯಾರು ಅಧಿಕಾರವುಳ್ಳವರು ಅಥವಾ ಅರ್ಹರು ಎಂಬಷ್ಟರ ಮಟ್ಟಿಗೆ ತಲುಪಿತ್ತು. 1967ರ ಗೋಲಕ್ ನಾಥ್ vs. ಪಂಜಾಬ್ ಸರಕಾರದ ಮೊಕದ್ದಮೆಯಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಮಾನಿಸಿದಂತೆ ಮೂಲಭೂತ ಹಕ್ಕುಗಳನ್ನು ಬದಲಾಯಿಸಲು ಸಂಸತ್ತಿಗೆ ಸಾಧ್ಯವಿಲ್ಲ ( could not be amended) ಎಂಬ ತೀರ್ಪನ್ನು ಅಂದಿನ ಸರಕಾರ ಸಾಧ್ಯವಾದಷ್ಟು ಮಟ್ಟಿಗೆ ರದ್ದುಪಡಿಸಲು ನ್ಯಾಯಾಲಯದ ಹೊರಗೆ ಮತ್ತು ಒಳಗಿನ ಪ್ರಯತ್ನದಿಂದ ಯತ್ನಿಸುತ್ತಾ ಇತ್ತು. ಆ ಪ್ರಯತ್ನದ ಪ್ರಮುಖ ಘಟ್ಟವೇ ಈ ಶ್ರೀ ಶ್ರೀ ಕೇಶವಾನಂದ ಭಾರತಿ ಮೊಕದ್ದಮೆಯ ಅರವತ್ತಾರು ದಿನಗಳ ಸರ್ವೋಚ್ಚ ನ್ಯಾಯಾಲಯದ ಮುಂದಿನ ಅಹವಾಲು. ದಿನಾಂಕ 24.4.1973 ರಂದು 7 ನ್ಯಾಯಮೂರ್ತಿಗಳು ಅರ್ಜಿದಾರರ ಪರವಾಗಿ ತೀರ್ಪನ್ನು ಕೊಟ್ಟರೆ ಉಳಿದ ಆರು ನ್ಯಾಯಮೂರ್ತಿಗಳು ವಿರುದ್ದ ತೀರ್ಪನ್ನಿತ್ತು ಅರ್ಜಿದಾರರ ಅರ್ಜಿಯನ್ನು ಎತ್ತಿಹಿಡಿದರು. ಅಂದು ಕೊಟ್ಡ ತೀರ್ಮಾನ “ Article 368 does not enable Parliament to alter the basic structure or framework of the constitution”. ಈ ತೀರ್ಪು ಭಾರತದ ಸಂವಿಧಾನದ ಭದ್ರತೆಗೆ ಭದ್ರ ಬುನಾದಿಯಾಯಿತು. ಭಾರತದ ಜನತೆಯ ಮೂಲಭೂತ ಹಕ್ಕುಗಳ ರಕ್ಷಣೆಗೆ ಕವಚದೋಪಾದಿಯಲ್ಲುಳಿಯಿತು.
***
ಈ ತೀರ್ಪನ್ನು ಕೊಟ್ಟ ಏಳು ನ್ಯಾಯಮೂರ್ತಿಗಳಲ್ಲಿ ಮೂವರನ್ನು ಅವರ ಸೇವಾ ಹಿರಿತನವನ್ನು ನಿರ್ಲಕ್ಷಿಸಿ ಶ್ರೇಷ್ಟ ನ್ಯಾಯಮೂರ್ತಿಗಳಾದ ಸಿಕ್ರಿಯವರ ಸೇವಾವಧಿಯ ಅನಂತರ ಆ ಮೂವರಿಗಿಂತಲೂ ಕಿರಿಯರಾದ ನ್ಯಾಯಮೂರ್ತಿ( ಸರಕಾರದ ಪರವಾಗಿ ತೀರ್ಪನ್ನು ಕೊಟ್ಟವರು) ಯವರನ್ನು ಶ್ರೇಷ್ಟ ನ್ಯಾಯಮೂರ್ತಿಗಳನ್ನಾಗಿ ರಾಷ್ಟ್ರಪತಿಗಳ ಮೂಲಕ ಸರ್ಕಾರ ನೇಮಿಸಿತು. ಮುಂದೆ ಸರ್ಕಾರ ಕೇಶವಾನಂದ ಭಾರತಿ ತೀರ್ಪನ್ನು ರದ್ದುಪಡಿಸಲು ಪ್ರಯತ್ನ ಪಟ್ಟಿದೆ-ಸಂವಿಧಾನಕ್ಕೆ ತಿದ್ದುಪಡಿ ತಂದು ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರುವಂತಹಾ ಅಧಿಕಾರ ಸಂಸತ್ತಿಗೆ ಕೊಡುವಂತಹದ್ದು. 1976 ಸಂವಿಧಾನದ 42ನೆಯ ತಿದ್ದುಪಡಿಯ ಮೂಲಕ ಆರ್ಟಿಕಲ್ 368 ನ್ನು ತಿದ್ದುಪಡಿ ಮಾಡುವ ಮೂಲಕ ಶ್ರೀ ಶ್ರೀ ಕೇಶವಾನಂದ ಭಾರತಿ ಮೊಕದ್ದಮೆಯನ್ನು ರದ್ದುಮಾಡುವ ಪ್ರಯತ್ನ ಮಾಡಲಾಯಿತು ಮತ್ತು ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮೂಲಭೂತ ಹಕ್ಕುಗಳ ಬಗೆಗೆ ಪರಮೋಚ್ಛ ಅಧಿಕಾರ ಕೊಡಲಾಯಿತು. ಮಾತ್ರವಲ್ಲ ನ್ಯಾಯಾಲಯವೂ ಕೂಡ ಅದನ್ನು ಪರಾಮರ್ಶಿಸುವ ಅಧಿಕಾರ ಇಲ್ಲದಂತೆ ಮಾಡಲಾಯಿತು. ಈ ತಿದ್ದುಪಡಿ 1980 ರ ವರೆಗೂ ಊರ್ಜಿತದಲ್ಲಿತ್ತು. ಆದರೆ ಶ್ರೀ ಶ್ರೀ ಕೇಶವಾನಂದ ಭಾರತಿ ತೀರ್ಪಿನ ಅಂತಃಸತ್ವ ಹಾಗಿತ್ತು ನೋಡಿ. ಮುಂದೆ ಮಿನರ್ವಾ ಮಿಲ್ಸ್ vs. ಭಾರತ ಸರ್ಕಾರ ಮೊಕದ್ದಮೆಯಲ್ಲಿ ಈ ತಿದ್ದುಪಡಿಯನ್ನು ರದ್ದುಗೊಳಿಸಿತು ಮತ್ತು ಸಂಸತ್ತಿಗೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಕೇವಲ ಸೀಮಿತವಾದ ಅಧಿಕಾರ ಮಾತ್ರವೇ ಇರುವುದು ಮತ್ತು ಸಂವಿಧಾನದ ಮೂಲಭೂತ ರಾಚನಿಕ ವಿನ್ಯಾಸವನ್ನು ಭೇದಗೊಳಿಸಲು ಅಥವಾ ಬದಲಾಯಿಸಲು ಸಂಸತ್ತಿಗೆ ಯಾವತ್ತೂ ಅಧಿಕಾರವಿರದು ಎಂಬ ತೀರ್ಮಾನವನ್ನು ಕೊಟ್ಟು ಶ್ರೀ ಶ್ರೀ ಕೇಶವಾನಂದ ಭಾರತಿ ತೀರ್ಪಿಗೆ ರಕ್ಷಣೆಯನ್ನು ಸಾಂವಿಧಾನಿಕ ನ್ಯಾಯದ ರಕ್ಷೆಯನ್ನು ಕೊಟ್ಟಿತು. ಮುಂದೆ ಇಲ್ಲಿ ಹೇಳಿದ basic structure ಅಥವಾ ಮೂಲಭೂತ ರಾಚನಿಕ ವಿನ್ಯಾಸ ಸಂವಿಧಾನಕ್ಕೆ ಆಧಾರಸೂತ್ರವಾಗಿಹೋಯಿತು. ಅದು ಸ್ವಯಂವೇದ್ಯವಾಗುವಂತಹಾ ಪರಿಕಲ್ಪನೆಯಾಯಿತು.
***
ಗ್ರೇನಿವಲ್ ಆಸ್ಟಿನ್ ಎಂಬವರು ರಚಿಸಿದ ಹೊತ್ತಗೆ Working a Democratic Constitution- The Indian Experience. ಭಾರತದ ಸಂವಿಧಾನ ರಚಿಸುವಾಗಿನ ಘಟನಾವಳಿ ಮತ್ತು ಅಲ್ಲಿ ನಡೆದ ನಡಾವಳಿಗಳ ಚಿತ್ರಣ ಈ ಪುಸ್ತಕದಲ್ಲಿ ಹೇಳಲ್ಪಟ್ಟಿದೆ. ಅಲ್ಲಿ ಪೂಜ್ಯ ಕೇಶವಾನಂದ ಭಾರತಿ ಮೊಕದ್ದಮೆಯ ಬಗೆಗಿನ ಸಾಲುಗಳು ಈ ಕೆಳಗಿನಂತಿವೆ.
“ The Bench’s glory was in its decision, not in the manner of arriving at it, which reflected I’ll on itself and on the judiciary as an institution . the hearing consumed five months. The Judges’ deberation process was bizarre. Their individual opinions were chaotically articulated. The relations of one or more judges with the executive branch during the case were thought to have been improper. As one judge ( Justice Chandrachud) understatedly put it, the case was ‘ full of’ excitement and unusual happenings’”.
ಕೆಲವೊಂದು ವ್ಯಕ್ತಿತ್ವಗಳಿರುತ್ತವೆ. ಆ ವ್ಯಕ್ತಿತ್ವಗಳ ಇನ್ನಿಲ್ಲ ಎಂದಾದಾಗ ಮಾತ್ರ ಆ ವ್ಯಕ್ತಿತ್ವ ನಿರ್ಮಿಸಿ ಹೋದ ಶೂನ್ಯ ಎಂಥದ್ದೆಂದು ಅರಿವಾಗುತ್ತದೆ. ಶ್ರೀಶ್ರೀ ಕೇಶವಾನಂದ ಭಾರತಿಯವರದ್ದೂ ಅಂಥದ್ದೇ ಒಂದು ವ್ಯಕ್ತಿತ್ವ. ಅದೆಷ್ಟೋ ಯಕ್ಷ ಕಲಾವಿದರ ಪೋಷಕರೂ, ಆಶ್ರಯದಾತರೂ ಆಗಿದ್ದ ಶ್ರೀಗಳು ಹೀಗೆ ಎಲ್ಲವನ್ನೂ ಬಿಟ್ಟು ಹೋಗಿದ್ದು ಒಂದು ರೀತಿಯ ಅನಾಥಭಾವವನ್ನಂತೂ ಮೂಡಿಸಿದೆ. ಆದರೆ ಕಾಲನಿರ್ಣಯಕ್ಕೆ ಎದುರಿಲ್ಲ. ಆದರೆ ಅಂಥ ಮಹಾನ್ ಚೇತನವನ್ನು ಅಕ್ಷರನಮನದ ಮೂಲಕ ಅಜರಾಮರವಾಗಿಡುವುದು ಸಾಧ್ಯವಿದೆ. ಗುರುವೇ ನಿಮಗಿದೋ ನಮ್ಮ ಕಂಬನಿದುಂಬಿದ, ಕೃತಜ್ಞತಾ ಪೂರ್ವಕ ನಮನ.
ಕೃಷ್ಣಪ್ರಕಾಶ ಉಳಿತ್ತಾಯ