ಬೆಂಗಳೂರು : ಭಾರತವನ್ನು ವಿಶ್ವಗುರು ಮಾಡ್ತೀನಿ ಅಂತ ಹೇಳಿ, ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರಧಾನಿಗಳ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಈ ವೇಳೆ ಹಾರೈಸುತ್ತೇನೆ. ಮೋದಿಯವರ ಜನ್ಮದಿನದ ಆಚರಣೆಯನ್ನು ಯಾರೂ ಬೇಡ ಅಂದಿಲ್ಲ, ಆದರೆ ಕೋಟ್ಯಂತರ ರೂಪಾಯಿ ಸುರಿದು ಜಾಹೀರಾತು ನೀಡಿ ಮಾಡದೇ ಇರುವ ಕೆಲಸಗಳನ್ನೆಲ್ಲಾ ಮೋದಿಯ ಸಾಧನೆ ಎಂದು ಸುಳ್ಳು ಪ್ರಚಾರ ಪಡೆಯುತ್ತಿರುವುದಕ್ಕಷ್ಟೇ ನಮ್ಮ ವಿರೋಧ.
ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಸಾಧನೆಗಳೆಂದರೆ, ಭಾರತದ ಜಿಡಿಪಿಯನ್ನು -23% ಗೆ ಕೊಂಡೊಯ್ದಿರುವುದು, ನಿರುದ್ಯೋಗ ಪ್ರಮಾಣವನ್ನು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿಸಿರುವುದು, ಪೆಟ್ರೋಲ್ ಡೀಸೆಲ್ ಬೆಲೆ ನೂರರ ಆಸುಪಾಸಿಗೆ ತಂದು ನಿಲ್ಲಿಸಿರುವುದು ಎಂದು ಕುಟುಕಿದ್ದಾರೆ.
ದೇಶದ ಯುವಜನತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಭರವಸೆ ಇಟ್ಟು ಮತ ನೀಡಿದ್ದರು, ಇಂದು ಅದೇ ಯುವಜನಾಂಗ ಉದ್ಯೋಗವಿಲ್ಲದೆ ಖಿನ್ನತೆ ಅನುಭವಿಸುತ್ತಿದೆ. ಕೃಷಿ ಕ್ಷೇತ್ರವೊಂದನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ವಲಯಗಳ ಪ್ರಗತಿ ಋಣಾತ್ಮಕವಾಗಿದೆ. ಇದರಿಂದ ರಾಷ್ಟ್ರದ ಭವಿಷ್ಯಕ್ಕೆ ಅಂಧಕಾರ ಆವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿ, ಈಗ ಇರುವ ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದರಿಂದ ನೊಂದಿರುವ ಉದ್ಯೋಗವಂಚಿತ ಯುವಜನತೆ ಈ ದಿನವನ್ನು #NationlUnemploymentDay ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.
ಮಾರ್ಚ್ನಲ್ಲಿ 564 ಇದ್ದ ದೇಶದ ಕೊರೊನಾ ಸೋಂಕಿತರ ಪ್ರಮಾಣವನ್ನು ಕೇವಲ ಆರೇ ತಿಂಗಳಲ್ಲಿ 51 ಲಕ್ಷಕ್ಕೆ ಮುಟ್ಟಿಸಿರುವುದೇ ನರೇಂದ್ರ ಮೋದಿ ಅವರ ಮಹತ್ತರ ಸಾಧನೆ. ಭಾರತವನ್ನು ವಿಶ್ವಗುರು ಮಾಡ್ತೀನಿ ಅಂತ ಹೇಳಿ, ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ. ಸದ್ಯ ಸೋಂಕಿತರ ಏರಿಕೆ ಪ್ರಮಾಣದಲ್ಲಿ ಭಾರತವೇ ಮುಂದಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.