ತ್ರಿಪುರಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ರಾಜ್ಯಸಭಾ ಸಂಸದ ಮಾಣಿಕ್ ಸಹಾ ಆಯ್ಕೆಯಾಗಿದ್ದಾರೆ.
ಇಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು ರಾಜೀನಾಮೆ ನೀಡಿದ ನಂತರ, ತ್ರಿಪುರಾ ಬಿಜೆಪಿ ಅಧ್ಯಕ್ಷ ರಾಜ್ಯಸಭಾ ಸಂಸದ ಮಾಣಿಕ್ ಸಹಾ ಅವರ ಹೆಸರನ್ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಮತ್ತು ವೀಕ್ಷಕರಲ್ಲಿ ಒಬ್ಬರಾದ ಭೂಪೇಂದ್ರ ಯಾದವ್ ಸಹಾ ಅವರ ಹೆಸರನ್ನು ಘೋಷಿಸಿದರು.
ತ್ರಿಪುರಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಮಾಣಿಕ್ ಸಹಾ ಅವರಿಗೆ ಅಭಿನಂದನೆಗಳು ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ತ್ರಿಪುರಾ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಬಿಪ್ಲಬ್ ಕುಮಾರ್ ದೇಬ್ ತಮ್ಮ ಸ್ಥಾನಕ್ಕೆ ರಾಜ್ಯಪಾಲ ಎಸ್.ಎನ್.ಆರ್ಯ ಅವರಿಗೆ ರಾಜೀನಾಮೆ ಸಲ್ಲಿಸಿದರು. ನಿನ್ನೆ ಬಿಪ್ಲಬ್ ದೇಬ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು, ಆದರೆ ಇಂದು ರಾಜೀನಾಮೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ತ್ರಿಪುರಾದ ಹಲವು ಬಿಜೆಪಿ ಶಾಸಕರು ಬಿಪ್ಲಬ್ ದೇಬ್ ವಿರುದ್ಧ ಕೋಪಗೊಂಡಿದ್ದರು ಮತ್ತು ಅದರ ಪ್ರತಿಧ್ವನಿ ಹೈಕಮಾಂಡ್ಗೂ ತಲುಪಿತ್ತು.
ರಾಜೀನಾಮೆ ನಂತರ ಹೇಳಿಕೆ
ರಾಜೀನಾಮೆ ನೀಡಿದ ನಂತರ ಮಾತನಾಡಿದ ಬಿಪ್ಲಬ್ ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ದೇಬ್ ಹೇಳಿದರು. ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದೇನೆ. ರಾಜೀನಾಮೆ ನೀಡುವಂತೆ ಹೈಕಮಾಂಡ್ ಹೇಳಿದಾಗ ನಾನು ಈ ಕ್ರಮ ಕೈಗೊಂಡಿದ್ದೇನೆ. ಮುಂದೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ತಯಾರಿಯಲ್ಲಿ ತೊಡಗಿದ್ದೇನೆ. ಬಿಜೆಪಿ ಕಾರ್ಯಕರ್ತನಾಗಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನ ಎಂದಿದ್ದಾರೆ.