ಕನ್ನಡ ಸಾಹಿತ್ಯದ ಹಿರಿಯಜ್ಜ ಬೇಂದ್ರೆ ಈ ನೆಲದಲ್ಲಿ ಹುಟ್ಟಿದ್ದೇ ಈ ನಾಡಿನ ಹೆಮ್ಮೆ ನಮ್ಮೆಲ್ಲರ ಪುಣ್ಯ; ಸಾಧನಕೇರಿಯ ಈ ಅಜ್ಜನ ಜನ್ಮದಿನ ಕನ್ನಡದ ಹಬ್ಬವಾಗಬೇಕು: Bendre
ಕನ್ನಡ ಸಾರಸ್ವತ ಲೋಕಕ್ಕೆ ಅಗ್ರಅಗಣ್ಯ ಕೊಡುಗೆ ಕೊಟ್ಟ ಮಹಾನ್ ಕವಿ. ತಾಯಿಯನ್ನು, ಗುರುವನ್ನು ಪ್ರೇರಕ ಶಕ್ತಿಯಾಗಿಸಿಕೊಂಡು ಕಾವ್ಯ ರಚಿಸಿದ ಅಪೂರ್ವ ಕವಿ. ಜಾನಪದ ಸೊಗಡಿನ ಮಾಧ್ಯಮದ ಮೂಲಕ ಆಳವಾದ ಒಳನೋಟ ವ್ಯಕ್ತಪಡಿಸಿದ ವೈಚಾರಿಕ ಕವಿ. ಧಾರವಾಡದ ಸಾಧನಕೇರಿಯಲ್ಲಿ ಜನಿಸಿ ಸಾಹಿತ್ಯ ದುಂದುಬಿ ಮಾರ್ದನಿಸಿದ ವರಕವಿ. ಈ ಶ್ರಾವಣದ ಕವಿ ಹುಟ್ಟಿದ್ದು ಸತ್ಯ ಸತ್ತಿದ್ದು ಸುಳ್ಳು, ಧಾರವಾಡದ ಈ ಕವಿ ಸಾರ್ವಭೌಮನಿಗೆ ಸಾವೆಂಬುದುಂಟೇ!”
ಕನ್ನಡ ಸಾರಸ್ವತ ಲೋಕದ ಮಹಾಕವಿ ಅಂಬಿಕಾತನಯದತ್ತ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನವಿಂದು. ಧಾರವಾಡದ ಈ ಸಾಧನಕೇರಿಯ ಸಾಹಿತ್ಯ ಸಂತ ಅನುಪಮ ಕಾವ್ಯ ರಚಿಸಿದ ಭುವನೇಶ್ವರಿಯ ಹೆಮ್ಮೆಯ ಸಂಜಾತ. ನವಿರಾದ ಕವಿತೆಗಳ ಮೂಲಕ ಕನ್ನಡ ಸಾಹಿತ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಮನೆ ಮಾಡಿದ ಕಾವ್ಯ ಗಂಧರ್ವ ಬೇಂದ್ರೆ ಮಾಸ್ತರ್. ಅಸಂಖ್ಯ ಕನ್ನಡಿಗರ ಮನಸೆಂಬ ಬಾಂದಳದಲ್ಲಿ ಸದಾ ಮಿನುಗುವ ಸಾರಸ್ವತ ಲೋಕದ ಧ್ರುವತಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ವರಕವಿ ಈ ಶಾರದಾಪುತ್ರ ಬರೆದಿದ್ದೆಲ್ಲವೂ ಅಪ್ಪಟ ಚಿನ್ನದಂತಹ ಕಾವ್ಯಗಳೇ.. ಬೇಂದ್ರೆ ಮಾಸ್ತರ್ರ ಪೆನ್ನಿನ ತುದಿಯಲ್ಲಿ ಸ್ವತಃ ಸರಸ್ವತಿ ಮಾತೆಯೇ ಕುಳಿತು ಕವಿತೆ ಸೃಷ್ಟಿಸುತ್ತಿದ್ದಳು ಅನ್ನುವ ಉಪಮೆ ಸುಮ್ಮನೆ ಬಂದಿಲ್ಲ. ನಮ್ಮ ನಾಡಿಗೆ ಎರಡನೇ ಜ್ಞಾನಪೀಠ ದೊರಕಿಸಿಕೊಟ್ಟ ಕಾವ್ಯ ಗಾರುಡಿಗ ದ.ರಾ ಬೇಂದ್ರೆ, ಸಾಮರಸ್ಯದ ಸಂದೇಶ ಸಾರಿ ಹೊಸ ಜೀವನಸಾರವನ್ನು ಅನ್ವೇಷಿಸಿದ ಜೀವನಪ್ರೇಮಿ. ಈ ಕಾವ್ಯ ಮಾಂತ್ರಿಕ, ಕನ್ನಡದ ರವೀಂದ್ರನಾಥ್ ಠ್ಯಾಗೋರ್ ಎಂದೇ ಖ್ಯಾತರಾದವರು. 31 ಜನವರಿ 1896ರಲ್ಲಿ ಜನಿಸಿದ ವರಕವಿ ಬೇಂದ್ರೆಯವರ 124ನೇ ಜನ್ಮ ಜಯಂತಿ ಇಂದು. ಕರುನಾಡ ಹೆಮ್ಮೆಯ ಆ ಮಹಾಕವಿಗೆ ಜನ್ಮಜಯಂತಿಯ ಹಾರ್ದಿಕ ಶುಭಾಶಯಗಳು..
ಕಾವ್ಯದಲ್ಲಿ ಕುಸುರಿತನ, ಭಾವ ಲಾಲಿತ್ಯದ ಜೊತೆ ನೇರವಾದ ದಿಟ್ಟತನವನ್ನು ದಾಖಲಿಸಿದ ಅಪರೂಪದ ಕವಿ ಬೇಂದ್ರೆ. ತಮ್ಮ ಜೀವನದ ಅನುಭವಗಳ ಜೊತೆಗೆ, ಪ್ರಸ್ತುತ ವಿಧ್ಯಮಾನ, ಚಾಲ್ತಿಯಲ್ಲಿದ್ದ ಆಗು ಹೋಗುಗಳು ಹಾಗೂ ಸಾಮಾಜಿಕ ವ್ಯವಸ್ಥೆಗಳನ್ನು ವಿಡಂಬಿಸಿದ್ದು ಬೇಂದ್ರೆ ಕವಿತೆಗಳ ವಿಶೇಷತೆ. ಆಳುವ ವ್ಯವಸ್ಥೆಯ ವಿರುದ್ಧವೇ ಧಿಕ್ಕಾರದ ಪ್ರತಿಭಟನೆ ಕುಟ್ಟಿದ್ದ ಬೇಂದ್ರೆಯ ನರಬಲಿ ಕವಿತೆ ಅವರಿಗೆ ಜೈಲುವಾಸದ ಯೋಗ ತಂದಿಟ್ಟಿತ್ತು. ಆದರೂ ಯಾವ ಹಂಗು ಮುಲಾಜಿಗೂ ಅಂಜದೇ ಪದ್ಯ ಬರೆದ ಗಂಡು ಮೆಟ್ಟಿದ ನಾಡಿನ ಗಟ್ಟಿಗ ಅಂಬಿಕಾತನಯದತ್ತರು.
ಧಾರವಾಡದ ಸಾಹಿತ್ಯ ವಲಯದಲ್ಲೊಂದು ಮಾತಿತ್ತು. ಅದು, ಬೇಂದ್ರೆ ಅಂದ್ರ ಕನ್ನಡ. ಬೇಂದ್ರೆ ಅಂದ್ರ ಕನ್ನಡಿ. ಕನ್ನಡದ ಕವಿ ಕನ್ನಡಿಯ ಪ್ರತಿಬಿಂಬದಂತೆ ಬದುಕಿದವರು ಎಂದರ್ಥ. ತಮ್ಮೊಳಗಿನ ಕಾವ್ಯವನ್ನು ಕನ್ನಡಿಕರಿಸಿದ್ದು ಹಾಗೂ ಕನ್ನಡಿಯಂತೆ ಪ್ರತಿಫಲಿಸಿದ್ದು ಬೇಂದ್ರೆಯವರ ಸಾಹಿತ್ಯದ ಹಿರಿಮೆ. ಬೇಂದ್ರೆಯವರ ಕಾವ್ಯದಲ್ಲಿ ಪದಗಳೆಂದರೆ ಕೇವಲ ಕಾಲ್ಪನಿಕ ಚಿತ್ರಣ ಕಟ್ಟಿಕೊಡುವ ಸಾಹಿತ್ಯವಲ್ಲ, ಅದೊಂದು ಜೀವನದ ಪರಿಪೂರ್ಣತೆ ಹಾಗೂ ಜೀವನಾನುಭವವನ್ನು ಸಾರುವ ಸೂಕ್ಷ್ಮ ಸಂಗತಿಗಳನ್ನು ಹೇಳುವ ಮಾಧ್ಯಮ. ಕನ್ನಡ ಭಾಷೆಯಲ್ಲಿ ಶಾಶ್ವತವಾಗಿ ನೆಲೆ ಉಳಿಯುವಂತಹ, ಆಳವಾದ ದೃಷ್ಟಿಕೋನ ಹೊಂದಿರುವ ಕಾವ್ಯಗಳು ಹಾಗೂ ಕಾವ್ಯ ರಚಿಸಲೆಂದೇ ಬದುಕಿದ್ದ ದ ರಾ ಬೇಂದ್ರೆ ಕನ್ನಡದ ಅಸ್ಮಿತೆ ಸಾರುವಂತಹವರಲ್ಲಿ ಒಬ್ಬರು.
ಜುಂ ಎನ್ನತಾವ ತಂತಿ! ಎನ್ನುವ ಬೇಂದ್ರೆ ಕವಿ ವಾಕ್ಯದಂತೆ ಬೇಂದ್ರೆ ಹೆಸರು ಕೇಳಿದಾಗ ಸಹಸ್ರ ತಂತ್ರಿಯ ವೀಣೆಯ ನಾದ ಕೇಳುತ್ತದೆ. ಸಾಹಿತ್ಯ ಪ್ರಿಯರ ಮೈಮನಸಿನಲ್ಲಿ ಬೇಂದ್ರೆ ಮಿಂಚಿನ ಹೊಳೆ ಹರಿಸುತ್ತಾರೆ. ಕನ್ನಡ ಸಾರಸ್ವತ ಚರಿತ್ರೆಯಲ್ಲಿ ಪ್ರಾಯಶಃ ಕುಮಾರವ್ಯಾಸನ ನಂತರ ಕಾವ್ಯವನ್ನೇ ಉಸಿರಾಗಿಸಿಕೊಂಡ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅನ್ನುವ ಮಾತುಗಳಲ್ಲಿ ಅತಿಶಯೋಕ್ತಿಯಿಲ್ಲ.
ವರಕವಿ ಬೇಂದ್ರೆ ಹುಟ್ಟಿದ್ದು ಭಾರತ ಹುಣ್ಣಿಮೆಯ ಮರುದಿನ ಗುರುಪ್ರತಿಪದೆಯಂದು, ಅಂದರೆ 31 ಜನವರಿ 1896ರಲ್ಲಿ, ಧಾರವಾಡದಲ್ಲಿ. ಬೇಂದ್ರೆಯವರ ತಂದೆ ರಾಮಚಂದ್ರ ಭಟ್ಟ ಹಾಗೂ ತಾಯಿ ಅಂಬಿಕೆ ಅಥವಾ ಅಂಬವ್ವ. ಮರಾಠಿ ಮೂಲದ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬೇಂದ್ರೆಯವರ ಮನೆತನದ ಮೂಲ ಹೆಸರು ಠೋಸರ. ಅವರದ್ದು ವೈದಿಕ ವೃತ್ತಿಯ ಕುಟುಂಬ. ಆದ್ರೆ ಬೇಂದ್ರೆ ಪೌರೋಹಿತ್ಯದ ಬದಲು ಆರಿಸಿಕೊಂಡಿದ್ದು ಶಿಕ್ಷಣ, ಕಾವ್ಯ, ಜನಪದ ಹಾಗೂ ಸಾಹಿತ್ಯದ ಮಾಧ್ಯಮ.
ಬೇಂದ್ರೆಯವರಿಗೆ ಹನ್ನೊಂದು ವರ್ಷವಾದಾಗ ಅವರ ತಂದೆ ತೀರಿಹೋದರು. 1913ರಲ್ಲಿ ಮೆಟ್ರಿಕ್ಯುಲೇಶನ್ ಪಾಸು ಮಾಡಿದ ಬೇಂದ್ರೆ, ಪುಣೆಯ ಕಾಲೇಜಿನಲ್ಲಿ 1918ರಲ್ಲಿ ಬಿ.ಎ. ಪದವಿ ಗಳಿಸಿದರು. 1919ರಲ್ಲಿ ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾಗಿ ಸಂಸಾರ ನೊಗಕ್ಕೆ ಹೆಗಲು ಕೊಟ್ಟರು. ಅವರು ಪ್ರೀತಿಯಿಂದ ಆರಿಸಿಕೊಂಡಿದ್ದು ಅಧ್ಯಾಪಕ ವೃತ್ತಿಯನ್ನು. ಬೇಂದ್ರೆ ಎಂ.ಎ. ಪೂರ್ಣಗೊಳಿಸಿದ್ದು 1935ರಲ್ಲಿ. ಕೆಲಕಾಲ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸಹ ಕೆಲಸ ಮಾಡಿದ್ದರು.
ಬೇಂದ್ರೆಗೆ ಸಾಹಿತ್ಯದ ಒಲವು ತಾರುಣ್ಯದಲ್ಲೇ ಮೊಳೆತಿತ್ತು. ಕಾಲೇಜು ಕಲಿಯುವಾಗಲೇ ಕವಿತೆಗಳನ್ನು ರಚಿಸುತ್ತಿದ್ದ ಅವರು 1918ರಲ್ಲಿ ಪ್ರಭಾತ ಅನ್ನೋ ಪತ್ರಿಕೆಯಲ್ಲಿ ತಮ್ಮ ಮೊದಲ ಕವನ ಪ್ರಕಟಗೊಳಿಸಿ ತಮ್ಮೊಳಗಿದ್ದ ಕವಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಕವಿತೆಗಳ ಮೂಲಕ ನಾಡಿನ ಮನೆ ಮಾತಾದ ಅವ್ರು ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬರೆದರು. 1921ರಲ್ಲಿ ಧಾರವಾಡದ ಗೆಳೆಯರೊಡಗೂಡಿ ಕಟ್ಟಿದ ಗೆಳೆಯರ ಬಳಗ ಸಂಸ್ಥೆ ಬೇಂದ್ರೆಯವರ ಸಾಹಿತ್ಯ ಚಟುವಟಿಕೆಗಳಿಗೆ ಆಶ್ರಯ ನೀಡಿತು.
ಬೇಂದ್ರೆಯಲ್ಲಿ ಮೊದಮೊದಲು ಒಬ್ಬ ಆಕ್ರಮಣಶೀಲ, ವ್ಯವಸ್ಥೆಯ ದೌರ್ಜನ್ಯದ ವಿರುದ್ಧ ಧಂಗೆ ಏಳುವ ಕ್ರಾಂತಿಕಾರಿ ಕವಿ ಇದ್ದ. ಇದಕ್ಕೆ ನಿದರ್ಶನ ಸ್ವಾತಂತ್ರ್ಯ ಚಳುವಳಿ ಕಾವೇರುತ್ತಿದ್ದ ಸಮಯದಲ್ಲಿ ಗರಿ ಕವನ ಸಂಕಲನದ ನರಬಲಿ ಕವಿತೆ ಬರೆದು ಬ್ರಿಟೀಶ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಜೈಲುವಾಸ ಅನುಭವಿಸಿದ್ದು. ಆಗ ಬೇಂದ್ರೆ, ಅರಾಜಕತೆ, ಅವ್ಯವಸ್ಥೆ, ಭ್ರಷ್ಟಾಚಾರ ಹಾಗೂ ಭಾರತಕ್ಕೆ ಗುಲಾಮಿ ಸಂಕೋಲೆ ತೊಡಿಸಿದ್ದ ಬ್ರಿಟೀಶ್ ಆಡಳಿತದ ವಿರುದ್ಧ ಕಾವ್ಯದ ಮೂಲಕ ನೇರ ಹಾಗೂ ಸ್ಪಷ್ಟ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಬೇಂದ್ರೆಯವರ ಕವಿತೆಗಳು ಸರ್ವಕಾಲಿಕ ಶ್ರೇಷ್ಠ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಕವಿತೆಗಳಿಗೆ ಒಂದು ನೊಂದ ಮನಸಿಗೆ ಸಾಂತ್ವಾನ ಹೇಳುವ ಶಕ್ತಿ ಇತ್ತು. ಒಡೆದು ಹೋದ ಮನಸುಗಳನ್ನು ಕೂಡಿಸುವ ಗುಣವಿತ್ತು.. ಪ್ರೀತಿಗೆ, ಹೊಂದಾಣಿಕೆಯ ಬದುಕಿಗೆ ಬೇಂದ್ರೆ ತಮ್ಮ ಕವನಗಳಲ್ಲಿ ಕೊಟ್ಟ ಹೊಸ ವ್ಯಾಖ್ಯಾನ ಅನನ್ಯವಾದುದ್ದು.
ಬೇಂದ್ರೆಯವರ ಪ್ರಮುಖ ವೈಶಿಷ್ಟ್ಯವೆಂದರೆ ಅವರ ಕವಿತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜನಪದದ ಸೊಗಡು. ಬೇಂದ್ರೆ ಅಜ್ಜನಿಗೆ ಮಕ್ಕಳಂತಹ ಮನಸಿತ್ತು ಹಾಗೂ ಮಕ್ಕಳ ಮೇಲೆ ಅತೀವ ಪ್ರೀತಿ ಇತ್ತು. ಪಾತರಗಿತ್ತಿ ಪಕ್ಕ ನೋಡಿದ್ಯೇನೇ ಅಕ್ಕ, ತರಹದ ಅನೇಕ ಪದ್ಯಗಳನ್ನು ಬೇಂದ್ರೆ ಬರೆದಿದ್ದೇ ಮಕ್ಕಳಿಗಾಗಿ. ಆಧ್ಯಾತ್ಮದ ಸಂಗತಿಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬೇಂದ್ರೆ ಅರವಿಂದರನ್ನು ತಮ್ಮ ಗುರುವನ್ನಾಗಿ ಸ್ವೀಕರಿಸಿದ್ದರು. ಅರವಿಂದರ ಆಧ್ಯಾತ್ಮಕ್ಕೆ ಸಂಬಂಧಪಟ್ಟ ಹಲವು ಕೃತಿಗಳನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾಧಿಸಿದ್ದರು ಬೇಂದ್ರೆ. ಅವರ ಸಾಹಿತ್ಯ ತಪಸ್ಸಿಗೆ ಪ್ರೇರಕವಾದ ಅಂಶಗಳು ಹಲವು. ಅದರಲ್ಲಿ ಮುಖ್ಯವಾದುದ್ದು ಅವರಿದ್ದ ಸಾಧನಕೇರಿಯ ನಿರ್ಮಲ ಹಾಗೂ ಸಾಹಿತ್ಯಾಸಕ್ತಿಯನ್ನು ಪೋಷಿಸುವ ಪರಿಸರ. ಬೇಂದ್ರೆಯವರ ಕಾವ್ಯ ಮಾಂತ್ರಿಕತೆಯ ಗುಟ್ಟು ಅವರ ಕಾವ್ಯದೊಳಗಿನ ಜಾನಪದ ಸೊಗಡು. ಇನ್ನು ಬೇಂದ್ರೆ ಅಜ್ಜನ ಕಾವ್ಯದ ವೈಚಾರಿಕತೆ ಹಾಗೂ ಗಟ್ಟಿತನದ ಹಿಂದಿರುವ ಕಾರಣ ತತ್ತ್ವಶಾಸ್ತ್ರ, ಸಾಂಖ್ಯ, ಶಿಷ್ಟ ಸಂಪ್ರದಾಯದ ಚಿಂತನೆ, ಜೀವನಾನುಭವ, ಸುದೀರ್ಘ ಅಧ್ಯಯನ, ಮರಾಠಿ ಹಾಗೂ ಆಂಗ್ಲ ಭಾಷೆಯ ಮೇಲಿನ ಹಿಡಿತ, ಸ್ವಾತಂತ್ರ್ಯ ಪೂರ್ವ ಕಾಲಘಟ್ಟ, ವ್ಯವಸ್ಥೆಯ ಬಗ್ಗೆ ತಾಳಿದ ನಿಲುವು, ಅರವಿಂದರ ಚಿಂತನೆ ಹಾಗೂ ಆಧ್ಯಾತ್ಮದೆಡೆಗಿನ ಒಲವು.
ತನ್ನನ್ನು ತಾನು ಅಂಬಿಕಾತನಯದತ್ತ ಎಂದು ಕರೆದುಕೊಂಡ ಬೇಂದ್ರೆಗೆ ಇರುವ ಬಿರುದುಗಳು ಒಂದೆರಡಲ್ಲ. ಅವರು ಶ್ರಾವಣದ ಕವಿ, ಅವರು ರೂಪಕ ಚಕ್ರವರ್ತಿ, ಅವರು ಶಬ್ದ ಗಾರುಡಿಗ, ಅವರು ನಾದಲೋಲ, ಅವರು ವರಕವಿ, ಅವರು ಭುವನದ ಭಾಗ್ಯವೆಂಬಂತೆ ಕನ್ನಡ ನಾಡಿನಲ್ಲಿ ಉದಯಿಸಿದ ಮಹಾನ್ ಕವಿ. ಬೇಂದ್ರೆ ಸಾಮರಸ್ಯದ ಕವಿ, ಜಾನಪದ ಕವಿ, ಒಲವಿನ ಕವಿ, ಸಖಿಯ ಕಣ್ಣಲ್ಲಿ ಕನಸುಗಳ ಬಿತ್ತುವ ರಸಿಕಕವಿ, ಈ ಯುಗದ ಒಬ್ಬ ಸೃಜನಶೀಲ ಕುಸುರಿತನದ ಕಲೆ ಅರಿತಿದ್ದ ಕವಿ.
ಬೇಂದ್ರೆಯವರಿಗೆ ರಾಷ್ಟ್ರಕವಿ ಗುರುದೇವ ರವೀಂದ್ರನಾಥ್ ಠ್ಯಾಗರ್ ಅಂದ್ರೆ ಎಲ್ಲಿಲ್ಲದ ಗೌರವ. ಬಿಸಿಲು ತಿಂದು ಹಣ್ಣು ಮಾಗುವಂತೆ ಕವಿಯಲ್ಲಿ ಕವಿತ್ವ ಪಕ್ವವಾಗಬೇಕು ಅನ್ನುವ ಹೊಳಹಿನೊಂದಿಗೆ ಬೇಂದ್ರೆ ಠ್ಯಾಗೋರ್ರಿಗೆ ಬಿಸಿಲಣ್ಣು ಉಂಡಿದೀ ಎಂದು ಕರೆದು ಗೌರವ ಸಮರ್ಪಿಸಿದ್ದರು. ಅಂದ ಹಾಗೇ ಬೇಂದ್ರೆಯವರನ್ನು ಕನ್ನಡದ ಠ್ಯಾಗೋರ್ ಎಂದೂ ಸಹ ಗುರುತಿಸಲಾಗುತ್ತದೆ.
ಬೇಂದ್ರೆಯವರ ದಿ ಕ್ಲಾಸಿಕಲ್ ಎವರ್ಬೆಸ್ಟ್ ಎನಿಸಿಕೊಂಡ ಕುಣಿಯೋಣು ಬಾರಾ, ಇಳಿದು ಬಾ ತಾಯಿ ಇಳಿದು ಬಾ, ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು, ಇತ್ಯಾದಿ ಕವಿತೆಗಳು ಕಾವ್ಯಪ್ರಿಯ ಕನ್ನಡಿಗನ ಮನಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿವೆ. ನೊಂದ ಜೀವಕ್ಕೆ ಸಾಂತ್ವನ ನೀಡುವ, ನವಿರಾದ ಪ್ರೀತಿ ಹುಟ್ಟಿಸುವ ಕವಿತೆಗಳನ್ನು ಬರೆದ ವರಕವಿ ಅಂಬಿಕಾತನಯದತ್ತ, ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಬದುಕಿನ ಸಾರವನ್ನು ಸರಳವಾಗಿ ಹೇಳಿದವರು. ಸ್ವತಃ ಬದುಕಿನ ಪೂರ್ತಿ ಕಷ್ಟ ಪಾರ್ಪಣ್ಯಗಳನ್ನು ಕಂಡರೂ, ಸಮಾಜದ ನೋವಿಗೆ ಪದ್ಯಗಳ ಮೂಲಕ ಸಾಂತ್ವಾನ ಹೇಳಿದ್ದ ತ್ಯಾಗಮಯಿ ಬೇಂದ್ರೆ.
ಹ್ಯಾಂಗಾರೆ ಕುಣಿಕುಣಿದು, ಮಂಗಾಟ ನಡೆದಾಗ ಅಂಗಾತ ಬಿತ್ತೋ, ಹೆಗಲಲ್ಲಿ ಎತ್ತೋ. ಕುರುಡು ಕಾಂಚಾಣ ಕುಣಿಯುತ್ತಲಿತ್ತೋ ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ ಎನ್ನುವ ಮೂಲಕ ವ್ಯವಸ್ಥೆಯಲ್ಲಿ ಹಣಬಲದ ಅಟ್ಟಹಾಸವನ್ನು ವಿಡಂಬಿಸಿದವರು ಬೇಂದ್ರೆ.. ಶಂಭು ಶಿವಹರನ ಚಿತ್ತೆ ಬಾ, ದತ್ತ ನರಹರಿಯೆ ಮುತ್ತೆ ಬಾ, ಅಂಬಿಕಾತನಯನತ್ತ ಬಾ, ಇಳಿದು ಬಾ ತಾಯಿ ಇಳಿದು ಬಾ ಎಂದು ಮಹಾಶಕ್ತಿಯೊಂದನ್ನು ಆವಾಹಿಸಿದ್ದ ಬೇಂದ್ರೆ ಈ ಯುಗದ ಈ ಜಗದ ಈ ವಿಶ್ವದ ಅಗ್ರಮಾನ್ಯ ಕವಿ ಅನ್ನುವುದರಲ್ಲಿ ಸಂದೇಹವೇ ಇಲ್ಲ.
ಗಂಗಾವತರಣ, ನಾದಲೀಲೆ, ಸಖೀಗೀತ, ನಾಕುತಂತಿ, ಗರಿ, ಅರಳುಮಲ್ಲಿಗೆ, ಮತ್ತೆ ಶ್ರಾವಣ ಬಂತು ಅಂಬಿಕಾತನಯದತ್ತರ ಸರ್ವಕಾಲಿಕ ಸರ್ವಶ್ರೇಷ್ಟ ಕವನ ಸಂಕಲನಗಳು. ತಮ್ಮ ಆಧ್ಯಾತ್ಮಿಕ ಮಹಾಗುರು ಅರವಿಂದರ ಇಂಗ್ಲೀಷ್ ಕೃತಿಯೊಂದನ್ನು ‘ಭಾರತೀಯ ನರಜನ್ಮ’ ಅನ್ನುವ ಹೆಸರಿನಲ್ಲಿ ಬೇಂದ್ರೆ ಕನ್ನಡಕ್ಕೆ ಅನುವಾದಿಸಿದ್ದರು. ಕಾಳಿದಾಸನ ‘ಮೇಘದೂತ’ ಮೂಲಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದು ಸಹ ಬೇಂದ್ರೆ. ಹೊಸ ಸಂಸಾರ, ಹುಚ್ಚಾಟಗಳು, ಸಾಯೋ ಆಟ, ಜಾತ್ರೆ, ದೆವ್ವದ ಮನೆ, ಮಂದಿಮನೆ ಸೇರಿದಂತೆ ಒಟ್ಟು 14 ನಾಟಕಗಳನ್ನು ಬೇಂದ್ರೆ ರಚಿಸಿದ್ದಾರೆ. ಇವುಗಳ ಜೊತೆ 6 ಸಂಪಾದನಾ ಗ್ರಂಥಗಳು ಬೇಂದ್ರೆಯವರ ಲೇಖನಿಯಿಂದ ರಚಿತವಾಗಿದೆ. ಬೇಂದ್ರೆ ಅಜ್ಜನ ಹಲವು ಅಪ್ರಕಟಿತ ಕವನಗಳನ್ನು ಕುಲವಧು, ಚಕ್ರತೀರ್ಥ, ಅರಿಷಿಣ ಕುಂಕುಮ, ಬೆಳ್ಳಿಮೋಡ ಮತ್ತು ಶರಪಂಜರ ಮುಂತಾದ ಚಲನಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಅಂದ ಹಾಗೆ 1954ರಲ್ಲಿ ವಿಚಿತ್ರ ಪ್ರಪಂಚ ಅನ್ನುವ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ಬೇಂದ್ರ ರಚಿಸಿದ್ದರು ಅನ್ನುವ ಮಾತಿದೆ.
ಬೇಂದ್ರೆ ಅಜ್ಜನ ಕವಿತೆಗಳ ಮೂಲಸತ್ವ ಕೇವಲ ರೂಪಕಗಳನ್ನು ಕಟ್ಟಿಕೊಡುವ ಸಾಹಿತ್ಯ ಮಾತ್ರವಲ್ಲ. ಅವರ ಕಾವ್ಯದಲ್ಲಿ ಆಳವಾದ ಜೀವನಾನುಭವ ಹಾಗೂ ವೈಚಾರಿಕ ದೃಷ್ಟಿಕೋನ ಇರುತ್ತಿತ್ತು. ಹಾಗಾಗಿಯೇ ಕುವೆಂಪು ಹಾಗೂ ಬೇಂದ್ರೆ ಕನ್ನಡ ಸಾರಸ್ವತ ಲೋಕದ ಮೂಲಶಕ್ತಿಗಳು ಎಂದು ಗುರುತಿಸಲಾಗತ್ತೆ. ಬೇಂದ್ರೆ ಕಾವ್ಯ ರಚನೆಯಲ್ಲಿ ಅವರ ಧಾರವಾಡದ ಸಾಹಿತ್ಯ ವಲಯದ ಕೊಡುಗೆಯೂ ಅಪಾರ.
ಬೇಂದ್ರೆಯವರ ಅತ್ಯುತ್ತಮ ಕೃತಿ ಸಖೀಗೀತದ ಒಲವು-ದಾಂಪತ್ಯ ಕುರಿತ ಒಟ್ಟು ಸಮುಷ್ಟಿ ತಾತ್ತ್ವಿಕತೆ ಎಂದರೆ, ಗಂಡು-ಹೆಣ್ಣು ಮದುವೆಯಾದ ತಕ್ಷಣ ಗಂಡ-ಹೆಂಡತಿಯಾಗಬಹುದು, ಆದರೆ ಪ್ರೇಮಿಗಳಾಗುವುದಿಲ್ಲ. ಹಾಗಾಗಿ ಮದುವೆಯ ನಂತರದ ಹೊಂದಾಣಿಕೆ, ಸಾಮರಸ್ಯವೊಂದೆ ಒಲವ ಜೀವನದ ಸೋಪಾನಕ್ಕೆ ದಾರಿ ಅನ್ನುವ ಅಂತರ್ದೃಷ್ಟಿ ಸಖೀಗೀತದಲ್ಲಿತ್ತು.
ಬೇಂದ್ರೆ ಓರ್ವ ಮಾತೃಶಕ್ತಿ-ಮಾತೃ ಪರಂಪರೆಯ ಉಪಾಸಕ. ಏಕೆಂದರೆ ಅವರು ತಮ್ಮನ್ನು ತಾವು ಅಂಬೆಯ ಪುತ್ರ ಎಂದು ಕರೆದುಕೊಂಡರು. ಇಲ್ಲಿ ಅಂಬೆ ಅನ್ನುವುದು ಕೇವಲ ಅವರ ತಾಯಿಯ ಹೆಸರು ಮಾತ್ರವಲ್ಲದೇ ಅಲೌಕಿಕ ಶಕ್ತಿ, ಸೃಷ್ಟಿಯ ವಿರಾಟ್ ಸ್ವರೂಪವೂ ಅನ್ನುವ ಭಾರತೀಯ ಸಂಸ್ಕೃತಿಯ ಮೂಲ ಪ್ರಜ್ಞೆ ಇದರಲ್ಲಿದೆ.
ಕನ್ನಡ ಸಾಹಿತ್ಯ ಲೋಕಕ್ಕೆ ಕಳಶವಿಟ್ಟ ಮೂಲ ಪುರುಷರು ಕುವೆಂಪು ಹಾಗೂ ಬೇಂದ್ರೆ. ಅತ್ತ ಕುವೆಂಪು ಹಳಗನ್ನಡ, ಸಂಸ್ಕೃತ ಮಿಶ್ರಿತ ಕನ್ನಡ ಬಳಸಿ ಮಹಾಕಾವ್ಯ ರಚಿಸುತ್ತಿದ್ದರೆ, ಇತ್ತ ಬೇಂದ್ರೆ ತಮ್ಮ ಕಾವ್ಯಕ್ಕೆ ಆರಿಸಿಕೊಂಡ ಭಾಷೆ ಜಾನಪದ. ಮೈಸೂರಿನ ತಮ್ಮ ಕರ್ಮಭೂಮಿಯಲ್ಲಿ ಕುವೆಂಪು ಸಾಹಿತ್ಯ ಕೃಷಿ ನಡೆಸಿದರೆ, ಧಾರವಾಡದಲ್ಲಿ ಬೇಂದ್ರೆ ಅಜ್ಜನ ಕಾವ್ಯ ಕುಸುರಿ ಸಾಗುತ್ತಿತ್ತು. ಬೇಂದ್ರೆಯವರು, ಕುವೆಂಪು ಜೊತೆಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ವಿ.ಕೃ ಗೋಕಾಕ್ ಹಾಗೂ ಶಿವರಾಮ ಕಾರಂತರೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದರು. ಹಾಗೆಯೇ ಬೇಂದ್ರೆ ಹಾಗೂ ಶ್ರೀರಂಗರ ನಡುವಿನ ಸಾಹಿತ್ಯಕ ಭಿನ್ನಾಭಿಪ್ರಾಯಗಳೂ ಸಾಕಷ್ಟು ಸದ್ದು ಮಾಡಿದ್ದ ವಿದ್ಯಮಾನ..
ಧಾರವಾಡದ ಸಾಹಿತ್ಯ ಕಾಶಿಯ ಈ ಮೇರು ಕವಿ ಸರಿಸುಮಾರು 2000ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಇಡೀ ಪ್ರಪಂಚವನ್ನೇ ಒಂದು ತತ್ತ್ವವೆಂದು ಬಗೆದು, ಸೃಷ್ಟಿಯನ್ನೇ ಒಂದು ದೃಷ್ಟಿ ಎಂದು ಭಾವಿಸಿ ಆಧ್ಯಾತ್ಮದ ತಳಹದಿಯಲ್ಲಿ, ಅಲೌಕಿಕ ಭಾವದೊಂದಿಗೆ ಅತ್ಯಂತ ಆಳವಾದ ಒಳನೋಟಗಳ ಹೊಂದಿರುವ ಅವರ ಕೆಲವು ಪದ್ಯಗಳು ಇಂದಿಗೂ ಅನೇಕ ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಲೇ ಇದೆ.
ಬೇಂದ್ರೆ ಹೇಗೆ ಅತ್ಯದ್ಭುತವಾಗಿ ಕವಿತೆಗಳನ್ನು ಬರೆಯುತ್ತಿದ್ದರೂ ಹಾಗೆಯೇ ಅತ್ಯುತ್ತಮವಾಗಿ ಮಾತೂ ಸಹ ಆಡುತ್ತಿದ್ದರು. ಬೇಂದ್ರೆ ಉಪನ್ಯಾಸಗಳಿಗೆ ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲೂ ಜನ ಕಿಕ್ಕಿರಿದು ಸೇರಿ ಕಿವಿಯಾಗಿ ಹಿಗ್ಗುತ್ತಿದ್ದರು. ಕನ್ನಡದ ಬಹುತೇಕರಿಗೆ ಗೊತ್ತಿಲ್ಲ, ಬೇಂದ್ರೆ ಕನ್ನಡದ ಜೊತೆ ಕೆಲವು ಮರಾಠಿ ಕೃತಿಗಳನ್ನೂ ರಚಿಸಿದ್ದಾರೆ.
ಧಾರವಾಡದ ಸಾಹಿತ್ಯ ಸಂತ ಬೇಂದ್ರೆ ತಾತನಿಗೆ ಅರಸಿ ಬಂದ ಗೌರವಗಳು ಕಡಿಮೆಯೇನಲ್ಲ. 1958ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, 1964ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸನ್ಮಾನ, 1965ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ, 1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಗಳು ಬೇಂದ್ರೆಯವರ ಸಾಹಿತ್ಯ ಸೇವೆಗೆ ಸಿಕ್ಕ ಗೌರವಗಳು. ಅಂಬಿಕಾತನಯದತ್ತರ ನಾಕು ತಂತಿ ಕವನ ಸಂಕಲನಕ್ಕೆ 1974ರಲ್ಲಿ ಕನ್ನಡದ 2ನೆಯ ಜ್ಞಾನಪೀಠ ಪುರಸ್ಕಾರ ಪ್ರಾಪ್ತವಾಯಿತು. ಬೇಂದ್ರೆಯವರಿಗೆ ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಸಹ ಲಭ್ಯವಾಗಿದೆ.
ದೀಪ ಆರಿದ ನಂತರವೂ ಅದರ ಭಾವರೂಪ ಶಾಶ್ವತವಾಗಿ ಉಳಿಯುವಂತೆ, ಬೆಂಕಿ ಬೂದಿಯಾಗಿ ನಂತರ ವಿಭೂತಿಯಾಗುವಂತೆ, ವರಕವಿ ಬೇಂದ್ರೆ ನಮ್ಮನ್ನಗಲಿದ ನಾಲ್ಕು ದಶಕಗಳ ನಂತರವೂ ಅವರ ಕವಿತ್ವದ ಮೋಹದ ಬಲೆಯಿಂದ ಬಿಡಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗ್ತಿಲ್ಲ. ಕವಿ ಬೇಂದ್ರೆ ಭೌತಿಕವಾಗಿ ಅಗಲಿದ್ದರು, ಅವರ ಆತ್ಮವೇ ಆಗಿದ್ದ ಕಾವ್ಯ ಪ್ರತಿ ಬಾರಿ ಓದುವಾಗಲೂ ಹೊಸರೂಪ ಹೊಸದರ್ಶನಗಳ ತೋರಿಸುತ್ತಾ ಅಂಬಿಕಾತನಯದತ್ತರನ್ನು ಅಮರ ಕವಿಯಾಗಿಸಿದೆ.
ಕನ್ನಡನಾಡಿನ ಬಹುತೇಕ ಎಲ್ಲಾ ವರ್ಗಗಳ, ಎಲ್ಲ ದೃಷ್ಟಿಕೋನಗಳ, ಬೇರೆ ಬೇರೆ ಸಿದ್ಧಾಂತಗಳ, ಬೇರೆ ಬೇರೆ ಪಂಥಗಳ, ಬಣಗಳ, ವೈರುದ್ಯಗಳ ಸಾಹಿತಿ ಹಾಗೂ ಚಿಂತಕರು ಮುಕ್ತವಾಗಿ ಮೆಚ್ಚುವ ಅಪರೂಪದ ಕಾವ್ಯ ಪಂಡಿತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಬೇಂದ್ರೆ ದಹಿಕವಾಗಿ ಮರೆಯಾದರೂ ತಮ್ಮ ಕಾವ್ಯದ ಮೂಲಕ ಕಾವ್ಯಪ್ರಿಯರಲ್ಲಿ ಸದಾ ಜೀವಂತವಿರುತ್ತಾರೆ.
-ವಿಭಾ (ವಿಶ್ವಾಸ್ ಭಾರದ್ವಾಜ್)
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel