ಹೊಸದಿಲ್ಲಿ, ಮೇ 25 : ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಗರಂ ಆಗಿದ್ದಾರೆ. ಭಾನುವಾರ ಮಹಾರಾಷ್ಟ್ರದ ಮುಖ್ಯ ಮಂತ್ರಿ ಉದ್ಧವ್ ಠಾಕ್ರೆ ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಭಾರತೀಯ ರೈಲ್ವೆ ಇಲಾಖೆ ಸಮರ್ಪಕವಾದ ರೈಲುಗಳನ್ನು ವ್ಯವಸ್ಥೆ ಮಾಡಿಲ್ಲ ಎಂದು ಹರಿಹಾಯ್ದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರಕ್ಕೆ ಸಂಬಂಧ ಪಟ್ಟ 125 ರೈಲುಗಳ ವಿವರ ಎಲ್ಲಿದೆ? ಈ ಪ್ರದೇಶದಿಂದ ಇಂದು ಬೆಳಿಗ್ಗೆ 46 ರೈಲುಗಳ ಪಟ್ಟಿ ಮಾತ್ರ ಬಂದಿದೆ. ಅದರಲ್ಲೂ 5 ರೈಲುಗಳು ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾಗೆ ಸೇರಿದ್ದು, ಅಂಫಾನ್ ಚಂಡಮಾರುತದಿಂದಾಗಿ ಅವುಗಳನ್ನು ರದ್ದುಪಡಿಸಲಾಗಿದೆ ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.ನೀವು ಒಂದು ಗಂಟೆಯೊಳಗೆ ಪ್ರಯಾಣಿಕರ ವಿವರಗಳನ್ನು ನಮಗೆ ಕಳುಹಿಸಿದರೆ, ನಾವು ಹಗಲು ರಾತ್ರಿ ಕಷ್ಟಪಟ್ಟಾದರೂ ಸರಿ ನಾಳಿನ ರೈಲು ವೇಳಾಪಟ್ಟಿಯನ್ನು ಮಾಡುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಟಾಂಗ್ ನೀಡಿದ್ದಾರೆ.
ಈ ಮೊದಲು 200 ರೈಲುಗಳ ವೇಳಾ ಪಟ್ಟಿಯನ್ನು ಮಹಾರಾಷ್ಟ್ರ ಸರ್ಕಾರ ಭಾರತೀಯ ರೈಲ್ವೆ ಇಲಾಖೆಗೆ ಕಳುಹಿಸಿತು ಮತ್ತು ನಂತರ ಅದನ್ನು ಸ್ಥಗಿತಗೊಳಿಸಿತ್ತು. ಇಂದು 125 ರೈಲುಗಳ ಬದಲಾಗಿ ಕೇವಲ 41 ರೈಲುಗಳ ಪಟ್ಟಿಯನ್ನು ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ನಡುವೆ ಮಾತಿನ ಸಮರ ನಡೆಯುತ್ತಿದೆ.