ಕೋಲ್ಕತಾ: ದೇಶದಲ್ಲಿ ಸದ್ಯ ರಾಜಕೀಯ ಕಾವು ಜೋರಾಗಿದ್ದು, ಟಿಕೆಟ್ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ. ತಾರೆಯರು ಕೂಡ ಈಗ ಚುನಾವಣಾ ಅಂಗಳದತ್ತ ಮುಖ ಮಾಡುತ್ತಿದ್ದಾರೆ. ಈ ಮಧ್ಯೆ ಮೊಹಮ್ಮದ್ ಶಮಿ ಹೆಸರು ಕೇಳಿ ಬರುತ್ತಿರುವುದು ವಿಶೇಷ.
ಈಗಾಗಲೇ ಮಾಜಿ ಆಟಗಾರ ಯೂಸುಫ್ ಪಠಾಣ್ ಟಿಎಂಸಿ ಪಕ್ಷದಿಂದ ಪಶ್ಚಿಮ ಬಂಗಾಳದ ಬೆಹ್ರಾಂಪುರ್ ಕ್ಷೇತ್ರದಿಂದ ಸ್ಪರ್ಧಿಸುವುದು ಪಕ್ಕಾ ಆಗಿದೆ. ಇನ್ನೊಂದೆಡೆ ಬಿಜೆಪಿ ಕೂಡ ಮೊಹಮ್ಮದ್ ಶಮಿಯನ್ನು ಪಶ್ಚಿಮ ಬಂಗಾಳದಲ್ಲಿ ಚುಣಾವಣೆಗೆ ನಿಲ್ಲಿಸಲು ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬಂಗಾಳದ ಬಶೀರ್ ಹಾಟ್ ಕ್ಷೇತ್ರದಿಂದ ಶಮಿಯನ್ನು ಕಣಕ್ಕೆ ಇಳಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಬಿಜೆಪಿ ನಾಯಕರು ಶಮಿ ಭೇಟಿ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ.
ಆದರೆ, ಶಮಿ ಯಾವುದೇ ನಿರ್ಧಾರ ತಿಳಿಸಿಲ್ಲ. ಸದ್ಯ ಗಾಯದಿಂದಾಗಿ ಅವರು ವಿಶ್ವಾಂತಿ ಪಡೆಯುತ್ತಿದ್ದಾರೆ. ವಿಶ್ವಕಪ್ ಪಂದ್ಯದಲ್ಲಿ ಆಡಿದ್ದೇ ಅವರ ಕೊನೆಯ ಆಟವಾಗಿದೆ. ಮುಂದಿನ ದಿನಗಳಲ್ಲಿ ಅವರು ಮತ್ತೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.
ಮೊಹಮ್ಮದ್ ಶಮಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಶಮಿ ಅವರ ಹುಟ್ಟೂರಾದ ಉತ್ತರಪ್ರದೇಶದ ಅಮ್ರೋಹಾದಲ್ಲಿ ಕ್ರಿಕೆಟ್ ಸ್ಟೇಡಿಯಂ ಕಟ್ಟುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದರು. ಇವೆಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.