ನಾಳೆಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ
ಚಾಮರಾಜನಗರ : ನಾಳೆಯಿಂದ ರಾಜ್ಯದಾದ್ಯಂತ ಮೂರನೇ ಹಂತದ ಅನ್ ಲಾಕ್ ಪ್ರತಿಕ್ರಿಯೆ ಶುರುವಾಗಲಿದ್ದು, ದೇವಾಲಯಗಳಿಗೆ ತೆರೆಯಲು ಅವಕಾಶ ನೀಡಲಾಗಿದೆ.
ಅದರಂತೆ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ.
ಈ ಸಂಬಂಧ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ.
ತೀರ್ಥಪ್ರಸಾದ, ದಾಸೋಹ, ಯಾವುದೇ ಸೇವೆ, ಉತ್ಸವ, ಮುಡಿ ಕೊಡಲು ಅವಕಾಶ ಇರುವುದಿಲ್ಲ. ಪ್ರಾಧಿಕಾರದ ಬಸ್ ಸೇವೆಯೂ ಸದ್ಯಕ್ಕೆ ಇರುವುದಿಲ್ಲ.
ಬೇಡಿಕೆಗನುಸಾರ ಬಸ್ ಓಡಿಸುವ ಬಗ್ಗೆ ಪರಿಶೀಲಿಸಲಾಗುವುದು. ಭಕ್ತಾದಿಗಳು ಕಡ್ಡಾಯವಾಗಿ ರಂಗಮಂದಿರಕ್ಕೆ ಬಂದು ಕೋವಿಡ್ ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಲಾಗುವ ಆಸನಗಳಲ್ಲಿ ಕುಳಿತುಕೊಂಡು ತಮ್ಮ ಸರದಿ ಬಂದಾಗ ದರ್ಶನ ಪಡೆಯಬೇಕು ಎಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಲಾಗುವುದು. ಜೊತೆಗೆ ಬೆಟ್ಟದಲ್ಲಿ ವಾಸ್ತವ್ಯ ಹೂಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.