ಕೃಪೆ – ಹಿಂಡವಿ
ಚಾರಿತ್ರಿಕ ಚಂಪಕಸರಸು ಪುನರ್ ನಿರ್ಮಾಣಕ್ಕೆ ಕಂಕಣ ತೊಟ್ಟ ಯಶ್ರ ಯಶೋಮಾರ್ಗ:
ಮಲೆನಾಡಿನ ಕೀರ್ತಿ ಶಿಖರ ಕೆಳದಿ ನಾಯಕರ ಕಾಲದಲ್ಲಿ ಜಲ ಕಾಯಕದಲ್ಲಿ ಅತ್ಯಂತ ಮಹತ್ವಪೂರ್ಣ ಕೆಲಸಗಳಾಗಿವೆ. ಕೆಳದಿ ರಾಜಮನೆತನದ ಪ್ರಮುಖ ನಾಯಕ ಹಿರಿಯ ವೆಂಕಟಪ್ಪ ನಾಯಕ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸನಿಹದ ಚಂಪಕ ಸರಸು ಎಂಬ ಅಪುರೂಪದ ಕಲ್ಯಾಣಿ ನಿರ್ಮಿಸಿದ್ದರು. ಇಂದಿಗೆ 400 ವರ್ಷಗಳ ಹಿಂದೆ ನಿರ್ಮಿಸಿದ ಈ ಕಲ್ಯಾಣಿ ಪುನಶ್ಚೇತನ ಎಂಬ ಅಭೂತಪೂರ್ವ ಕಾರ್ಯಕ್ಕೆ ಈಗ ಮಹೂರ್ತ ನಿಶ್ಚಿತವಾಗಿದೆ. ಇಂತದ್ದೊಂದು ಲೋಕಕಲ್ಯಾಣ ಕಾರ್ಯದ ಹೊಣೆ ಹೊತ್ತವರು ಬೇರಾರೂ ಅಲ್ಲ, ಕನ್ನಡದ ಚಂದನವನದಲ್ಲಿ ರಾಕಿಂಗ್ ಸ್ಟಾರ್ ಎಂದು ಮರೆಯುತ್ತಿರುವ ರಾಖಿ ಬಾಯ್ ಯಶ್.
ಈ ಹಿಂದೆಯೂ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಯಶ್ ಅವರ ಯಶೋ ಮಾರ್ಗ ಫೌಂಡೇಷನ್ ಚಂಪಕಸರಸು ಪುನರುಜ್ಜೀವನಗೊಳಿಸಲು ಸಂಕಲ್ಪಿಸಿದೆ. ಆನಂದಪುರಂನ ಈ ಚಾರಿತ್ರಿಕ ಕೆರೆಯ ಕಲ್ಲಿನ ಕಟ್ಟೆ ಕುಸಿಯತೊಡಗಿತ್ತು, ಸುತ್ತಲೂ ಗಿಡಗಂಟಿ ಬೆಳೆದು, ಅಪುರೂಪದ ಶಿಲ್ಪಗಳು ಶಿಥಿಲಗೊಳ್ಳತೊಡಗಿತ್ತು. ಈ ನಿಟ್ಟಿನಲ್ಲಿ ಯಶೋಮಾರ್ಗ ಸಂಸ್ಥೆ ಈ ಐತಿಹಾಸಿಕ ಸ್ಮಾರಕವನ್ನು ಸ್ವಚ್ಛಗೊಳಿಸಿ ನವೀಕರಿಸುವತ್ತ ಅತ್ಯಂತ ದೃಢವಾದ ಹೆಜ್ಜೆ ಮುಂದಿಟ್ಟಿದೆ. ತನ್ಮೂಲಕ ಸ್ಥಳೀಯ ಪ್ರಜ್ಞಾವಂತರ ಸಹಕಾರದೊಂದಿಗೆ ಇತಿಹಾಸ ಪರಂಪರೆ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿದೆ. ಕೆಳದಿ ಅರಸರ ಕಾಲದಲ್ಲಿ ಆನಂದಪುರಂ ಪಟ್ಟಣ ಮತ್ತು ಇಲ್ಲಿನ ಕಿರುಕೋಟೆ ಉಪರಾಜಧಾನಿ ಎಂದೇ ಖ್ಯಾತವಾಗಿತ್ತು. ಇಲ್ಲಿ ತಮ್ಮ ಪ್ರೇಯಸಿಯ ನೆನಪಿಗಾಗಿ ವೆಂಕಟಪ್ಪ ನಾಯಕರು ಚಂಪಕ ಸರಸ್ಸು ಎಂಬ ಸುಂದರ ಕಲ್ಯಾಣಿ ಹಾಗೂ ಮಧ್ಯೆ ಶಿವಾಲಯ ನಿರ್ಮಿಸಿದ್ದರು. ಶಿವಾಲಯಕ್ಕೆ ತೆರಳಲು ಕೆರೆಯ ಮೇಲೆ ಕಲ್ಲಿನ ಸಂಕ, ಸುಂದರವಾದ ಶಿಲಾಮಯ ಆನೆಗಳು, ಸುತ್ತಲೂ ಪಗಾರಗಳು ಕೆಳದ ಅರಸರ ವಾಸ್ತುಶಿಲ್ಪ ಸೃಜನಶೀಲತೆಯನ್ನು ಸಾರಿ ಹೇಳುವಂತಿದ್ದವು. ಈ ಚಂಪಕಸರಸು ಆನಂದಪುರಂ ಬಸ್ ಸ್ಟಾಂಡಿನಿಂದ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಮಧ್ಯೆ ಮಲಂದೂರಿನ ಸಂತೋಷ್ ಕೋಲ್ಡ್ ಸ್ಟೋರೇಜ್ ಹಿಂಭಾಗದಲ್ಲಿದೆ.
ಕೆಳದಿಯ ದಿಗ್ಗಜ ನಾಯಕ ರಾಜ ಹಿರಿಯ ವೆಂಕಟಪ್ಪ ನಾಯಕರು ಚಂಪಕಳ ನಿತ್ಯ ಬಿಡುಸುತ್ತಿದ್ದ ರಂಗೋಲಿಯಿಂದ ಆಕರ್ಷಿತರಾಗಿ, ಪ್ರೇಮದ ಮೋಹದಲ್ಲಿ ಬಂಧಿಯಾದರು, ಚಂಪಕ ಅವರ ಉಪರಾಣಿಯಾದಳು ಎನ್ನುವ ಕಥೆಗಳಿವೆ. ವೆಂಕಟಪ್ಪ ನಾಯಕರು ಮತ್ತು ಚಂಪಕಳ ವಿವಾಹದ ಕಾರಣ ಆನಂದಪುರಂನ ಕೋಟೆಯ ಅರಮನೆಯಲ್ಲಿ ಪಟ್ಟದ ರಾಣಿ ಭದ್ರಮ್ಮಾಜಿಯ ಮತ್ತು ರಾಜ ವೆಂಕಟಪ್ಪ ನಾಯಕರ ಮಧ್ಯೆ ಕಲಹ ಏರ್ಪಡುತ್ತದೆ. ಕೆಳದಿಯ ಪ್ರಜೆಗಳಲ್ಲಿಯೂ ನಾಯಕರ ಮೇಲೆ ಅಸಹನೆ ದಿನೇ ದಿನೇ ಹೆಚ್ಚಾಗುತ್ತದೆ. ಈ ಘಟನೆಗಳಿಂದ ತೀವ್ರ ಮನನೊಂದು ಉಪರಾಣಿ ಚಂಪಕ, ಹಾಲಿನಲ್ಲಿ ವಜ್ರದ ಪುಡಿ ಬೆರೆಸಿ ಸೇವಿಸಿ ಜೀವ ತ್ಯಾಗ ಮಾಡುತ್ತಾಳೆ. ನಂತರ ರಾಣಿ ಚಂಪಕಾಳ ಸ್ಮರಣೆಗಾಗಿ ವೆಂಕಟಪ್ಪ ನಾಯಕರು ನಿರ್ಮಿಸಿದ ಕೊಳವನ್ನೇ ಚಂಪಕ ಸರಸ್ಸು ಎನ್ನಲಾಯಿತು. ಸರಸ್ಸು ಎಂದರೆ ಕೊಳ ಎಂದರ್ಥ. ವೆಂಕಟಪ್ಪ ನಾಯಕರು ಮತ್ತು ಚಂಪಕಳ ನಡುವಿನ ನವಿರಾದ ಪ್ರೇಮಕಥೆಯನ್ನು ಆನಂದಪುರಂನ ಸಾಮಾಜಿಕ ಮುಂದಾಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸದಾ ಕ್ರಿಯಾಶೀಲ ವ್ಯಕ್ತಿತ್ವದವರಾದ, ಸದ್ಯ ಹೋಟೆಲ್ ಉದ್ಯಮ ನಡೆಸುತ್ತಿರುವ ಅರುಣ್ ಪ್ರಸಾದ್ ಕಿರು ಕಾದಂಬರಿ ರೂಪದಲ್ಲಿ ಪ್ರಕಟಿಸಿದ್ದಾರೆ.
ಕೆಳದಿ ಇತಿಹಾಸದಲ್ಲಿ ದೀರ್ಘ ಕಾಲ ಆಳಿದ, ರಾಜ್ಯ ವಿಸ್ತಾರ ಮಾಡಿದ, ರಾಣಿ ಅಬ್ಬಕ್ಕ ಮತ್ತು ಕಾಳು ಮೆಣಸಿನ ರಾಣಿ ಬೈರಾದೇವಿಯವರ ರಾಜ್ಯವನ್ನೂ ವಶಪಡಿಸಿಕೊಂಡು ಮೆರೆದ, ಇವತ್ತಿನ ಸಾಗರ ಪಟ್ಟಣ ನಿರ್ಮಿಸಿದ್ದ ಅರಸನೂ ಆಗಿದ್ದ ರಾಜ ವೆಂಕಟಪ್ಪ ನಾಯಕನ ಹಿರಿಮೆ ಗರಿಮೆಗಳನ್ನು ಚರಿತ್ರೆಯ ಪುಟಗಳಲ್ಲಿ ವಿಜೃಂಬಿಸುವ ಕೆಲಸವಾಗಿಲ್ಲ. ಜೊತೆಗೆ ವೆಂಕಟಪ್ಪನಾಯಕನ ಉಪರಾಣಿ ಚಂಪಕ ಕೆಳಜಾತಿಯ ಹೆಣ್ಣು ಅನ್ನುವ ಕಾರಣಕ್ಕೋ ಏನೋ ಒಂದು ಸುಂದರ ಪ್ರೇಮಕಥೆ ಇಂದಿಗೂ ಕತ್ತಲಲ್ಲೇ ಉಳಿದಿದೆ. 2024ಕ್ಕೆ ಈ ಚಂಪಕ ಸರಸು ನಿರ್ಮಾಣವಾಗಿ 400 ವರ್ಷ ತುಂಬುತ್ತದೆ. ಈ ಸಂದರ್ಭದಲ್ಲಿ ಪಾರಂಪರಿಕ ಕಲ್ಯಾಣಿಯ ಪುನರುಜ್ಜೀವನ ಮಾಡುವ ಮಹತ್ವದ ಕಾರ್ಯಕ್ಕೆ ಪ್ರಸಿದ್ಧ ಚಿತ್ರನಟ ಯಶ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.
ಯಶ್ರ ಯಶೋ ಮಾರ್ಗ ಸಂಸ್ಥೆ ಈ ಹಿಂದೆಯೂ ಕೊಪ್ಪಳದ ತಲ್ಲೂರು ಕೆರೆಯ ಕಾಯಕಲ್ಪ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಪೂರೈಸಿ ಜನಮನ್ನಣೆಗೆ ಪಾತ್ರವಾಗಿತ್ತು. ಬೀದರ್ ಜಿಲ್ಲೆಯಲ್ಲಿ ನೀರಿನ ಹಾಹಾಕರ ಏರ್ಪಟ್ಟಾಗ ದೂರದ ಹಳ್ಳಿಗಳಿಗೂ ಯಶೋಮಾರ್ಗ ಸಂಸ್ಥೆಯ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಯಶೋಮಾರ್ಗದ ಸಾಮಾಜಿಕ ಕಾರ್ಯಗಳಿಗಾಗಿಯೇ ಇತ್ತೀಚೆಗಷ್ಟೆ ಹೊಸ ಕಚೇರಿಯೊಂದನ್ನೂ ತೆರೆದಿದ್ದರು. ಈಗ ಚಂಪಕ ಸರಸು ಪುನರ್ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಯಶ್ರ ಯಶೋಮಾರ್ಗ ಫೌಂಡೇಶನ್, ಚಂಪಕ ಸರಸ್ಸು ಸುತ್ತಲಿನ ಪರಿಸರ ಸ್ವಚ್ಚಗೊಳಿಸುವುದು, ಇಂಗು ಗುಂಡಿ ನಿರ್ಮಿಸುವುದು, ಸ್ಮಾರಕಕ್ಕೆ ಗೇಟ್ ನಿರ್ಮಾಣ ಮಾಡುವುದು, ಕಾವಲುಗಾರರ ಮನೆ ಇತ್ಯಾದಿ ಮೂಲಭೂತ ಅವಶ್ಯ ಸೌಕರ್ಯಗಳ ಅನುಷ್ಠಾನಕ್ಕೆ ಕಂಕಣ ತೊಟ್ಟಿದೆ. ಯಶೋಮಾರ್ಗ ಫೌಂಡೇಷನ್ ಜೊತೆಯಲ್ಲಿ, ಹೈದರಾಬಾದ್ ಮೂಲದ ಪ್ರಖ್ಯಾತ ಖಾದ್ಯ ತೈಲ ಸಂಸ್ಥೆ ಪ್ರೀಡಂ ಆಯಿಲ್ ಸಹ ಕೈ ಜೋಡಿಸಿದೆ.
ಇಂತದ್ದೊಂದು ಅದ್ಭುತ ಕಾರ್ಯಕ್ಕೆ ನಟ ಯಶ್ ಅವರನ್ನು ಒಪ್ಪಿಸಿ, ಕಾರ್ಯಕ್ಕೆ ಚಾಲನೆ ಸಿಗುವಂತೆ ಮಾಡಿದವರು ನಾಡಿನ ಪ್ರಖ್ಯಾತ ಜಲ ತಜ್ಞ, ಪರಿಸರ ವಿಜ್ಞಾನಿ ಮತ್ತು ಪರಿಸರ ಪತ್ರಕರ್ತ ಶಿವಾನಂದ ಕಳವೆ. ಅಖಿಲ ಭಾರತ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ರಾಕೇಶ್, ಕರ್ನಾಟಕ ರಾಜ್ಯ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ಸತೀಶ್ ಶಿವಣ್ಣ, ಯಶ್ ಅಭಿಮಾನಿ ಸಂಘದ ಸಂಸ್ಥಾಪಕರಾದ ಶ್ರೀಗಂಧ, ಆನಂದಪುರಂ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನವೀನಾ ರವೀಂದ್ರ ಗೌಡ, ಉಪಾದ್ಯಕ್ಷ ಮೋಹನ್ ಮತ್ತು ಸದಸ್ಯರು ಹಾಗೂ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ನ ರಾಜೇಂದ್ರ ಗೌಡರು, ಕಾರ್ಯದರ್ಶಿ, ಪತ್ರಕರ್ತ ಬಿ.ಡಿ. ರವಿ ಮೊದಲಾದವರ ಸಮಕ್ಷಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇದನ್ನೊಂದು ಚಾರಿತ್ರಿಕ ಪ್ರವಾಸಿ ತಾಣವನ್ನಾಗಿಸುವ ಯೋಜನೆ ಅರುಣ್ ಪ್ರಸಾದ್ ಮತ್ತು ಉಳಿದ ಆನಂದಪುರಂ ಪ್ರಜ್ಞಾವಂತರದ್ದಾಗಿದೆ. ಹೀಗಾದರೂ ಮಲೆನಾಡಿನ ಭವ್ಯ ಸಾಮ್ರಾಜ್ಯ ಕೆಳದಿ ನಾಯಕರ ಇತಿಹಾಸ ಬೆಳಕಿಗೆ ಬರುವಂತಾಗಲಿ ಎನ್ನುವುದು ನಮ್ಮ ಪತ್ರಿಕೆಯ ಆಶಯವೂ ಹೌದು.
-ರೂಪಾ ಮಾಲತೇಶ್, ಕಾರ್ಯನಿರ್ವಾಹಕ ಸಂಪಾದಕಿ, ಶಿವಮೊಗ್ಗ