ಬೆಂಗಳೂರು: ರಾಜಧಾನಿ ಬೆಂಗಳೂರನ್ನಷ್ಟೇ ಅಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಅತ್ಯಂತ ಮಹತ್ವದ ಮತ್ತು ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್, ನ್ಯಾಯಾಲಯದ ಮುಂದೆ ತಾವೇ ಮಾಫಿ ಸಾಕ್ಷಿ ಅರ್ಥಾತ್ ಅಪ್ರೂವರ್ ಆಗಲು ಸಿದ್ಧರಿರುವುದಾಗಿ ತಿಳಿಸಿದ್ದು, ಕೊಲೆಯ ಸಂಪೂರ್ಣ ನೂರಕ್ಕೆ ನೂರರಷ್ಟು ನಿಜಾಂಶವನ್ನು ಬಿಚ್ಚಿಡುವುದಾಗಿ ನ್ಯಾಯಾಧೀಶರ ಎದುರು ಪ್ರತಿಜ್ಞೆ ಮಾಡಿದ್ದಾರೆ.
ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ನ್ಯಾಯಾಧೀಶೆ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರದೋಷ್ ಅವರನ್ನು ನೇರವಾಗಿ ಪ್ರಶ್ನಿಸಿದರು. ನೀವು ಯಾವ ಕಾರಣಕ್ಕೆ ಮಾಫಿ ಸಾಕ್ಷಿಯಾಗಲು ಬಯಸುತ್ತಿದ್ದೀರಿ ಎಂದು ಜಡ್ಜ್ ಕೇಳಿದಾಗ, ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂಬ ಉದ್ದೇಶದಿಂದ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ್ದೇನೆ ಎಂದು ಪ್ರದೋಷ್ ಉತ್ತರಿಸಿದರು.
ಅರ್ಜಿಯಲ್ಲಿ ಏನಿದೆ ಎಂಬುದನ್ನು ಓದಿ ತಿಳಿದುಕೊಂಡೇ ಸಹಿ ಮಾಡಿದ್ದೀರಾ ಎಂದು ಮರುಪ್ರಶ್ನಿಸಿದಾಗ, ಹೌದು ನಾನು ಅರ್ಜಿಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡೇ ಸಹಿ ಮಾಡಿದ್ದೇನೆ. ಈ ಘಟನೆಯಲ್ಲಿ ನನ್ನ ಪಾತ್ರವೇನು ಮತ್ತು ಇತರ ಆರೋಪಿಗಳು ಏನೇನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದೇನೆ ಎಂದು ಧೈರ್ಯವಾಗಿ ಹೇಳಿದರು.
ಯಾರದ್ದಾದರೂ ಬೆದರಿಕೆ, ಪ್ರಭಾವ ಅಥವಾ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದ್ದೀರಾ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರದೋಷ್, ನನ್ನ ಮೇಲೆ ಯಾವುದೇ ರೀತಿಯ ಪ್ರಭಾವ ಅಥವಾ ಒತ್ತಡ ಇಲ್ಲ. ನಾನು ಸಂಪೂರ್ಣ ಮನಸ್ಸಿನಿಂದ, ಸ್ವಇಚ್ಛೆಯಿಂದ ಈ ಅರ್ಜಿ ಸಲ್ಲಿಸಿದ್ದೇನೆ. ನೂರಕ್ಕೆ ನೂರರಷ್ಟು ಸತ್ಯವನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಜಡ್ಜ್ ಎದುರು ಸ್ಫೋಟಕ ಹೇಳಿಕೆ ನೀಡಿದರು. ಪ್ರದೋಷ್ ನೀಡಿದ ಪ್ರತಿಯೊಂದು ಹೇಳಿಕೆಯನ್ನು ನ್ಯಾಯಾಧೀಶರು ಅಧಿಕೃತವಾಗಿ ದಾಖಲಿಸಿಕೊಂಡಿದ್ದಾರೆ.
ವಿಚಾರಣೆಯ ಭಾಗವಾಗಿ ನ್ಯಾಯಾಲಯವು ಪ್ರದೋಷ್ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯ ಬಗ್ಗೆಯೂ ವಿಚಾರಿಸಿತು. ತಾವು ಎಂಬಿಎ ಫೈನಾನ್ಸ್ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಮತ್ತು ಇಂಗ್ಲಿಷ್ ಓದಲು ಹಾಗೂ ಬರೆಯಲು ಬರುತ್ತದೆ ಎಂದು ಪ್ರದೋಷ್ ತಿಳಿಸಿದರು. ಅಲ್ಲದೆ, ಈ ಕೊಲೆ ಪ್ರಕರಣಕ್ಕೂ ಮೊದಲು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿದರು. ಇನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿದ ವರದಿಯಲ್ಲಿ, ಪ್ರದೋಷ್ ವಿರುದ್ಧ ಈ ಕೊಲೆ ಕೇಸ್ ಹೊರತುಪಡಿಸಿ ಬೇರೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಜೈಲಿನಲ್ಲಿದ್ದಾಗ ಅವರ ನಡವಳಿಕೆ ಕೂಡ ಉತ್ತಮವಾಗಿತ್ತು ಎಂದು ಜೈಲು ಆಡಳಿತ ವರದಿ ನೀಡಿದೆ.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನ್ಯಾಯಾಲಯ ತನ್ನ ಮಹತ್ವದ ಆದೇಶವನ್ನು ಆಗಸ್ಟ್ 24ಕ್ಕೆ ಕಾಯ್ದಿರಿಸಿದೆ. ವಿಶೇಷವೆಂದರೆ, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದು, ಈ ಸಾಲು ಸಾಲು ಬೆಳವಣಿಗೆಗಳು ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಭಾರೀ ಕಾನೂನು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
ಪ್ರಸ್ತುತ ದರ್ಶನ್ ಹಾಗೂ ಇತರೆ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. ಆದರೆ, ಪ್ರದೋಷ್ ನೀಡಲಿರುವ ಸಾಕ್ಷ್ಯಗಳು ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ಆಗಸ್ಟ್ 24ರ ನ್ಯಾಯಾಲಯದ ಆದೇಶದ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.








