ಮೈಸೂರು, ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ಕಾಂಗ್ರೆಸ್ ಆಯೋಜಿಸಿರುವ ‘ಸಾಧನಾ ಸಮಾವೇಶ’ವನ್ನು ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಟೀಕಿಸಿದ್ದಾರೆ. ಸರಣಿ ಟ್ವೀಟ್ಗಳ ಮೂಲಕ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಆಡಳಿತಾವಧಿಯ ‘ಯಡವಟ್ಟು’ಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಯಾವುದೇ ಮೂಲಭೂತ ಅಂಶಗಳಿಲ್ಲದ ಸ್ವಯಂ ಅಭಿನಂದನಾ ಕಾರ್ಯಕ್ರಮ ಎಂದು ಸಮಾವೇಶವನ್ನು ಯದುವೀರ್ ವ್ಯಂಗ್ಯವಾಡಿದ್ದಾರೆ.
ಯದುವೀರ್ ಒಡೆಯರ್ ಅವರು ತಮ್ಮ ಟ್ವೀಟ್ಗಳಲ್ಲಿ ಸರ್ಕಾರದ ಸಾಧನೆಯನ್ನು ಪ್ರಶ್ನಿಸುತ್ತಾ, “ಅವರು ನಿಜವಾಗಿಯೂ ಇದನ್ನು ಆಚರಿಸುತ್ತಿರುವ ಉದ್ದೇಶವಾದರೂ ಏನು? ಇದು ರಾಜ್ಯದ ಆರ್ಥಿಕ ಕುಸಿತದ ಸಮಾರಂಭವೆ? ಭರವಸೆಗಳನ್ನು ಈಡೇರಿಸದಿರುವುದರ ಆಚರಣೆಯೆ? ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳು ಕುಸಿತದ ಸಮಾವೇಶವೇ?” ಎಂದು ಪ್ರಶ್ನಿಸಿದ್ದಾರೆ.
ಯದುವೀರ್ ಒಡೆಯರ್ ಟ್ವೀಟ್ಗಳಲ್ಲಿ ಕಾಂಗ್ರೆಸ್ ಸರ್ಕಾರದ ‘ನಿಜವಾದ ಸಾಧನೆ’ಗಳು:
1. ಗಗನಕ್ಕೇರಿದ ಸಾರ್ವಜನಿಕ ಸಾಲ: ಕಾಂಗ್ರೆಸ್ ಆಳ್ವಿಕೆಯಲ್ಲಿ ಕರ್ನಾಟಕದ ಸಾರ್ವಜನಿಕ ಸಾಲವು ಗಗನಕ್ಕೇರಿದೆ ಎಂದು ಯದುವೀರ್ ಆರೋಪಿಸಿದ್ದಾರೆ. 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ, 2025-26ರ ಅವಧಿಯಲ್ಲಿ ಒಟ್ಟು ಹೊಣೆಗಾರಿಕೆಗಳಿಗೆ ಸುಮಾರು 1.16 ಲಕ್ಷ ಕೋಟಿ ರೂಪಾಯಿಗಳ ಪ್ರಸ್ತಾವಿತ ಸೇರ್ಪಡೆಯಾಗುವ ನಿರೀಕ್ಷೆಯಿದೆ, ಇದು ಆತಂಕಕ್ಕೆ ಕಾರಣವಾಗಿದೆ. ಮತಬ್ಯಾಂಕ್ ಯೋಜನೆಗಳಿಗಾಗಿ ಹಣಕಾಸಿನ ವಿವೇಕವನ್ನು ಬಲಿಕೊಡಲಾಗಿದೆ ಎಂದು ಅವರು ಕುಟುಕಿದ್ದಾರೆ.
2. ಗ್ಯಾರಂಟಿ ಯೋಜನೆಗಳ ವಿಳಂಬ ಮತ್ತು ವೈಫಲ್ಯ: ಹೆಚ್ಚು ಪ್ರಚಾರ ಪಡೆದ ಗ್ಯಾರಂಟಿ ಯೋಜನೆಗಳು ವಿಳಂಬ, ಕಳಪೆ ಹಂಚಿಕೆ ಮತ್ತು ತಾಂತ್ರಿಕ ದೋಷಗಳಿಂದ ನಲುಗಿವೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಹಣ ಹಂಚಿಕೆಯಲ್ಲಿ ವಿಳಂಬವಾಗಿರುವುದಕ್ಕೆ ಸರ್ಕಾರ ಟೀಕೆಗೆ ಗುರಿಯಾಗಿದೆ ಎಂದು ಯದುವೀರ್ ಹೇಳಿದ್ದಾರೆ.
3. ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆ: ದೈನಂದಿನ ಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನಂದಿನಿ ಹಾಲು ಮತ್ತು ಮೊಸರು ಉತ್ಪನ್ನಗಳ ಮೇಲೆ ಪ್ರಸ್ತುತ ವರ್ಷದಲ್ಲಿ ಮೂರನೇ ಬಾರಿ ದರವನ್ನು ಹೆಚ್ಚಿಸಲಾಗಿದೆ. ಕಳೆದ ಬಾರಿ ಬೆಲೆ ಏರಿಕೆಯಾದಾಗ ನೀಡಲಾಗಿದ್ದ 50 ಮಿಲಿ ಹಾಲಿನ ಪ್ರೋತ್ಸಾಹ ಧನವನ್ನು ಸರ್ಕಾರ ರದ್ದುಗೊಳಿಸಿರುವುದನ್ನು ಯದುವೀರ್ ಉಲ್ಲೇಖಿಸಿದ್ದಾರೆ.
4. ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ: ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರಗಳು 15% ರಷ್ಟು ಏರಿಕೆಯಾಗಿವೆ. ಕಾರ್ಮಿಕ ವರ್ಗದ ಚಲನಶೀಲತೆಯನ್ನು ವಿಸ್ತರಿಸುವ ಬದಲು, ಈ ಸರ್ಕಾರವು ಅದನ್ನು ದುಬಾರಿಯನ್ನಾಗಿಸಿದೆ ಎಂದು ಟೀಕಿಸಿದ್ದಾರೆ.
5. ಬಿಬಿಎಂಪಿ ಸುರಂಗ ರಸ್ತೆ ವರದಿಯಲ್ಲಿ ಎಡವಟ್ಟು: ಬಿಬಿಎಂಪಿಯ ಸುರಂಗ ರಸ್ತೆ ವರದಿಯು 1,000 ಕಿ.ಮೀ ದೂರದಲ್ಲಿರುವ ನಾಸಿಕ್ ಮತ್ತು ಮಾಲೆಗಾಂವ್ ನಗರಗಳ ಸಂಚಾರ ದತ್ತಾಂಶವನ್ನು ಬೆಂಗಳೂರಿನ ಪ್ರದೇಶಗಳಂತೆ ಉಲ್ಲೇಖಿಸಿದೆ. ಇದನ್ನು ‘ಕ್ಲೆರಿಕಲ್ ದೋಷ’ವಲ್ಲ, ಬದಲಿಗೆ ಸೋಮಾರಿ ಆಡಳಿತ, ನಕಲು ಮಾಡುವ ಸಲಹಾ ವ್ಯವಸ್ಥೆ ಮತ್ತು ವಂಚನೆಯ ಪ್ರಕರಣ ಎಂದು ಯದುವೀರ್ ಬಣ್ಣಿಸಿದ್ದಾರೆ.
6. ವಿದ್ಯುತ್ ಬಿಲ್ ಹೆಚ್ಚಳದ ಪ್ರಸ್ತಾವನೆ: ಕರ್ನಾಟಕದ ವಿದ್ಯುತ್ ಬಿಲ್ಗಳು ಈಗಾಗಲೇ ಕಡಿಮೆ ಇರುವ ಮನೆಗಳ ಮೇಲೆ ಮತ್ತೊಂದು ಹೊರೆಯನ್ನು ಸದ್ದಿಲ್ಲದೆ ಹೆಚ್ಚಿಸಿವೆ. ವಿದ್ಯುತ್ ಸರಬರಾಜು ಕಂಪನಿಗಳು 2025-26 ಕ್ಕೆ ಪ್ರತಿ ಯೂನಿಟ್ಗೆ 67 ಪೈಸೆ, 2026-27 ಕ್ಕೆ 75 ಪೈಸೆ ಮತ್ತು 2027-28 ಕ್ಕೆ 91 ಪೈಸೆ ದರ ಹೆಚ್ಚಳವನ್ನು ಕೋರಿಕೆ ಸಲ್ಲಿಸಿರುವುದನ್ನು ಯದುವೀರ್ ಪ್ರಸ್ತಾಪಿಸಿದ್ದಾರೆ.
7. ಸರ್ಕಾರಿ ಶಾಲೆಗಳ ದುಃಸ್ಥಿತಿ: ಕರ್ನಾಟಕದ ಸರ್ಕಾರಿ ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಶೌಚಾಲಯಗಳು ಹದಗೆಟ್ಟಿದ್ದು, ಶಾಲಾ ಕಟ್ಟಡಗಳ ಛಾವಣಿಗಳು ಸೋರುತ್ತಿವೆ. ಸರ್ಕಾರಿ ಶಾಲಾ ಶಿಕ್ಷಣವನ್ನು ಅವಲಂಬಿಸಿರುವ ಬಡ ಮಕ್ಕಳಿಗೆ ಯಾವುದೇ “ಗ್ಯಾರಂಟಿ” ಇಲ್ಲದಂತಾಗಿದೆ ಎಂದು ಯದುವೀರ್ ಕಳವಳ ವ್ಯಕ್ತಪಡಿಸಿದ್ದಾರೆ.
8. ಶಿಕ್ಷಕರ ಹುದ್ದೆಗಳ ಖಾಲಿ ಮತ್ತು ‘ತಾತ್ಕಾಲಿಕ ನೇಮಕಾತಿ’: ಕರ್ನಾಟಕದಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್ ಸರ್ಕಾರ “ತಾತ್ಕಾಲಿಕ ನೇಮಕಾತಿ”ಯ ಬಗ್ಗೆ ದೊಡ್ಡ ಹೇಳಿಕೆಗಳನ್ನು ನೀಡುತ್ತಾ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಭವಿಷ್ಯವನ್ನು ತುಳಿದುಹಾಕುತ್ತಿದೆ ಎಂದು ಸಂಸದರು ಆರೋಪಿಸಿದ್ದಾರೆ.
9. ತಾಯಂದಿರ ಮರಣ ಪ್ರಮಾಣದಲ್ಲಿ ಹೆಚ್ಚಳ: 2024ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ಕರ್ನಾಟಕದಲ್ಲಿ ಸಂಭವಿಸಿದ ಗರ್ಭಿಣಿಯರು ಹಾಗೂ ತಾಯಂದಿರ ಸಾವುಗಳಲ್ಲಿ 70% ತಡೆಗಟ್ಟಬಹುದಾಗಿತ್ತು ಎಂದು ಆಡಿಟ್ ವರದಿ ತಿಳಿಸಿದೆ. ಸರ್ಕಾರದ ವ್ಯವಸ್ಥೆಯಲ್ಲಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತೋರಿದ ನಿರಾಸಕ್ತಿಯಿಂದ ತಾಯಂದಿರ ಸಾವು ಹೆಚ್ಚಾಗಿರುವುದನ್ನು ಯದುವೀರ್ ಉಲ್ಲೇಖಿಸಿದ್ದಾರೆ.
10. ಆಡಳಿತದ ಹದಗೆಟ್ಟ ಸ್ಥಿತಿ: ಈ ‘ಸಾಧನಾ ಸಮಾವೇಶ’ವು ಆಡಳಿತದ ಆಚರಣೆಯಲ್ಲ, ಬದಲಾಗಿ ಆಡಳಿತ ಹದಗೆಟ್ಟಿರುವುದನ್ನು ಮರೆಮಾಚಿಸುವ ಪ್ರದರ್ಶನವಾಗಿದೆ ಎಂದು ಯದುವೀರ್ ಹೇಳಿದ್ದಾರೆ. ಕೇವಲ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ, ಕರ್ನಾಟಕವು ಹೆಚ್ಚುತ್ತಿರುವ ಸಾಲ, ಸುಳ್ಳು ಭರವಸೆಗಳು, ಕುಸಿಯುತ್ತಿರುವ ಸಾರ್ವಜನಿಕ ಸೇವೆಗಳು ಮತ್ತು ಸಾರ್ವಜನಿಕ ಕಲ್ಯಾಣಕ್ಕಿಂತ ಆಂತರಿಕ ಅಧಿಕಾರ ಹೋರಾಟಗಳ ಮೇಲೆ ಹೆಚ್ಚು ಗಮನಹರಿಸಿದ ಸರ್ಕಾರವನ್ನು ಕಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮುಂದಿನ ಇತಿಹಾಸದಲ್ಲಿ ಈ ಕಾಂಗ್ರೆಸ್ ಸರ್ಕಾರವನ್ನು ಗ್ಯಾರಂಟಿಗಳಿಗಾಗಿ ಅಲ್ಲ, ಬದಲಾಗಿ ಎಷ್ಟು ದುರುಪಯೋಗವಾಯಿತು ಎಂಬುದಕ್ಕಾಗಿ ನೆನಪಿಸಿಕೊಳ್ಳಲಾಗುತ್ತದೆ” ಎಂದು ಯದುವೀರ್ ಒಡೆಯರ್ ತಮ್ಮ ಟ್ವೀಟ್ಗಳ ಸರಣಿಯನ್ನು ಮುಕ್ತಾಯಗೊಳಿಸಿದ್ದಾರೆ.








