75ರ ಸಡಗರದಲ್ಲಿ ನನ್ನ ಬದುಕಿನ ದೊರೆ..ನನ್ನ ಪೊಪ್ಪ…….
ಏಂತಿಮಾರ್ ಬೀಡು ಕರುಣಾಕರ ರೈ.. ನನ್ನ ಪೊಪ್ಪ.. ನನ್ನ ಜನುಮದಾತ.. ಅಕ್ಷರಮಾಲೆ ಕಲಿಸಿದ ಮೊದಲ ಗುರು…ಬುದ್ಧಿ ಹೇಳಿ ಜೀವನದ ಮೌಲ್ಯಗಳನ್ನು ಹೇಳಿಕೊಟ್ಟು ಬದುಕಿಗೆ ಅರ್ಥ ಕಲ್ಪಿಸಿದ ನನ್ನ ದೊರೆ. ಪ್ರತಿ ಹೆಜ್ಜೆಯಲ್ಲೂ ಎಡವಿ ಬಿದ್ದಾಗ ಕೈ ಹಿಡಿದು ಮುನ್ನಡೆಸಿದ ನನ್ನ ಪಾಲಿನ ಸಾರಥಿ… ನಾವಿಕ..ಏಳು ಬೀಳುಗಳ ನಡುವೆಯೂ ಕಷ್ಟ ಅನ್ನೋ ಪದವನ್ನೇ ಅಳಿಸಿಹಾಕುತ್ತಿರುವ ನನ್ನ ಪ್ರೀತಿಯ ಸಾಹುಕಾರ. ಚಿಕ್ಕ ಮಗುವಿನಂತೆ ನೋಡಿಕೊಂಡು ಮನೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಿರುವ ನನ್ನ ಮನೆಯ ಕಾವಲುಗಾರ. ಸೋಲು, ಹತಾಶೆಯಿಂದ ಗಲಿಬಿಲಿಗೊಂಡಾಗ ನಾನಿದ್ದೇನೆ ಎಂದು ಧೈರ್ಯ, ಆತ್ಮವಿಶ್ವಾಸ ತುಂಬುವ ನನ್ನ ಯಜಮಾನ. ತಾಳ್ಮೆ, ಪರಿಶ್ರಮ, ನಂಬಿಕೆ, ಧೈರ್ಯ, ಪ್ರೀತಿ, ತ್ಯಾಗ ಮನೋಭಾವನೆಯ ಮೂಲಕ ಸದಾ ಸರ್ವಸ್ವವನ್ನು ಧಾರೆ ಎರೆಯುತ್ತಿರುವ ನನ್ನ ಅನ್ನದಾತ. ಸ್ವಂತ ಉದ್ಯಮ (ಸಾಕ್ಷಟಿವಿ.ಕಾಮ್) ನಡೆಸುವ ನನ್ನ ಹುಚ್ಚುತನಕ್ಕೆ ಬೆನ್ನುಲುಬಾಗಿ ನಿಲ್ಲುತ್ತಿರುವ ನನ್ನ ಒಡೆಯ. ಸತ್ಯ, ಧರ್ಮ, ಪ್ರಾಮಾಣಿಕತೆಯಿಂದ ಬದುಕಬೇಕು ಎಂದು ಬೋಧನೆ ಮಾಡುತ್ತಿರುವ ಆಚಾರ್ಯ. ಬದುಕಿಗೆ ದಾರಿ ದೀಪ ತೋರಿಸಿ ಬಾಳಿಗೆ ಬೆಳಕಾಗುತ್ತಿರುವ ಗುಣವಂತ. ನನ್ನ ಊರಿನಲ್ಲಿ, ಈ ಸಮಾಜದಲ್ಲಿ ನನಗೊಂದು ಸ್ಧಾನಮಾನವನ್ನು ನೀಡಿದ ನನ್ನ ನೆಚ್ಚಿನ ಗಾಡ್ ಫಾದರ್… ಎವರ್ ಗ್ರೀನ್ ಹೀರೋ.. ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿರುವ ನನ್ನ ಪಾಲಿನ ಮಹಾ ನಾಯಕ. ಜಗತ್ತನ್ನು ಪರಿಚಯಿಸಿ, ಪ್ರೀತಿ, ವಾತ್ಸಲ್ಯವನ್ನು ನೀಡುತ್ತಿರುವ ಆತ್ಮಿಯ ಗೆಳೆಯ.. ಸ್ನೇಹಜೀವಿ ನನ್ನ ಪೊಪ್ಪ. ಅಹಂ, ಕಲ್ಮಶ, ದ್ವೇಷ, ಅಸೂಯೆ ಇಲ್ಲದೆ ನಿಷ್ಕಂಳಕ ಬದುಕು ಸಾಗಿಸುತ್ತಿರುವ ಹೃದಯವಂತ. ಕೃಷಿ ಭೂಮಿಯನ್ನು ಹಸಿರಿನಿಂದ ಕಂಗೊಳಿಸುತ್ತ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕ್ತಿರುವ ನನ್ನ ಜಮೀನ್ದಾರ. ಅಪ್ಪನ ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಯುತ್ತಿರುವ ನನ್ನ ಅಮ್ಮ ಪುಣ್ಯವಂತೆ. ಇಂತಹ ಅಪ್ಪ – ಅಮ್ಮನನ್ನು ಪಡೆದ ನಾನೇ ಅದೃಷ್ಟವಂತ

ಹೌದು, ನನ್ನ ಪೊಪ್ಪನಿಗೆ ಈ ವರ್ಷ (ಜನವರಿ 4) 75ರ ಹುಟ್ಟುಹಬ್ಬದ ಸಂಭ್ರಮ. ಹಾಗಂತ ಯಾವತ್ತು ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡವರಲ್ಲ. ಪ್ರತಿ ಹುಟ್ಟುಹಬ್ಬದಂದು ನಾನು ವಿಶ್ ಮಾಡಿದಾಗ, ಅವರು ಒಂದು ವರ್ಷ ಜಾಸ್ತಿ ಆಯ್ತು ಅನ್ನೋದು ಅವರ ಮಾಮೂಲಿ ಪದ. ಆದ್ರೆ ಈ ಬಾರಿಯ 75ನೇ ಹುಟ್ಟುಹಬ್ಬಕ್ಕೆ ಒಂದು ಸಪ್ರೈಸ್ ಕೊಡುವ ಅಂತ ಅಮ್ಮ, ನಾನು, ನನ್ನ ಪತ್ನಿ, ತಮ್ಮ, ನಾದಿನಿ, ತಂಗಿ, ಭಾವ, ಮೊಮ್ಮಕ್ಕಳು ಪ್ಲ್ಯಾನ್ ಮಾಡಿಕೊಂಡಿದ್ದೇವು. ಆದ್ರೆ ಆ ಸಪ್ರೈಸ್ ಅನ್ನು ಸಪ್ರೈಸ್ ಆಗಿ ಇಡಲು ಮನಸು ಒಪ್ಪಲಿಲ್ಲ. ಹಾಗಾಗಿ ಬರ್ತ್ ಡೇ ನೆಪದಲ್ಲಿ ಸಿಂಪಲ್ ಆಗಿ ಫ್ಯಾಮಿಲಿ ಗೆಟ್ ಟುಗೇದರ್ ಮಾಡುವ ಪ್ಲ್ಯಾನ್ ರೆಡಿಯಾಗಿತ್ತು. ಆದ್ರೆ ಮೊಮ್ಮಕ್ಕಳಾದ ಸಾಕ್ಷ, ವಿಹಾರ್ ಅಜ್ಜನ 75ನೇ ಬರ್ತ್ ಡೇಗೆ ಮಾಸ್ಟರ್ ಪ್ಲ್ಯಾನ್ ಮಾಡಿ ಅವರ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಮಾಡಿದ್ದರು.

ಈ ನಡುವೆ, ನಮ್ಮ ಸಪ್ರೈಸ್ ಪ್ಲ್ಯಾನ್ ಉಲ್ಟಾವಾದ್ರೂ ನಮಗೆ ಪೊಪ್ಪನೇ ಸಪ್ರೈಸ್ ಕೊಟ್ಟುಬಿಟ್ಟರು. ನಮ್ಮ ಫ್ಯಾಮಿಲಿ ಜೊತೆಗೆ ಅವರ ಒಡನಾಡಿಗಳಿಗೂ ಬರ್ತ್ಡೇ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ರು. ಆದ್ರೆ ಇದು ಕೂಡ ಗುಟ್ಟಾಗಿ ಉಳಿಯಲಿಲ್ಲ . ನನ್ನ 75ನೇ ಹುಟ್ಟುಹಬ್ಬವನ್ನು ಮಕ್ಕಳು ಆಚರಿಸುತ್ತಿದ್ದಾರೆ. ಜೊತೆಗೆ ಮೊಮ್ಮಗ (ಧನ್ವಿತ್) ನಾಮಕರಣವೂ ಇದೆ. ನೀವೂ ಬನ್ನಿ ಎಂದು ಆಹ್ವಾನ ನೀಡುತ್ತಿರುವ ವಿಷ್ಯ ಅಮ್ಮನ ಕಿವಿಗೂ ಬಿದ್ದಿತ್ತು.. ಅಂದ ಮೇಲೆ ಅದು ನಮ್ಮ ಕಿವಿಗೂ ತಲುಪದಿರಲು ಸಾಧ್ಯವೇ ಇರಲಿಲ್ಲ. ಸರಿ ಅಂತ ಇಡೀ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಆಪ್ತಮಿತ್ರ, ಪ್ರೀತಿಯ ಶಿಷ್ಯ ದಾಮೋದರ್ ದೊಂಡೋಲೆಗೆ ವಹಿಸಿಕೊಟ್ಟೆ.
ಸರಿ ಕಾರ್ಯಕ್ರಮದ ಪ್ಲ್ಯಾನ್ ಏನು ಸನತ್ ಅಂತ ದಾಮು ಕೇಳಿದಾಗ, ಏನಿಲ್ಲ… ದಾಮು.. ಕೇಕ್ ಕಟ್ ಮಾಡಿ, ಜಸ್ಟ್ ಸೆಲೆಬ್ರೆಷನ್, ಸ್ವಲ್ಪ ಗೇಮ್ಸ್, ಮಕ್ಕಳ ಡಾನ್ಸ್, ಸಾಂಗ್ ಅಷ್ಟೇ… ಆಮೇಲೆ ಎಣ್ಣೆ, ಊಟ ಅಂತ ಹೇಳಿದೆ. ಆದ್ರೆ ದಾಮು ಇಡೀ ಕಾರ್ಯಕ್ರಮದ ಸ್ವರೂಪವನ್ನೇ ಬದಲಾಯಿಸಿಬಿಟ್ಟ. ಅಮ್ಮ, ನಾನು, ತಮ್ಮ, ತಂಗಿ,ನಮ್ಮ ತರವಾಡು ಏಂತಿಮಾರ್ ಬೀಡು ಮನೆಯ ಯಜಮಾನ ದೊಡ್ಡಪ್ಪ, ಅತ್ತೆಯಂದಿರು, ಭಾವಂದಿರು ಎಲ್ಲರೂ ಪೊಪ್ಪನ ಗುಣಗಳನ್ನು ಗುಣಗಾನ ಮಾಡುವಂತೆ ಮಾಡಿದ್ದ ದಾಮು. ಪೊಪ್ಪನ ಅಕ್ಕನ ಮಕ್ಕಳು..ಅಣ್ಣದಿಂರ ಮಕ್ಕಳು, ತಮ್ಮನ ಮಕ್ಕಳು, ಎಲ್ಲಾ ಸೇರಿ ಸನ್ಮಾನಿಸಿದ್ರೆ, ನಾವು ಪೊಪ್ಪನಿಗೆ ಕಿರುಕಾಣಿಕೆಯನ್ನು ನೀಡಿ ಗೌರವಿಸಿದೆವು. ಇದೇ ಗುಂಗಿನಲ್ಲಿದ್ದ ನಮಗೆ ಪೊಪ್ಪನ ಸಾಮಾಜಿಕ ಕಾರ್ಯಗಳನ್ನು ನೆನಪು ಮಾಡಿದ್ದು ನಮ್ಮ ಚಿಕ್ಕಪ್ಪ. ಯಾಕಂದ್ರೆ ಕಳೆದ 30 ವರ್ಷಗಳಿಂದ ಪೊಪ್ಪ ಸ್ಥಳೀಯ ರಾಜಕಾರಣ, ಸಹಕಾರ ಕ್ಷೇತ್ರದಿಂದ ದೂರವೇ ಉಳಿದಿದ್ದರು. ಚಿಕ್ಕ ವಯಸ್ಸಿನಲ್ಲೇ ಯುವಕ ಮಂಡಲದ ಅಧ್ಯಕ್ಷ್ಯನಾಗಿ, ಮಂಡಲ ಪಂಚಾಯತ್ ಸದಸ್ಯನಾಗಿ, ಶಾಲಾಭಿವೃದ್ದಿಯ ಸಮಿತಿಯ ಅಧ್ಯಕ್ಷನಾಗಿ, ಸಹಕಾರಿ ಬ್ಯಾಂಕ್ನ ನಿರ್ದೇಶಕನಾಗಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಸಮುದಾಯದ ಪದಾಧಿಕಾರಿಯಾಗಿ ನಮ್ಮೂರಿನ ದೈವ ದೇವರ ಉತ್ಸವದ ಗೌರವಾಧ್ಯಕ್ಷನಾಗಿ ಸೇವೆ ಸಲ್ಲಿಸಿರುವುದನ್ನು ನನ್ನ ಚಿಕ್ಕಪ್ಪ ನೆನಪಿಸಿಕೊಂಡ್ರು. ಆಗ ನನಗೆ ಅನ್ನಿಸಿದ್ದು ಹೌದಲ್ವಾ.. ನಾನು ಇದನ್ನೆಲ್ಲಾ ಮರೆತುಬಿಟ್ಟಿದ್ದೆ ಅಂತ.. ಆದ್ರೆ ಆ ಕ್ಷಣ ಆ ದಿನಗಳು ಒಂದು ಕ್ಷಣ ನನ್ನ ಕಣ್ಣ ಮುಂದೆ ಹೋದವು.
ಇನ್ನು ನನ್ನ ಪೊಪ್ಪನ ಬರ್ತ್ಡೇ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದು ನನಗೆ ಅಕ್ಷರ ಪದ ಜೋಡಣೆ ಹೇಳಿಕೊಟ್ಟ ನನ್ನ ಪ್ರೀತಿಯ ಶಿಕ್ಷಕರು. ಶಾಲಾ ಕೌಂಪೌಂಡ್ನಲ್ಲಿ ತೆಂಗಿನ ಸಸಿಯನ್ನು ನೆಡಲು ನನ್ನ ಅಜ್ಜ -ದೊಡ್ಡನನ್ನು ಪ್ರೀತಿಯಿಂದಲೇ ರೇಗಿಸುತ್ತಿದ್ದ ಶಿಕ್ಷಕರು ಅವರು. ಎಲಿಯಮ್ಮ ಟೀಚರ್, ಸಾರಮ್ಮ ಟೀಚರ್, ಮೇರಿ ಟೀಚರ್, ಚಾಕೋ ಮಾಸ್ಟರ್, ಉಲಹನ್ನನ್ ಮಾಸ್ಟರ್ ನನ್ನ ಬದುಕಿಗೆ ದಾರಿ ತೋರಿಸಿದವರು. ನೀವು ನಂಬುತ್ತಿರೋ ಇಲ್ವೋ ಗೊತ್ತಿಲ್ಲ.. ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಆಟವನ್ನು ಕಣ್ತುಂಬಿಕೊಂಡಿದ್ದು ಇದೇ ಸಾರಮ್ಮ ಟೀಚರ್ ಮತ್ತು ಚಾಕೋ ಮಾಸ್ಟರ್ ಮನೆಯ ಟಿವಿಯಲ್ಲಿ. ನನ್ನ ಮನದಲ್ಲಿ ಸಚಿನ್ ಆಟ ಆವರಿಸಿಕೊಂಡಿದ್ದು ಕೂಡ ಟೀಚರ್ ಮನೆಯಲ್ಲಿ. ವಿನೋದ್ ಕಾಂಬ್ಳಿ ಇಂಗ್ಲೆಂಡ್ ವಿರುದ್ಧ ಡಬಲ್ ಸೆಂಚೂರಿ ಹೊಡೆದಿರುವುದನ್ನು ನೋಡಿರುವುದು ಕೂಡ ಸಾರಮ್ಮ ಟೀಚರ್ ಮನೆಯಲ್ಲಿ. ಅದಿರಲಿ, ಶಾಲಾಭಿವೃದ್ದಿಯ ಅಧ್ಯಕ್ಷನಾಗಿ ನನ್ನ ಪೊಪ್ಪನ ಸೇವೆಯನ್ನು ನನ್ನ ಪ್ರೀತಿಯ ಟೀಚರ್ ಗಳು ಮೆಲುಕು ಹಾಕಿಕೊಂಡಾಗ ಗೊತ್ತಿಲ್ಲದ ಹಾಗೇ ಕಣ್ಣಂಚಿನಲ್ಲಿ ಆನಂದ ಭಾಷ್ಪ ಸುರಿಯುತ್ತಿತ್ತು. ಇನ್ನೊಂದೆಡೆ ಉಲಹನ್ನನ್ ಮಾಸ್ಟರ್ ನಾನು ದೈಹಿಕ ಶಿಕ್ಷಕನಾಗಲು ಪೊಪ್ಪನೇ ಪ್ರೇರಣೆ ಅಂದಾಗ, ಎಲಿಯಮ್ಮ ಟೀಚರ್ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯಲು ಕಾರಣೀಕರ್ತರು ಪೊಪ್ಪ ಅಂದಾಗ ನನಗೆ ಹೆಮ್ಮೆ ಅನ್ನಿಸಿತ್ತು, ಸಾರಮ್ಮ ಟೀಚರ್ ಮತ್ತು ಮೇರಿ ಟೀಚರ್ ಅಮ್ಮ, ಪೊಪ್ಪ, ನಾವು ಮೂವರ ಮಕ್ಕಳ ಸಂಸ್ಕಾರ, ಗುಣಗಳನ್ನು ಕೊಂಡಾಡಿದಾಗ ಇದಕ್ಕಿಂತ ಇನ್ನೇನು ಬೇಕು ಅನ್ನಿಸಿತ್ತು. 40 ವರ್ಷಗಳ ಹಿಂದಿನ ದಿನಗಳನ್ನು ಇನ್ನೂ ನೆನಪಲ್ಲಿಟ್ಟುಕೊಂಡಿದ್ದಾರೆ ಅಂದ್ರೆ ಅದಕ್ಕಿಂತ ಮಿಗಿಲು ಇನ್ನೇನಿದೆ.. ಅಲ್ವಾ..?
ಅಂದ ಹಾಗೇ, ಪೊಪ್ಪ ನನ್ನ ಬದುಕಿನ ಮಾರ್ಗದರ್ಶಕ. ಪ್ರತಿ ನಿರ್ಧಾರದ ಸಾಧಕ ಬಾಧಕಗಳನ್ನು ಹೇಳುತ್ತಿರುವ ಸಲಹೆಗಾರ. ಆದ್ರೆ ನನ್ನ ನಿರ್ಧಾರವನ್ನು ಪ್ರಶ್ನೆ ಮಾಡುವ ಜಾಯಮಾನ ಅವರದಲ್ಲ. ನಿನಗೆ ಏನು ಅನ್ಸುತ್ತೋ ಅದನ್ನು ಮಾಡು ಅನ್ನೋ ಸ್ವಾತಂತ್ರ್ಯವನ್ನು ಕೊಡುತ್ತಿರುವ ಪ್ರೀತಿಯ ಸರ್ವಧಿಕಾರಿ. ಯಾಕಂದ್ರೆ, ನನ್ನ ಮಗ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಾನೆ ಅನ್ನೋ ಅಚಲ ನಂಬಿಕೆ, ಅದಮ್ಯ ವಿಶ್ವಾಸ ಅವರಲ್ಲಿದೆ. ಹಾಗಂತ ಕೆಲವೊಂದು ಸೀಕ್ರೆಟ್ ವಿಚಾರಗಳು ಗೊತ್ತಿದ್ರೂ ಅದಕ್ಕೆ ಸರಿಯಾದ ಸಮಯದಲ್ಲಿ ಎಚ್ಚರಿಕೆ ನೀಡುವುದನ್ನು ಅವರು ಮರೆಯುವುದಿಲ್ಲ. ಇವತ್ತಿಗೂ ನನ್ನ ಸಂಬಳ ಎಷ್ಟು..? ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂದು ಕೇಳಿದವರಲ್ಲ. ಬಸ್ ಟಿಕೆಟ್ನ ದುಡ್ಡು, ಪೆಟ್ರೋಲ್ ಕಾಸ್, ಹೊಟೇಲ್ ಬಿಲ್ ನನ್ನ ಕೈಯಿಂದ ಕೊಡಿಸಿದವರಲ್ಲ. ನನಗೆ ಎಲ್ಲವನ್ನು ಕೊಡಿಸುತ್ತಿರುವ ಜಾದುಗಾರ… ಸ್ವಾಭಿಮಾನಿಯಾಗಿ ಮಕ್ಕಳ ಬದುಕಿಗೆ ಬೆಳಕಾಗುತ್ತಿರುವ ನನ್ನ ಪೊಪ್ಪನನ್ನು ಎಷ್ಟು ಕೊಂಡಾಡಿದ್ರೂ ಅದಕ್ಕೆ ಪದಗಳೇ ಸಾಕಾಗುತ್ತಿಲ್ಲ…
ಅಷ್ಟಕ್ಕೂ ನನ್ನ ಪೊಪ್ಪ ಅದ್ಭುತ ಸಾಧನೆ ಮಾಡಿದ್ದಾರೆ ಅಂತ ನಾನು ಹೇಳಲ್ಲ. ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂಬುದನ್ನು ಹೇಳಿಕೊಡುತ್ತಿದ್ದಾರೆ. ಹಾಗಾಗಿ ನನ್ನ ಪಾಲಿಗೆ ಅವರೇ ದೇವ್ರು. ನನಗೆ ಅವರೇ ರೋಲ್ ಮಾಡೆಲ್. ಪೊಪ್ಪನೇ ಸ್ಪೂರ್ತಿ.. ಪೊಪ್ಪನೇ ಪ್ರೇರಣೆ..ಪೊಪ್ಪನೇ ನನ್ನ ಶಕ್ತಿ. ಪೊಪ್ಪನೇ ಜಗತ್ತು.. ಅಂದ ಹಾಗೇ, ನನ್ನ ಪೊಪ್ಪ ಅತ್ಯುತ್ತಮ ಓಟಗಾರ. ಅದ್ಭುತ ಕಬಡ್ಡಿ ಆಟಗಾರ. ಉತ್ತಮ ವಾಲಿಬಾಲ್ ಆಟಗಾರನೂ ಹೌದು. ಹಾಗೇ ಬ್ಯಾಡ್ಮಿಂಟನ್ ಆಟಗಾರನೂ ಹೌದು.. ಬಹುಶಃ ಅದು ನನಗೆ ರಕ್ತಗತವಾಗಿ ಬಂದಿದೆ. ಅವರು ಆಡಿದ್ದ ಆಟದಲ್ಲೂ ನಾನು ಮುಂಚೂಣಿಯಲ್ಲಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ನನಗೆ ಅಥ್ಲೆಟಿಕ್ ಟ್ರ್ಯಾಕ್ ಹೇಗಿರುತ್ತೆ, ಹೇಗೆ ಓಡಬೇಕು ಎಂದು ಮೊದಲು ಹೇಳಿಕೊಟ್ಟಿರುವುದೇ ನನ್ನ ಪೊಪ್ಪ. ಕ್ರಿಕೆಟ್ ಆಟದ ಮೇಲೆ ಒಲವು ಮೂಡಲು ಕಾರಣ ಅವರು ರೆಡಿಯೋದಲ್ಲಿ ಕೇಳುತ್ತಿದ್ದ ಕಾಮೆಂಟರಿಗಳು. ಗಾವಸ್ಕರ್, ಕಪಿಲ್ ದೇವ್, ವೆಂಗ್ಸರ್ಕಾರ್ ಹೀಗೆ 80ರ ದಶಕದ ಕ್ರಿಕೆಟಿಗರ ಹೆಸರುಗಳು ಮನಸಲ್ಲಿ ಅಚ್ಚೊತ್ತಿದ್ದು ನನ್ನ ಪೊಪ್ಪನಿಂದ. ಪಾಠದ ಜೊತೆ ಆಟಕ್ಕೂ ಹೆಚ್ಚು ಆದ್ಯತೆ ನೀಡಿರುವುದರಿಂದ ನಾನು ಒಬ್ಬ ದೈಹಿಕ ಶಿಕ್ಷಕನಾಗಬೇಕು ಎಂಬ ಆಸೆ ಅವರಲ್ಲಿತ್ತು. ಹಾಗೇ ಸಬ್ ಇನ್ಸ್ಸ್ಪೆಕ್ಟರ್ ಆಗಬೇಕು ಎಂಬ ಬಯಕೆಯೂ ಇತ್ತು, ಆದ್ರೆ ನಾನು ಆಗಿದ್ದು ಒಬ್ಬ ಪತ್ರಕರ್ತ. ಜರ್ನಲಿಸಂ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ರೂ ನನ್ನ ಆಯ್ಕೆಯನ್ನು ಅವರು ಪ್ರಶ್ನೆ ಮಾಡಲಿಲ್ಲ. ಕರಾವಳಿಯ ಜೀವನಾಡಿ ಉದಯವಾಣಿ ಪತ್ರಿಕೆಯ ಕ್ರೀಡಾ ವರದಿಗಾರನಾಗಿದ್ದಾಗ ನನ್ನ ಲೇಖನಗಳನ್ನು ಓದಿ ಖುಷಿಪಡುತ್ತಿದ್ದರು. ಹಾಗೇ ಟಿವಿ ನೈನ್ನ ಬೌಂಡರಿ ಲೈನ್, ಸಮಯದ ಗೇಮ್ ಪ್ಲ್ಯಾನ್ ಕಾರ್ಯಕ್ರಮದ ನನ್ನ ಸ್ಕ್ರಿಪ್ಟ್ ಗಳನ್ನು ಕೇಳಿಸಿಕೊಂಡು ಸೂಪರ್ ಆಗಿದೆ ಅಂತ ಬೆನ್ನುತಟ್ಟುತ್ತಿದ್ದರು. ಅಲ್ಲದೆ ತರಂಗದಲ್ಲಿ ಪ್ರಕಟವಾಗುತ್ತಿದ್ದ ನನ್ನ ಕ್ರೀಡಾ ಲೇಖನಗಳಿಗೆ ಅಪ್ಪ ಅಮ್ಮನೇ ನನ್ನ ಖಾಯಂ ಓದುಗರು.
ಇನ್ನು ನನ್ನ ಬದುಕಿನಲ್ಲಿ ನಾನು ಎರಡು ಬಾರಿ ನನ್ನ ಪೊಪ್ಪನ ಕೈಯಿಂದ ಪೆಟ್ಟು ತಿಂದಿದ್ದೇನೆ. ಆ ಎರಡು ಏಟುಗಳು ನನ್ನ ಬದುಕಿಗೆ ಹೊಸ ತಿರುವನ್ನೇ ನೀಡಿದೆ. ಹಾಗೆ ಸಾಕಷ್ಟು ಬಾರಿ ಬೈಸಿಕೊಂಡಿದ್ದೇನೆ. ಆದ್ರೆ ಅದು ಕೇವಲ 5-10 ನಿಮಿಷಗಳ ಸಿಟ್ಟು ಅಷ್ಟೇ.. ಜೊತೆಯಾಗಿ ಊಟ, ತಿಂಡಿ ತಿನ್ನುವಾಗ ಆ ಸಿಟ್ಟು, ಕೋಪ ಎಲ್ಲವೂ ಮಾಯವಾಗುತ್ತಿತ್ತು. ಮನೆ ಬಿಟ್ಟು ಬೆಂಗಳೂರು ಸೇರಿ ಸುಮಾರು 23 ವರ್ಷವಾಯ್ತು. ಇಷ್ಟು ವರ್ಷಗಳಲ್ಲೂ ಪ್ರತಿ ದಿನ ಐದಾರು ಫೋನ್ ಕಾಲ್ಗಳು ಮಿಸ್ಸೇ ಆಗಿಲ್ಲ. ತಿಂಡಿ, ಊಟ, ರಾತ್ರಿ ಊಟ ಆಯ್ತಾ ಕೇಳಿಕೊಂಡೇ ರಾತ್ರಿ ನಿದ್ದೆ ಮಾಡುವುದು ಅಪ್ಪ – ಅಮ್ಮನ ದಿನಚರಿ. ಸ್ವರದಲ್ಲೇ ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳುತ್ತಿರುವ ಅಪ್ಪ – ಅಮ್ಮನಲ್ಲಿ ಯಾವುದೇ ವಿಷ್ಯವನ್ನು ಮುಚ್ಚಿಡುವ ಮನಸ್ಸು ನನ್ನದಲ್ಲ. ಮನೆಯ ಪ್ರತಿ ವಿಷ್ಯವನ್ನು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಿರುವ ದೊಡ್ಡತನ ನನ್ನ ಪೊಪ್ಪನಲ್ಲಿದೆ. ಹೌದು, ಬದುಕು ಅಂದ್ರೆ ಅದು ನಿಂತ ನೀರಲ್ಲ. ಕಷ್ಟ -ಸುಖ ಸಮನಾವಾಗಿ ಸ್ವೀಕರಿಸಿ ಮುನ್ನಡೆಯುವುದೇ ಜೀವನ. ಇದನ್ನು ಪೊಪ್ಪ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಯಾವತ್ತೂ ಸೋತೆ ಎಂದು ಕೈ ಕಟ್ಟಿ ಕೂರುವ ಹೇಡಿಯಲ್ಲ ಗೆದ್ದೇ ಎಂದು ಬೀಗುವ ಅಹಂಕಾರಿ ಅಲ್ಲ. ನಿನ್ನೆ ನಿನ್ನೇಗೆ.. ಇಂದು ಇಂದಿಗೇ.. ನಾಳೆ ನಾಳೆಗೇ ಅನ್ನೋ ಸೂತ್ರವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅದೇ ಸೂತ್ರವನ್ನು ನಾನು ಬದುಕಿನಲ್ಲಿ ಅಳವಡಿಸಿಕೊಂಡು ಬರುತ್ತಿದ್ದೇನೆ.
ಅದು ಏನೇ ಇರಲಿ, ನನ್ನ ಪೊಪ್ಪ ನನಗೆ ಭೂಮಿಯಲ್ಲಿ ನಡೆದಾಡುವುದನ್ನು ಹೇಳಿಕೊಡುತ್ತಿದ್ದಾರೆ. ರೆಕ್ಕೆ ಬಲಿತಮೇಲೆ ಆಗಸದಲ್ಲಿ ಕನಸು ಕಟ್ಟಿಕೊಂಡು ಹಾರಾಡುವುದನ್ನು ಹೇಳಿಕೊಡುತ್ತಿದ್ದಾರೆ. ನನ್ನ ಬದುಕಿನಲ್ಲಿ ಯಾವುದನ್ನು ಇಲ್ಲ ಅನ್ನಲಿಲ್ಲ. ಸ್ಚಚ್ಚಂದವಾಗಿ ಬದುಕಲು ದಾರಿ ಮಾಡಿಕೊಡುತ್ತಿದ್ದಾರೆ.
ಹಾಗಂತ ನಿಮ್ಮ (ಪೊಪ್ಪ -ಅಮ್ಮ) ನಿರೀಕ್ಷೆ, ಆಸೆ, ಆಕಾಂಕ್ಷೆಯಂತೆ ನನ್ನ ಬದುಕು ಸಾಗಿಲ್ಲ ಅನ್ನೋ ನೋವು, ಕೊರಗು ನಿಮ್ಮಲ್ಲಿರಬಹುದು. ಆದ್ರೆ ವೃತ್ತಿಪರ ಬದುಕಿನಲ್ಲಿ ನಾನು ಅಂದುಕೊಂಡಿರುವುದನ್ನು ಸಾಧಿಸಿದ್ದೇನೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದೇನೆ. ಸಾಧನೆಗೆ ಗಡಿ ಇಲ್ಲ. ಸಾಧಿಸಬೇಕಾಗಿರುವುದು ಇನ್ನಷ್ಟಿದೆ. ನೀವು ಜೊತೆಯಾಗಿರುವಾಗ ಆ ಚಿಂತೆ ನನಗಿಲ್ಲ…
ನನ್ನ ಮಕ್ಕಳು ಕಷ್ಟ ಅನುಭವಿಸಬಾರದು.. ನೆಮ್ಮದಿಯಾಗಿ ಜೀವನ ಸಾಗಿಸಬೇಕು. ಅದಕ್ಕಾಗಿ ತನ್ನತನವನ್ನೇ ಧಾರೆ ಎರೆಯುತ್ತಿರುವ ನನ್ನ ಪೊಪ್ಪ – ಅಮ್ಮನ ಪ್ರೀತಿ, ವಾತ್ಸಲ್ಯ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಲವ್ ಯೂ ಪೊಪ್ಪ – ಅಮ್ಮ…75ನೇ ಹುಟ್ಟುಹಬ್ಬದ ಸಡಗರಲ್ಲಿದ್ದ ನನ್ನ ಪೊಪ್ಪ ಅಮ್ಮನ ಹಾಗೂ ನಮ್ಮ ಸಂಭ್ರವನ್ನು ಇಮ್ಮಡಿಗೊಳಿಸಿದ್ದ ನನ್ನ ಕುಟುಂಬಸ್ಥರಿಗೆ, ಒಡನಾಡಿಗಳಿಗೆ, ಬಂಧುಮಿತ್ರರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಆಶೀರ್ವಾದ… ಹಾರೈಕೆ ಸದಾ ಇರಲಿ..
ಸನತ್ ರೈ








