ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಸದ್ಯದ ಮಾಹಿತಿಯಂತೆ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ರಾಜ್ಯದ 48 ಲೋಕಸಭಾ ಸ್ಥಾನಗಳ ಪೈಕಿ 20 ರಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 18, ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಘಟಕ ಇನ್ನಿತರ 10 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ ಎನ್ನಲಾಗುತ್ತಿದೆ.
ವಂಚಿತ್ ಬಹುಜನ ಆಘಾಡಿಯಂತಹ ಪ್ರಾದೇಶಿಕ ಪಕ್ಷಗಳು ಶಿವಸೇನೆಯಿಂದ ಎರಡು ಸ್ಥಾನ ಪಡೆಯಲಿದ್ದು, ಸ್ವತಂತ್ರ ಅಭ್ಯರ್ಥಿ ರಾಜು ಶೆಟ್ಟಿ ಅವರು ಪವಾರ್ ಬಣದಿಂದ ಟಿಕೆಟ್ ಪಡೆಯಲಿದ್ದಾರೆ.
ಶಿವಸೇನೆಯು ಮುಂಬಯಿನ 6 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸ್ಪರ್ಧಿಸಲಿದೆ ಎನ್ನಲಾಗುತ್ತಿದೆ. ಸಿಎಂ ಏಕನಾಥ್ ಶಿಂಧೆ ಮತ್ತು ಶಿವಸೇನೆ ಸಂಸದರ ನಡುವೆ ಮಹತ್ವದ ಸಭೆ ನಡೆದಿದೆ. ಇದಾದ ನಂತರ, ಮಹಾರಾಷ್ಟ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ 18 ಸ್ಥಾನಗಳಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ 22 ಸ್ಥಾನಗಳಲ್ಲಿ ಸ್ಪರ್ಧಿಸಿ, 18ರಲ್ಲಿ ಗೆಲುವು ಸಾಧಿಸಿತ್ತು. ಆದರೆ, 2022ರಲ್ಲಿ ಶಿವಸೇನೆಯಲ್ಲಿನ ವಿಭಜನೆಯ ನಂತರ, 13 ಸಂಸದರು ಶಿಂಧೆ ಅವರನ್ನು ಸೇರಿಕೊಂಡರು ಹಾಗೂ ಐವರು ಉದ್ಧವ್ ಠಾಕ್ರೆ ನೇತೃತ್ವದ ವಸೇನೆ (ಯುಬಿಟಿ) ಯಲ್ಲಿ ಉಳಿದರು.