ಜೈ ಟೀಮ್ ಇಂಡಿಯಾ… ಜೈ ಜವಾನ್… ಈಗ ಜೈ ಕಿಸಾನ್… ಇದು ಧೋನಿಯ ಬದುಕಿನ ಮಂತ್ರ..!
ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಮಾಜಿ ನಾಯಕ. ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಟೀಮ್ ಇಂಡಿಯಾದ ತ್ರಿವರ್ಣ ಧ್ವಜವನ್ನು ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ಇನ್ನು ದೇಶ ಭಕ್ತಿಯ ವಿಚಾರದಲ್ಲಿ ಧೋನಿ ಒಂದು ಹೆಜ್ಜೆ ಮುಂದೆನೇ ಇರುತ್ತಾರೆ. ದೇಶದ ಸೈನಿಕರ ವಿಚಾರದಲ್ಲೂ ಅಷ್ಟೇ.. ಪ್ರತಿ ವರ್ಷ ಕೆಲವು ದಿನಗಳ ತನಕ ಸೈನಿಕರ ಜೊತೆ ಕಾಲ ಕಳೆಯುವ ಧೋನಿ ತನಗೆ ಸೇನೆಯಲ್ಲಿ ನೀಡಿರುವ ಹುದ್ದೆಗೆ ಗೌರವ ನೀಡುತ್ತಿದ್ದಾರೆ.
ಇದೀಗ ಧೋನಿ ರೈತರತ್ತ ಮುಖ ಮಾಡಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಪ್ರೇರಣೆ ನೀಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕೆ ಅಂದಿದ್ದು ಜೈ ಟೀಮ್ ಇಂಡಿಯಾ.. ಜೈ ಜವಾನ್… ಜೈ ಕಿಸಾನ್. ಅಂತ.
ಅಷ್ಟಕ್ಕೂ ಧೋನಿ ಮಾಡಿದ್ದಾದ್ರೂ ಏನು ? ಹೌದು, ಕಳೆದ ಒಂದು ವರ್ಷದಿಂದ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಐಪಿಎಲ್ಗೆ ಸಿದ್ಧತೆ ಮಾಡಿಕೊಂಡಿದ್ದರೂ ಕೋವಿಡ್-19 ಅಡ್ಡಿಯನ್ನುಂಟು ಮಾಡಿತ್ತು. ನಂತರ ಲಾಕ್ ಡೌನ್. ಅಂದ ಹಾಗೇ, ಲಾಕ್ ಡೌನ್ ಟೈಮ್ ಬಹುತೇಕ ಕ್ರಿಕೆಟಿಗರು ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿದ್ದರು. ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.
ಆದ್ರೆ ಧೋನಿ ವಿಭಿನ್ನವಾಗಿ ಲಾಕ್ ಡೌನ್ ಟೈಮ್ ಬಳಸಿಕೊಂಡಿದ್ದಾರೆ. ನೀವು ನೋಡಿರಬಹುದು… ಕೇಳಿರಬಹುದು.. ಧೋನಿ ಸಾಮಾಜಿಕ ಜಾಲ ತಾಣದಿಂದಲೂ ದೂರವೇ ಉಳಿದುಕೊಂಡಿದ್ದರು. ಹಾಗಿದ್ರೆ ಧೋನಿ ಲಾಕ್ ಡೌನ್ ಟೈಮ್ ನಲ್ಲಿ ಮಾಡಿದ್ದೇನು ? ಧೋನಿ ಹೊಸ ಟ್ರ್ಯಾಕ್ಟರ್ ಖರೀದಿಸಲು ಕಾರಣವೇನು ? ಕ್ರಿಕೆಟ್. ಜಾಹಿರಾತು ಲೋಕದಿಂದ ಧೋನಿ ದೂರ ಉಳಿಯಲು ಕಾರಣವೇನು ? ಈ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
ಹೌದು, ಧೋನಿ ಪಕ್ಕಾ ರೈತನಾಗಿದ್ದಾರೆ. ರಾಂಚಿಯ ಫಾರ್ಮ್ ಹೌಸ್ ನಲ್ಲಿ ರೈತನಂತೆ ಕೆಲಸ ಮಾಡುತ್ತಿದ್ದಾರೆ. ಸುಮಾರು 40-50 ಎಕರೆ ಜಾಗದಲ್ಲಿ ಧೋನಿ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ತನ್ನ ಫಾರ್ಮ್ ಹೌಸ್ ನಲ್ಲಿ ಧೋನಿ ಪಪ್ಪಾಯಾ, ಬಾಳೆಗಿಡ ಸೇರಿದಂತೆ ನಾನಾ ರೀತಿಯ ಸಾವಯವ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರೈತರಿಗಾಗಿ ಹೊಸ ಸಾವಯವ ಗೊಬ್ಬರವನ್ನು ತಯಾರು ಮಾಡುತ್ತಿದ್ದಾರೆ. ಇದಕ್ಕಾಗಿ ವಿಜ್ಞಾನಿಗಳ ಜೊತೆ ಚರ್ಚೆ ಕೂಡ ನಡೆಸುತ್ತಿದ್ದಾರೆ. ಇನ್ನೆರಡು ಮೂರು ತಿಂಗಳುಗಳಲ್ಲಿ ಧೋನಿಯವರ ಹೊಸ ಬ್ರ್ಯಾಂಡ್ನ ಸಾವಯವ ಗೊಬ್ಬರವೂ ರೆಡಿಯಾಗಲಿದೆ.
ಧೋನಿ ತನ್ನ ಹೊಸ ಪ್ರಾಜೆಕ್ಟ್ ನಲ್ಲಿ ಬಿಝಿಯಾಗಿರುವ ಕಾರಣ, ಧೋನಿ ಎಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಹಾಗೇ ಯಾವುದೇ ಜಾಹಿರಾತು ಕಂಪೆನಿಗಳ ಜೊತೆಗೂ ಒಪ್ಪಂದ ಮಾಡಿಕೊಂಡಿಲ್ಲ. ಕೊರೋನಾ ಸೋಂಕು ನಿವಾರಣೆಯಾಗುವ ತನಕ ಧೋನಿ ಯಾವುದೇ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೂ ಬಂದಿದ್ದಾರೆ. ಜನ ಜೀವನ ಸಹಜ ಸ್ಥಿತಿಗೆ ಮರಳುವ ತನಕ ಯಾವುದೇ ಕಮರ್ಷಿಯಲ್ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ ಎಂಬ ತೀರ್ಮಾನಕ್ಕೂ ಬಂದಿದ್ದಾರೆ.
ಹಾಗಂತ ಈ ಎಲ್ಲಾ ವಿಚಾರಗಳನ್ನು ಧೋನಿ ಹೇಳಿಕೊಂಡಿಲ್ಲ. ಬದಲಾಗಿ ಅವರ ಬಾಲ್ಯದ ಸ್ನೇಹಿತ ಹಾಗೂ ಮ್ಯಾನೇಜರ್ ಮಿಹೀರ್ ದಿವಾಕರ್ ಹೇಳಿದ್ದಾರೆ. ಲಾಕ್ ಡೌನ್ ಟೈಮ್ ನಲ್ಲಿ ಧೋನಿ ಏನು ಮಾಡುತ್ತಿದ್ದಾರೆ ಎಂಬ ವಿಚಾರಗಳನ್ನು ದಿವಾಕರ್ ಬಹಿರಂಗಪಡಿಸಿದ್ದಾರೆ. ಇನ್ನು ರಸಾಯನಿಕ ಕ್ರೀಮಿ ಕೀಟನಾಶಕಗಳ ಪರಿಣಾಮದ ಬಗ್ಗೆ ಧೋನಿ ಇತ್ತೀಚೆಗೆ ಮಾತನಾಡಿದ್ದರು. ಇದಕ್ಕೆ ಪರ್ಯಾಯವಾಗಿ ಧೋನಿ ನಿಯೋ ಗ್ಲೋಬಲ್ ಅನ್ನೋ ಹೊಸ ಸಾವಯವ ಗೊಬ್ಬರವನ್ನು ತಯಾರು ಮಾಡಲು ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್ನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ಮಿಹೀರ್ ದಿವಾಕರ್ ಹೇಳಿದ್ದಾರೆ.
ಈ ನಡುವೆ, ಧೋನಿ ತನ್ನ ಫಾರ್ಮ್ ಹೌಸ್ ನಲ್ಲಿ ಫಿಟ್ನೆಸ್ ಅನ್ನು ಮಾತ್ರ ಕಾಯ್ದುಕೊಳ್ಳುತ್ತಿದ್ದಾರೆ, ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿಯಬೇಕು ಎಂಬುದು ಧೋನಿಯ ಮನದಾಸೆಯಾಗಿದೆ. ಲಾಕ್ ಡೌನ್, ಕೋವಿಡ್ 19 ಸೋಂಕು ಎಲ್ಲಾ ನಿವಾರಣೆಯಾದ ನಂತರ ಧೋನಿ ಮತ್ತೆ ಅಭ್ಯಾಸದಲ್ಲಿ ನಿರತರಾಗುತ್ತಾರೆ. ಆದ್ರೆ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ. ಅಷ್ಟೇ ಅಲ್ಲ, ಅದರ ಬಗ್ಗೆ ನಾನು ಧೋನಿಯ ಜೊತೆ ಮಾತನಾಡಲು ಇಲ್ಲ ಎಂದು ದಿವಾಕರ್ ಹೇಳಿದ್ರು.