ಮಹಾ ಬಿಕ್ಕಟ್ಟು – ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದು ಬೀಗಿದ ಏಕನಾಥ್ ಶಿಂಧೆ
ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಶ್ವಾಸಮತ ಯಾಚನೆ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಶಾಸಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದಾರೆ.
ನೂತನ ಸರ್ಕಾರಕ್ಕೆ 164 ಶಾಸಕರ ಬೆಂಬಲ ಸೂಚಿಸಿದ್ದಾರೆ. ವಿರೋಧ ಪಕ್ಷಕ್ಕೆ 99 ಮತಗಳು ಚಲಾವಣೆಯಾಗಿವೆ. ಮತದಾನದ ವೇಳೆ 266 ಶಾಸಕರು ಹಾಜರಿದ್ದು, ಈ ಪೈಕಿ ಮೂವರು ಶಾಸಕರು ಮತದಾನ ಮಾಡಿಲ್ಲ. 21 ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದರು. ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರನ್ನ ವಿಧಾನಸಭಾಧ್ಯಕ್ಷರಾಗಿ ನಿನ್ನೆ ಆಯ್ಕೆಮಾಡಲಾಗಿತ್ತು.
ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಭವಿಷ್ಯ ನುಡಿದಿದ್ದಾರೆ. ಮುಂಬೈನಲ್ಲಿ ನಡೆದ ಎನ್ಸಿಪಿ ಶಾಸಕರ ಸಭೆಯಲ್ಲಿ ಪವಾರ್, “ಏಕನಾಥ್ ಶಿಂಧೆ ಅವರ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ 6 ತಿಂಗಳೊಳಗೆ ಬೀಳುತ್ತದೆ. ಮಧ್ಯಂತರ ಚುನಾವಣೆಗೆ ಎಲ್ಲರೂ ಸಿದ್ಧರಾಗಬೇಕು.” ಎಂದು ಹೇಳಿದ್ದಾರೆ.