ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ (Mysore Dasara) ನಾದ ಬ್ರಹ್ಮ ಹಂಸಲೇಖ (Hamsaleka) ಅವರು ಚಾಲನೆ ನೀಡಿದ್ದಾರೆ.
ಚಾಮುಂಡೇಶ್ವರಿ (Chamundeshwari) ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆ.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ವೆಂಕಟೇಶ್, ಮುನಿಯಪ್ಪ ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿ ದೇವೇಗೌಡ, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಶ್ರೀವತ್ಸ, ಹರೀಶ್ ಗೌಡ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮೇಯರ್ ಶಿವಕುಮಾರ್ ಇದ್ದರು.
ಈ ವೇಳೆ ಮಾತನಾಡಿದ ಹಂಸಲೇಖ, ರಾಜ್ಯವು ಏಕೀಕರಣವಾಗಿ ಐವತ್ತು ವರ್ಷಗಳಾಗಿವೆ. ಇದನ್ನು ಐದಶ ಎಂದು ಕರೆಯೋಣ. ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷವಾಗಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಬಹಳ ಬೆಲೆ ಬಾಳುವಂತಹದ್ದು. ಈ ಅವಕಾಶಕ್ಕಾಗಿ ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದು ನಾದಬ್ರಹ್ಮ ಹಂಸಲೇಖ ಹೇಳಿದರು.
ನಾನು ಈಗ ಕನ್ನಡಿಗರ ಆಶಯದಂತೆ ಕನ್ನಡದ ದೀಪ ಹಚ್ಚಿದ್ದೇನೆ. ದಸರಾ ಎಂಬುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ, ವಿಜಯನಗರ ಮಹಾಸಾಮ್ರಾಜ್ಯದಿಂದ ಆರಂಭವಾಗಿದೆ. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು, ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದು ಹೇಳಿದ್ದಾರೆ.