ಆಸ್ತಿ ವಿವಾದ : ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ
ಕೋಲಾರ : ಆಸ್ತಿ ವಿವಾದ ಮತ್ತು ಸಾಲಗಾರರ ಬಾಧೆ ಕಾರಣಕ್ಕೆ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ನರಸಾಪುರದಲ್ಲಿ ನಡೆದಿದೆ. ಬೆಂಗಳೂರಿನ ಹೊರಮಾವಿ ನಿವಾಸಿ 45 ವರ್ಷದ ನಂದಿತಾ ಮತ್ತು ಅವರ ಪುತ್ರಿ ಪ್ರಗತಿ ಆತ್ಮಹತ್ಯೆ ಮಾಡಿಕೊಂಡಿರುವವರಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ನಂದಿತಾ ಅವರ ಪತಿ ಕೇಶವಮೂರ್ತಿ ಅವರು ಕಳೆದ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರಂತೆ. ಕೇಶವಮೂರ್ತಿ ಸಂಬಂಧಿಕರ ಬಳಿ ಸುಮಾರು 10 ಲಕ್ಷ ಸಾಲ ಮಾಡಿಕೊಂಡಿದ್ದರು. ಕೇಶವಮೂರ್ತಿ ಮೃತಪಟ್ಟ ನಂತರ ಸಾಲ ಕೊಟ್ಟ ಸಂಬಂಧಿಕರು ನಂದಿತಾ ಅವರನ್ನು ಸಾಲ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದರಂತೆ. ಮತ್ತೊಂದೆಡೆ ಕೇಶವಮೂರ್ತಿ ಸಹೋದರರು ಆಸ್ತಿ ವಿಚಾರವಾಗಿ ನಂದಿತಾ ಅವರೊಂದಿಗೆ ಜಗಳವಾಡುತ್ತಿದ್ದರಂತೆ. ಈ ಎಲ್ಲ ಕಾರಣಗಳಿಂದ ನಂದಿತಾ ಮತ್ತು ಪ್ರಗತಿ ಪ್ರಗತಿ ಅವರು ಮಂಗಳವಾರ ರಾತ್ರಿ ನರಸಾಪುರ ಬಳಿ ಬಂದು ಸೊಂಟಕ್ಕೆ ದುಪಟ್ಟ ಕಟ್ಟಿಕೊಂಡು ಒಟ್ಟಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಕೆರೆಯಲ್ಲಿ ಮೃತ ದೇಹಗಳು ಕಂಡುಬಂದಿದ್ದು, ಅವುಗಳನ್ನ ಹೊರತೆಗೆದು ಪೊಲೀಸರು ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಮೃತದೇಹಗಳನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.
ಇನ್ನು ಈ ಸಂಬಂಧ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.