ಚಾಮರಾಜನಗರ: ಮಲೆ ಮಹದೇಶ್ವರನ ಹುಂಡಿಯಲ್ಲಿ ಕಾಣಿಕೆ ಎಣಿಕೆ ನಡೆದಿದ್ದು, ಮತ್ತೊಮ್ಮೆ ಕೋಟ್ಯಾಧೀಶನಾಗಿದ್ದಾನೆ.
ಹನೂರು ತಾಲೂಕಿನ ಮಲೆ ಮಹದೇಶ್ವರನ ಹುಂಡಿಯಲ್ಲಿ (Hundi)ಯೇ ಭರ್ಜರಿ ಕಾಣಿಕೆಗಳು ಸಂಗ್ರಹವಾಗಿವೆ.
30 ದಿನಗಳಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದ್ದು, ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. 30 ದಿನಗಳ ಕಾಣಿಕೆ ಎಣಿಕೆಯಲ್ಲಿ ಬರೋಬ್ಬರಿ 2.16 ಕೋಟಿ ರೂ. ಹಣ ಸಂಗ್ರಹವಾಗಿದೆ. ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ನಂತರ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ರಾತ್ರಿ 7 ಗಂಟೆಯವರೆಗೆ ಹುಂಡಿ ಎಣಿಕೆ ನಡೆಸಲಾಯಿತು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕೋಟ್ಯಂತರ ಹಣ, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. 30 ದಿನಗಳಲ್ಲಿ ಒಟ್ಟು 2,16,34,614 ರೂ. ಸಂಗ್ರಹವಾಗಿದೆ. ಅಲ್ಲದೇ, 78 ಗ್ರಾಂ ಚಿನ್ನ, 2.35 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 4 ಅಮೆರಿಕನ್ ಡಾಲರ್, ಅಫ್ಘಾನಿಸ್ತಾನದ 10 ಅಫ್ಗಾನಿ, ಮಲೆಷ್ಯಾದ 3 ರಿಂಗಿಟ್, ನೇಪಾಳದ ಮೂರು ನೋಟುಗಳು ಪತ್ತೆಯಾಗಿವೆ.