ಮಣಿಪುರ ಭೂಕುಸಿತ – 14 ಮಂದಿ ಮೃತ, 23 ಮಂದಿ ರಕ್ಷಣೆ…
ಮಣಿಪುರದ ನೋನಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಟೆರಿಟೋರಿಯಲ್ ಆರ್ಮಿ ಸಿಬ್ಬಂದಿ ಸೇರಿದಂತೆ 44 ಮಂದಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ತುಪುಲ್ ರೈಲ್ವೆ ನಿರ್ಮಾಣದ ವೇಳೆ ಸೈನಿಕರ ಶಿಬಿರದಲ್ಲಿ ಭೂಕುಸಿತ ಸಂಭವಿಸಿತ್ತು. ಅಂದಿನಿಂದ NDRF ತಂಡ ರಕ್ಷಣಾ ಕಾರ್ಯಾಚರಣೆಯನ್ನ ನಡೆಸುತ್ತಿದೆ. ರಕ್ಷಣಾ ಕಾರ್ಯಚರಣೆಗೆ ಭಾರಿ ಮಳೆ ಅಡ್ಡಿಪಡಿಸುತ್ತಿದೆ.
ಈವರೆಗೆ ಬಂದಿರುವ ಮಾಹಿತಿ ಪ್ರಕಾರ 23 ಮಂದಿಯನ್ನು ರಕ್ಷಿಸಲಾಗಿದ್ದು, 14 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ನೋನಿ ಸೇನಾ ವೈದ್ಯಕೀಯ ಘಟಕಕ್ಕೆ ದಾಖಲಿಸಲಾಗಿದೆ. ನಿನ್ನೆ, ಪ್ರಧಾನಿ ಮೋದಿ ರಾಜ್ಯದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ 1 ಲಕ್ಷ ರೂಪಾಯಿ ಹಾಗೂ ಗಾಯಾಳುಗಳ ಚಿಕಿತ್ಸೆಗೆ 50,000 ರೂಪಾಯಿಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಮಣಿಪುರ ರಾಜ್ಯಪಾಲ ಎಲ್ಗಾನೇಶನ್ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ತೂಪುರ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ ಗುಡ್ಡ ಕುಸಿದು ನಿರ್ಮಾಣ ಹಂತದಲ್ಲಿದ್ದ ಸ್ಟೇಷನ್ ಯಾರ್ಡ್ ಮೇಲೆ ಬಿದ್ದಿದೆ. ಜಿರಿಬಾಮ್ನಿಂದ ಇಂಫಾಲ್ಗೆ ರೈಲು ಮಾರ್ಗ ನಿರ್ಮಿಸಲಾಗುತ್ತಿದ್ದು ಇದರ ರಕ್ಷಣೆಗಾಗಿ ಸೈನಿಕರ ಶಿಬಿರವನ್ನ ಅಲ್ಲಿ ಸ್ಥಾಪಿಸಲಾಗಿತ್ತು.