ವಿಜಯಪುರ: ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ವರುಣ ತಂಪೆರೆದಿದ್ದಾನೆ. ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹೀಗಾಗಿ ಕೆಲವೆಡೆ ಅವಾಂತರಗಳೇ ಸೃಷ್ಟಿಯಾಗಿವೆ.
ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಬೀಸಿದ ಭಾರೀ ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದಿವೆ. ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ್ ದ್ರಾಕ್ಷಿ ತೋಟಕ್ಕೆ ಹಾನಿಯಾಗಿದೆ. ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬಗಳು ಹಾಗೂ ಮರಗಳು ಬಿದ್ದಿವೆ. ಪರಿಣಾಮ ದ್ರಾಕ್ಷಿ ಬೆಳೆ ಸಂಪೂರ್ಣವಾಗಿ ನಾಶವಾಗಿವೆ.
ಬೊಮ್ಮನಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಎಂಬವರು ಬೆಳೆದಿದ್ದ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಮಳೆ-ಗಾಳಿಯಿಂದಾಗಿ ನೆಲಕ್ಕೆ ಉರುಳಿವೆ. ಇದರಿಂದಾಗಿ ಸುಮಾರು 2 ಲಕ್ಷ ರೂ.ಗೂ ಅಧಿಕ ಹಾನಿಯಾಗಿದೆ. ಇಳುವರಿ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ಮುರಿದು ಬಿದ್ದಿದೆ. ಮಳೆಯ ತಂಪಿನಿಂದಾಗಿ ಹಲವರು ಸಂತಸ ಪಟ್ಟರೆ, ಹಾನಿಯಾದ ರೈತರು ಕಂಗಾಲಾಗಿದ್ದಾರೆ.