ನವದೆಹಲಿ ಲೋಕಸಭೆಯಲ್ಲಿ ನಿನ್ನೆ ನಡೆದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಧರ್ಮಾಧಾರಿತ ಮೀಸಲಾತಿಯು ಸಂವಿಧಾನ ಬಾಹಿರ ಎಂದು ಪ್ರತಿಪಾದಿಸಿದರು.
ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುತ್ತಿರುವ ಕ್ರಮವನ್ನು ವಿವರಿಸಿದ ಅವರು ಮಹಿಳಾ ಮೀಸಲಾತಿ ಎಂದರೆ ಅದು ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿ ಎಂದು ಅರ್ಥವಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಭಾರತದ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಒಂದು ವೇಳೆ ಅಂತಹ ಕ್ರಮಕ್ಕೆ ಮುಂದಾದರೆ ಅದು ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸಿದಂತಾಗುತ್ತದೆ ಎಂದು ಶಾ ಖಡಕ್ ಆಗಿ ನುಡಿದರು.
ಇದಕ್ಕೂ ಮುನ್ನ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಧರ್ಮೇಂದ್ರ ಯಾದವ್ ಅವರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ ಎಂದು ವಾದಿಸಿದರು. ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ ಸುಮಾರು 40 ನಿಮಿಷಗಳ ಕಾಲ ವಿರೋಧ ಪಕ್ಷಗಳ ಧೋರಣೆಯನ್ನು ಟೀಕಿಸಿದರು. ನಾವೀಗ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಸಂಪೂರ್ಣ ಸಿದ್ಧವಾಗಿದ್ದೇವೆ. ಒಂದು ವೇಳೆ ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಅವರು ತಮ್ಮ ಪಕ್ಷದ ಎಲ್ಲಾ ಕ್ಷೇತ್ರಗಳಲ್ಲಿ ಮುಸ್ಲಿಂ ಮಹಿಳೆಯರಿಗೇ ಟಿಕೆಟ್ ನೀಡಲಿ ಎಂದು ಕಿಚಾಯಿಸಿದರು.
ಜಾತಿ ಜನಗಣತಿಯ ವಿಷಯವಾಗಿಯೂ ಮಾತನಾಡಿದ ಅವರು ಪ್ರತಿಪಕ್ಷಗಳ ಅಜ್ಞಾನವನ್ನು ಲೇವಡಿ ಮಾಡಿದರು. 2027ರ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲಾಗುವುದು ಎಂಬುದು ಸಮಾಜವಾದಿ ಪಕ್ಷದವರಿಗೆ ತಿಳಿದಿಲ್ಲದಂತಿದೆ. ಸದ್ಯಕ್ಕೆ ಕೇವಲ ಮನೆಗಳ ಗಣತಿ ಮಾತ್ರ ನಡೆಯುತ್ತಿದೆ. ಸಮಾಜವಾದಿ ಪಕ್ಷದ ಆಡಳಿತವಿದ್ದಿದ್ದರೆ ಬಹುಶಃ ಅವರು ಮನೆಗಳಿಗೂ ಜಾತಿಯ ಹೆಸರಿಡುತ್ತಿದ್ದರು ಎಂದು ಛೇಡಿಸಿದರು. ಜಾತಿ ಗಣತಿಯ ಬಗ್ಗೆ ನನಗೂ ವೈಯಕ್ತಿಕವಾಗಿ ಕುತೂಹಲವಿದೆ ಮತ್ತು ಅದನ್ನು ನಾವು ಮಾಡಿಯೇ ತೀರುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಅವರು ಲೋಕಸಭೆಯಲ್ಲಿ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿದರು. ಸಂವಿಧಾನ 131ನೇ ತಿದ್ದುಪಡಿ ಮಸೂದೆ 2026 ಕ್ಷೇತ್ರ ಮರುವಿಂಗಡಣೆ ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ತಿದ್ದುಪಡಿ ಮಸೂದೆ 2026 ಇವುಗಳನ್ನು ಮಂಡಿಸುವಾಗ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಈ ಮಸೂದೆಗಳು ಸಂವಿಧಾನ ವಿರೋಧಿ ಎಂದು ಆರೋಪಿಸಿ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.







