ಸುದೀಕ್ಷಾ ಭಾಟಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಜೀವವಿಮಾ ಹಣದ ಆಸೆಗೆ ಕುಟುಂಬದಿಂದ ಕಟ್ಟುಕತೆ
ಔರಂಗಬಾದ್, ಅಗಸ್ಟ್ 13: ಆಗಂತುಕರು ಬೆನ್ನಟ್ಟಿದ ಹಿನ್ನೆಲೆಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಉತ್ತರ ಪ್ರದೇಶದ 20 ವರ್ಷದ ಯುವತಿಯ ಸಾವಿನ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಕುಟುಂಬವು ಹೇಳಿಕೊಂಡಂತೆ ಸುದೀಕ್ಷಾ ಭಾಟಿ ಅವರನ್ನು ಆಗಂತುಕರು ಹಿಂಬಾಲಿಸಿ ಕಿರುಕುಳ ನೀಡಿರುವುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಜೀವವಿಮಾ ಮೊತ್ತದ ಹಣಕ್ಕಾಗಿ ಅವರ ಕುಟುಂಬ ವರ್ಗ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಅದರ ಆಧಾರದಲ್ಲಿ ಅಮೆರಿಕದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಸುದೀಕ್ಷಾ ಭಾಟಿ ಬೈಕ್ ನಲ್ಲಿ ತನ್ನ ಸಹೋದರನ ಜೊತೆ ತೆರಳುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬ ವರ್ಗ, ಅವರು ಬೈಕಲ್ಲಿ ಔರಂಗಬಾದ್ ಗೆ ತೆರಳುತ್ತಿದ್ದಾಗ ಇಬ್ಬರು ಆಗಂತುಕರು ಅವರ ಬೈಕನ್ನು ಹಿಂಬಾಲಿಸಿ ಕಿರುಕುಳ ನೀಡಿದರು. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ಆರೋಪಿಸಿತ್ತು.
ಸೋಮವಾರ ಬೆಳಿಗ್ಗೆ ಸುದೀಕ್ಷಾ ಭಾಟಿ ಸಾವಿನ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಭಾರಿ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 36 ಗಂಟೆಗಳ ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಇದೀಗ ತನಿಖೆ ಆರಂಭಿಸಿರುವ ಪೊಲೀಸರು ಅಪಘಾತ ನಡೆದ ಸಮಯದಲ್ಲಿ ಅಲ್ಲಿದ್ದರು ಎಂದು ಹೇಳಲಾದ ಸುದೀಕ್ಷಾ ಭಾಟಿ ಅವರ ಚಿಕ್ಕಪ್ಪ ಘಟನೆ ಸಂಭವಿಸಿದ ಸಮಯದಲ್ಲಿ ಅಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಭಾಟಿಯ ಚಿಕ್ಕಪ್ಪ ಅಪಘಾತ ಸಂಭವಿಸಿದ ಎರಡು ತಾಸಿನ ಬಳಿಕವಷ್ಟೇ ಅಲ್ಲಿಗೆ ಬಂದಿದ್ದು, ಬೈಕ್ ಚಲಾಯಿಸುತ್ತಿದ್ದ ಸುದೀಕ್ಷಾ ಭಾಟಿ ಸಹೋದರ ಇತ್ತೀಚೆಗಷ್ಟೇ 10ನೇ ತರಗತಿ ಪಾಸಾಗಿದ್ದ. ಇಬ್ಬರು ವ್ಯಕ್ತಿಗಳು ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎನ್ನಲು ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಅದರ ಆಧಾರದಲ್ಲಿ ಅಮೆರಿಕದ ಪ್ರತಿಷ್ಟಿತ ಮೆಸಾಚುಸೆಟ್ಸ್ನ ಬಾಬ್ಸ್ನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುದೀಕ್ಷಾ ಭಾಟಿಗೆ ಇದಕ್ಕಾಗಿ ದೊಡ್ಡ ಮೊತ್ತದ ಸ್ಕಾಲರ್’ಶಿಪ್ ದೊರೆತಿತ್ತು. ಇದನ್ನು ಜೀವವಿಮಾ ಮೊತ್ತ ಎಂದು ನಂಬಿದ ಆಕೆಯ ಕುಟುಂಬ ವರ್ಗ ಅದನ್ನು ಪಡೆಯಲು ಸುದೀಕ್ಷಾ ಸಾವು ನಿರ್ಲಕ್ಷ್ಯದಿಂದ ಸಂಭವಿಸಿದಲ್ಲ, ಬದಲಾಗಿ ಯುವಕರಿಬ್ಬರ ಕಿರುಕುಳದಿಂದಾದ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.