ನೀರಜ್ ಸೇರಿ 11 ಕ್ರೀಡಾಪಟುಗಳಿಗೆ ಖೇಲ್ ರತ್ನ..!
ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ. ಈ ಬಾರಿ ಅದನ್ನು 11 ಕ್ರೀಡಾಪಟುಗಳಿಗೆ ನೀಡಲಾಗುತ್ತಿದೆ.
ಟೊಕಿಯೊ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದ ಅಥ್ಲೀಟ್ ನೀರಜ್ ಚೋಪ್ರಾ ಖೇಲ್ರತ್ನವಾಗಿ ಮೂಡಿಬಂದಿದ್ದಾರೆ. 11 ಆಟಗಾರರಿಗೆ ಏಕಕಾಲದಲ್ಲಿ ಖೇಲ್ ರತ್ನ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು.
ನೀರಜ್ ಚೋಪ್ರಾ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಫುಟ್ಬಾಲ್ ಆಟಗಾರ ಸುನೀಲ್ ಛೆಟ್ರಿ, ಕುಸ್ತಿಪಟು ರವಿ ದಹಿಯಾ, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಹಾಕಿ ತಂಡದ ಗೋಲ್ಕೀಪರ್ ಪಿಆರ್ ಶ್ರೀಜೇಶ್, ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್, ಜಾವೆಲಿನ್ ಥ್ರೋ ಅಥ್ಲೀಟ್ ಸುಮಿತ್ ಆಂಟಿಲ್,ಪ್ಯಾರಾ ಶೂಟರ್ ಅವನಿ ಲಖೆರಾ, ಬ್ಯಾಡ್ಮಿಂಟನ್ ಆಟಗಾರ ಕೃಷ್ಣನಗರ ಮತ್ತು ಶೂಟರ್ ನರ್ವಾಲ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರಿಕೆಟಿಗೆ ಶಿಖರ್ ಧವನ್ ಸೇರಿದಂತೆ 35 ಆಟಗಾರರನ್ನು ಅರ್ಜುನ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಪ್ರದರ್ಶನದ ಮೂಲಕ ಭಾರತಕ್ಕೆ ಪುರುಷರ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಗೆದ್ದಿದ್ದರು. ಇದು ಅಥ್ಲೆಟಿಕ್ ವಿಭಾಗದಲ್ಲಿ ಭಾರತ ಒಲಿಂಪಿಕ್ಸ್ ನಲ್ಲಿ ಗೆದ್ದ ಮೊದಲ ಪದಕವಾಗಿತ್ತು. ನೀರಜ್ 87.58 ಮೀಟರ್ ಜಾವೆಲಿನ್ ಎಸೆದಿದ್ದರು.
ಕುಸ್ತಿಪಟು ರವಿಕುಮಾರ್ ದಹಿಯಾ ಒಲಿಂಪಿಕ್ಸ್ನಲ್ಲಿ ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದಿದ್ದರು. ಲೊವ್ಲಿನಾ ಬೊರ್ಗೊಹೈನ್ ಅವರು ಒಲಿಂಪಿಕ್ಸ್ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
40 ವರ್ಷಗಳ ನಂತರ ಹಾಕಿಯಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಅನುಭವಿ ಗೋಲ್ಕೀಪರ್ ಪಿಆರ್ ಶ್ರೀಜೇಶ್ ಅವರನ್ನೂ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ನಲ್ಲಿ ಚಿನ್ನ ಗೆದ್ದ 19 ವರ್ಷದ ಶೂಟರ್ ಅವನಿ ಲೆಖರಾ ಕೂಡ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ಯಾರಾಲಿಂಪಿಕ್ ಜಾವೆಲಿನ್ನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್, ಪುರುಷರ ಬ್ಯಾಡ್ಮಿಂಟನ್ನಲ್ಲಿ ಕೃಷ್ಣ ನಗರ ಮತ್ತು ಪ್ರಮೋದ್ ಭಗತ್ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇವರಲ್ಲದೆ 20 ವರ್ಷದ ಮನೀಶ್ ನರ್ವಾಲ್ ಪಿಸ್ತೂಲ್ ಶೂಟಿಂಗ್ನಲ್ಲಿ ಚಿನ್ನ ಗೆದ್ದಿದ್ದಾರೆ. ಇವರೆಲ್ಲರನ್ನೂ ಖೇಲ್ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತದ ಮಹಿಳಾ ಕ್ರಿಕೆಟ್ನ ಆಧಾರ ಸ್ಥಂಭವಾಗಿರುವ ಮಿಥಾಲಿ ರಾಜ್ 10,000ಕ್ಕೂ ಅಧಿಕ ರನ್ಗಳಿಸಿದ ಏಕೈಕ ಮಹಿಳಾ ಕ್ರಿಕೆಟರ್. ಹೀಗಾಗಿ ಅವರನ್ನು ಕೂಡ ಖೇಲ್ರತ್ನವಾಗಿ ಆಯ್ಕೆಮಾಡಲಾಗಿದೆ.
ಫುಟ್ಬಾಲ್ ತಂಡದ ದಂತಕಥೆ ನಾಯಕ ಸುನಿಲ್ ಛೆಟ್ರಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ಒಂದು ದಶಕದಿಂದ ಭಾರತೀಯ ಫುಟ್ಬಾಲ್ ಅನ್ನು ತನ್ನಷ್ಟಕ್ಕೆ ತಾನೇ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಛೆಟ್ರಿ, ದೇಶದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರ.
125 ಪಂದ್ಯಗಳಲ್ಲಿ 80 ಗೋಲುಗಳನ್ನು ಗಳಿಸಿರುವ ಛೆಟ್ರಿ ಅಜೆರ್ಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಜೊತೆಗೆ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಐದನೇ ಸ್ಥಾನದಲ್ಲಿದ್ದಾರೆ.
ಒಟ್ಟಿನಲ್ಲಿ ಖೇಲ್ ರತ್ನ ಪ್ರಶಸ್ತಿ ಈ ಬಾರಿ ಹಲವರಿಗೆ ಸಿಗುತ್ತಿರುವುದು ದೇಶದಲ್ಲಿ ಕ್ರೀಡಾ ಸಾಧಕರು ಹುಟ್ಟಿಕೊಳ್ಳುತ್ತಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗಿದೆ.