ಬೆಂಗಳೂರು, ಮೇ 26 : ಕೊರೊನಾ ಕಾಟದ ನಡುವೆ ರಾಜ್ಯ ಸರ್ಕಾರಕ್ಕೆ ವಿಧಾನಪರಿಷತ್ ಚುನಾವಣೆ ಸಂಕಷ್ಟ ಎದುರಾಗಿದೆ. ಜೂನ್ ತಿಂಗಳ ಅಂತ್ಯಕ್ಕೆ ಅನೇಕ ಹಿರಿಯ ಶಾಸಕರ ವಿಧಾನಪರಿಷತ್ ಸದಸ್ಯತ್ವ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಎಂ ಎಲ್ ಸಿ ಆಕಾಂಕ್ಷಿಗಳ ಪರ ಪಕ್ಷದ ಪ್ರಭಾವಿ ನಾಯಕರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ಎಂಎಲ್ ಸಿ ಸ್ಥಾನಕ್ಕಾಗಿ ಅನೇಕರು ಈಗಾಗಲೇ ಭಾರಿ ಪ್ರಮಾಣದಲ್ಲಿ ಲಾಬಿ ನಡೆಸುತ್ತಿದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಬಿ.ಎಸ್ ವೈ ಪುತ್ರ ಬಿ. ವೈ ವಿಜಯೇಂದ್ರ ಅವರು ಎಂಎಲ್ಸಿ ಸ್ಥಾನ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ದುಡಿದು ಯಶಸ್ಸುಗೊಳಿಸಿದ್ದಕ್ಕೆ ಪಕ್ಷದಿಂದ ಮರಿ ರಾಜಾಹುಲಿಗೆ ಈ ಬಹುಮಾನ ಸಿಗಲಿದೆ ಎಂದು ಸುದ್ದಿಹಬ್ಬಿಸಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ವಿಜಯೇಂದ್ರ ಹೇಳಿದ್ದೇನು?
ಎಂಎಲ್ ಸಿ ಸ್ಥಾನಕ್ಕಾಗಿ ವಿಜಯೇಂದ್ರ ಅವರು ಲಾಬಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ಸಿಎಂ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅಲ್ಲಗೆಳೆದಿದ್ದಾರೆ. “ಪಕ್ಷದಲ್ಲಿ ನನಗಿಂತ ಹಿರಿಯರು ಅನೇಕ ಮಂದಿ ಇದ್ದಾರೆ. ಹಲವು ದಶಕಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ. ಈಗ ಅವಕಾಶಕ್ಕಾಗಿ ಕಾದಿದ್ದಾರೆ. ನನ್ನ ಆದ್ಯತೆ ಏನಿದ್ದರೂ ಪಕ್ಷದ ಸಂಘಟನೆಯಾಗಿದ್ದು, ಪಕ್ಷದ ಹಿರಿಯ ಮುಖಂಡರು ನೀಡಿದ ಆದೇಶವನ್ನು ಪಾಲಿಸುತ್ತೇನೆ” ಎಂದಿದ್ದಾರೆ.
ಕೆಲ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿ ವೈ ವಿಜಯೇಂದ್ರ ಅವರು ಎಂಎಲ್ಸಿ ಸ್ಥಾನಕ್ಕಾಗಿ ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೆಲ್ಲವೂ ಸುಳ್ಳು
ಸುದ್ದಿ, ಪಕ್ಷದಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿಲ್ಲ. ನಾನು ಅಕಾಂಕ್ಷಿಯೂ ಅಲ್ಲ, ಎಂಎಲ್ಸಿ ಸ್ಥಾನಕ್ಕಾಗಿ ಲಾಬಿಯೂ ನಡೆಸಿಲ್ಲ ಎಂದು ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಇನ್ನು ವಿಧಾನಪರಿಷತ್ ಚುನಾವಣೆ ಜೂನ್ ಮೊದಲ ವಾರದಲ್ಲಿ ನಿಗದಿಯಾಗುವ ಸಾಧ್ಯತೆಯಿದೆ.