Man ki baat: ಸೌರ ಶಕ್ತಿ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನ ಬದಲಾಯಿಸುತ್ತಿದೆ – ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರಿಂದು, ಮನ್ ಕಿ ಬಾತ್ ಮಾಸಿಕ ಆಕಾಶವಾಣಿ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡರು.
ದೇಶದ ಹಲವೆಡೆ ಸೂರ್ಯನ ಆರಾಧನೆಯ ಮಹಾ ಹಬ್ಬವಾದ ‘ಛಠ್’ ಆಚರಿಸಲಾಗುತ್ತಿದೆ. ನಮ್ಮ ಸಂಸ್ಕೃತಿ, ನಂಬಿಕೆಗಳು ಪ್ರಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿರುವುದಕ್ಕೆ ಸೂರ್ಯ ಆರಾಧನೆಯ ಈ ಸಂಪ್ರದಾಯ ಸಾಕ್ಷಿಯಾಗಿದೆ. ಈ ಪೂಜೆಯ ಮೂಲಕ, ಸೂರ್ಯನ ಬೆಳಕಿನ ಮಹತ್ವ ವಿವರಿಸಲಾಗಿದೆ.
ಇದರೊಂದಿಗೆ ಏರಿಳಿತಗಳು ಬದುಕಿನ ಅವಿಭಾಜ್ಯ ಅಂಗ ಎಂಬ ಸಂದೇಶವನ್ನೂ ನೀಡಲಾಗಿದೆ. ಆದ್ದರಿಂದ ಎಲ್ಲ ಸಂದರ್ಭದಲ್ಲೂ ನಾವು ಒಂದೇ ಮನೋಭಾವ ಹೊಂದಿರಬೇಕು ಎಂದು ಹೇಳಿದರು.
‘ಸೌರಶಕ್ತಿ’ ಸೂರ್ಯದೇವನ ವರದಾನವಾಗಿದ್ದು, ಇಡೀ ಜಗತ್ತು ಇದರಲ್ಲಿ ಭವಿಷ್ಯ ಕಾಣುತ್ತಿದೆ. ಭಾರತ ಇಂದು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ. ಹೀಗಾಗಿ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿ ದೊಡ್ಡ ದೇಶಗಳಲ್ಲಿ ಒಂದಾಗಿದ್ದೇವೆ.
ಸೌರಶಕ್ತಿ ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದೂ ಅಧ್ಯಯನದ ವಿಷಯವಾಗಿದೆ. ತಮಿಳುನಾಡಿನ ಕಾಂಚೀಪುರಂನಲ್ಲಿ, ಥಿರು ಕೆ. ಎಳಿಲನ್ ಎಂಬ ಕೃಷಿಕ, ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ’ ಯ ಲಾಭ ಪಡೆದು ತಮ್ಮ ಜಮೀನಿನಲ್ಲಿ ಹತ್ತು ಅಶ್ವಶಕ್ತಿಯ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಜಮೀನಿಗೆ ವಿದ್ಯುತ್ತಿಗಾಗಿ ವೆಚ್ಚ ಮಾಡುವುದಿಲ್ಲ. ನೀರಾವರಿಗಾಗಿ ಸರ್ಕಾರದ ವಿದ್ಯುತ್ ಪೂರೈಕೆಯ ಮೇಲೆ ಅವಲಂಬಿತರಾಗಿಲ್ಲ ಎಂದು ತಿಳಿಸಿದರು.