ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸೃಷ್ಠಿಯಾಗುವುದು ಎಂಬ ಮಾತು ರಾಜಕೀಯ ವಲಯದಲ್ಲಿ ಶುರುವಾಗಿದೆ. ಆಪರೇಷನ್ ಕಮಲ್ ನಡೆದು ಬಿಜೆಪಿ ಸರ್ಕಾರ ರಚನೆ ಮಾಡಿದಾಗ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆದಿತ್ತು. ಜೊತೆಗೆ ಸಚಿವ ಸ್ಥಾನ ಸಿಗದ ಬಿಜೆಪಿ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಇದೀಗ ಅಂತದ್ದೆ ಸನ್ನಿವೇಶ ಸೃಷ್ಠಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಯಾಕೆಂದರೆ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ತೆಗೆಯಲು ಬಿಜೆಪಿ ವರಿಷ್ಟರು ಮುಂದಾಗಿದ್ದಾರೆ. ಅಲ್ಲದೆ ಇವರ ಸ್ಥಾನಗಳಿಗೆ ಕ್ರಿಯಾಶೀಲರಾಗಿರುವ ಮತ್ತು ಅಸಮಾಧಾನ ಹೊಂದಿದ ಕೆಲ ಬಿಜೆಪಿ ಹಿರಿಯ ಶಾಸಕರನ್ನು ಸೇರಿಸಲು ಬಿಜೆಪಿ ಮುಂದಾಗಿದೆ . ಕೆಲ ಸಚಿವರಿಗೆ ಪದವಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಜೊತೆಗೆ ಸಚಿವರ ಪ್ರಸ್ತುತ ಇರುವ ಖಾತೆಗಳು ಬದಲಾಗುವ ಎಲ್ಲಾ ಲಕ್ಷಣಗಳಿವೆ ಎಂಬುದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದವರಿಗೆ ಉತ್ತಮವಾದ ಖಾತೆಗಳು ಸಿಗುವ ಸಾಧ್ಯತೆಗಳಿವೆ. ಸೇಮ್ ಟೈಮ್ ಸಚಿವರಾಗಿ ಇಲ್ಲಿಯವರಿಗೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಚಿವರಿಗಳಿಗೆ ಗೇಟ್ ಪಾಸ್ ನೀಡುವುದು ಪಕ್ಕಾ ಎಂಬುದು ಬಿಜೆಪಿ ಪಡಸಾಲೆಯಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ. ಈ ಭಾರಿ ಸಚಿವ ಸಂಪುಟ ಪುನರ್ರಚನೆಯಾದರೆ ಹೊಸಬರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಅಲ್ಲದೆ ಆಪರೇಷನ್ ಕಮಲಕ್ಕೆ ಸಾಥ್ ನೀಡಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದ 8 ರಿಂದ 10 ಶಾಸಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿಧಾನ ಪರಿಷತ್ ಚುನಾವಣೆಯ ನಾಮ ನಿರ್ದೇಶನ ಪ್ರಕ್ರಿಯೆ ಮುಗಿದ ಬಳಿಕ ಸಂಪುಟ ಸರ್ಜರಿಗೆ ಬಿಎಸ್ ವೈ ಕೈ ಹಾಕುತ್ತಾರೆ ಎಂದು ತಿಳಿದು ಬಂದಿದೆ. ಸರ್ಕಾರ ಅಧಿಕಾರಕ್ಕೆ ಬರಲು ಶಾಸಕ ಸ್ಥಾನ ತ್ಯಾಗ ಮಾಡಿ ನಂತರ ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್, ಹೊಸಕೋಟೆಯ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರಿಗೂ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ತೀರ್ಮಾನ ಮಾಡಲಾಗಿದೆ
ಸಂಪುಟದಿಂದ ಯಾರು ಔಟ್
ಬಿಜೆಪಿ ಉನ್ನತ ಮೂಲಗಳ ಮಾಹಿತಿ ಪ್ರಕಾರ ಡಿಸಿಎಂ ಅಶ್ವಥ್ ನಾರಾಯಣ್, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಶೆಶಿಕಲಾ ಜೊಲ್ಲೆ ಅವರುಗಳು ಸಚಿವ ಸಂಪುಟದಿಂದ ಔಟ್ ಎನ್ನಲಾಗಿದೆ.
ಸಚಿವ ಸಂಪುಟಕ್ಕೆ ಯಾರು ಇನ್
ಬಿಜೆಪಿ ಉನ್ನತ ಮೂಲಗಳ ಮಾಹಿತಿ ಪ್ರಕಾರ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳದ ಸುನೀಲ್ ಕುಮಾರ್, ಮುರುಗೇಶ್ ನಿರಾಣಿಗೆ ಸಂಪುಟಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಚಿವ ಸಂಪುಟ ಮೇಜರ್ ಸರ್ಜರಿಯ ಹಿಂದಿದೆ ಪಕ್ಷ ಸಂಘಟನೆ ಮಾಸ್ಟರ್ ಪ್ಲ್ಯಾನ್
ಕೆಲವು ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಆಯ್ಕೆ ಆದ ದಿನದಿಂದ ಇಲ್ಲಿಯವರಿಗೂ ಒಂದಲ್ಲ ಒಂದು ವಿಚಾರದಲ್ಲಿ ಹೆಚ್ಚು ಪ್ರಚಾರದಲ್ಲಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಪ್ರಾರಂಭದ ದಿನಗಳನ್ನು ಹೊರತು ಪಡಿಸಿ, ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಬಿಜೆಪಿ ವಲಯದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಕೆಲ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪ್ರಾರಂಭದಲ್ಲಿ ನಳಿನ್ ಕುಮಾರ್ ಕಟೀಲ್ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದರು. ಇದಾದ ನಂತರದಲ್ಲಿ ಅವರು ಮಂಗಳೂರು ಬಿಟ್ಟು ಹೆಚ್ಚು ಬಂದಿಲ್ಲ ಎನ್ನುವ ಆರೋಪ ಅವರ ವಿರುದ್ದ ಕೇಳಿ ಬಂದಿತ್ತು. ಆದ್ದರಿಂದ ಸಚಿವ ಸಂಪುಟದಿಂದ ಕೆಲ ಹಿರಿಯ ನಾಯಕರನ್ನು ಕೈ ಬಿಟ್ಟು ಪಕ್ಷ ಸಂಘಟಿಸುವ ಜವಬ್ದಾರಿ ನೀಡಲು ಬಿಜೆಪಿ ವರಿಷ್ಠರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಜೊತೆಗೆ ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ ಎನ್ನಲಾಗಿದೆ.
ಯಾರ ಖಾತೆಗಳು ಬದಲಾವಣೆ
ಈ ಭಾರಿ ನಡೆಯುವ ಸಚಿವ ಸಂಪುಟ ಸರ್ಜರಿಯಲ್ಲಿ ಕೆಲ ಹಿರಿಯ ಸಚಿವರ ಖಾತೆ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ. ಇತ್ತೀಚೆಗೆ ರೈತ ಮಹಿಳೆಗೆ ರಾಸ್ಕಲ್ ಎಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ, ಡಾ.ಸುಧಾಕರ್, ಡಿಸಿಎಂ ಲಕ್ಷ್ಮಣ ಸವದಿ, ಆರ್.ಅಶೋಕ್, ಸುರೇಶ್ ಕುಮಾರ್, ಸೇರಿದಂತೆ ಕೆಲವು ಸಚಿವರ ಖಾತೆಗಳು ಬದಲಾವಣೆ ಆಗಲಿವೆ ಎನ್ನಲಾಗಿದೆ.








