ಕಿಂಗ್ಸ್ ನದಿಯಲ್ಲಿ ಮೂರು ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ರಕ್ಷಿಸಿ ಮೃತ್ಯುವಿಗೆ ಬಲಿಯಾದ ಭಾರತೀಯ
ನ್ಯೂಯಾರ್ಕ್, ಅಗಸ್ಟ್ 11: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಕೊಚ್ಚಿ ಹೋಗಿದ್ದ ಮೂವರು ಮಕ್ಕಳನ್ನು ರಕ್ಷಿಸಲು ನದಿಗೆ ಹಾರಿ 29 ವರ್ಷದ ಸಿಖ್ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ.
ಮಂಜೀತ್ ಸಿಂಗ್ ಎಂದು ಗುರುತಿಸಲಾಗಿರುವ ಇವರು ಬುಧವಾರ ಸಂಜೆ ಫ್ರೆಸ್ನೊ ಕೌಂಟಿಯ ತನ್ನ ಮನೆಯ ಸಮೀಪ ರೀಡ್ಲಿ ಬೀಚ್ಗೆ ಭೇಟಿ ನೀಡುತ್ತಿದ್ದಾಗ ಕಿಂಗ್ಸ್ ನದಿಯಲ್ಲಿ ಮೂರು ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು ಎಂದು ಸಿಎನ್ಎನ್ ರೀಡ್ಲಿ ಪೊಲೀಸ್ ಇಲಾಖೆಯ ಕಮಾಂಡರ್ ಮಾರ್ಕ್ ಎಡಿಗರ್ ಹೇಳಿದ್ದಾರೆ.
ತನ್ನ ಸೋದರ ಮಾವ ಮತ್ತು ಇತರ ಸ್ನೇಹಿತರೊಂದಿಗೆ ನದಿಯ ಬಳಿ ಬಂದಿದ್ದ ಮಂಜೀತ್ ಸಿಂಗ್ ತನ್ನ ಪೇಟವನ್ನು ತೆಗೆದು ಮಕ್ಕಳನ್ನು ರಕ್ಷಿಸಲು ನದಿಗೆ ಜಿಗಿದಿದ್ದಾರೆ. ದೂರಕ್ಕೆ ತೇಲಿಹೋಗಿದ್ದ ಇಬ್ಬರು ಮಕ್ಕಳನ್ನು ದಡಕ್ಕೆ ಎಳೆದು ತಂದ ಅವರು ಮತ್ತೊಂದು ಮಗುವನ್ನು ದಡಕ್ಕೆ ತಳ್ಳಿದ್ದಾರೆ. ಆದರೆ ದುರದೃಷ್ಟವಶಾತ್ ಸಹಾಯ ಮಾಡಲು ಹೋದ ಅವರು ಮಾತ್ರ ನೀರೊಳಗೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ರೀಡ್ಲಿ ಪೊಲೀಸ್ ಕಮಾಂಡರ್ ಮಾರ್ಕ್ ಎಡಿಗರ್ ಹೇಳಿದ್ದಾರೆ. ಸುಮಾರು 40 ನಿಮಿಷಗಳ ನಂತರ ಸ್ಪಂದಿಸದ ಸ್ಥಿತಿಯಲ್ಲಿ ಮಂಜೀತ್ ಸಿಂಗ್ ಸಿಕ್ಕಿದ್ದು, ಅವರನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಇತ್ತ ಅವರು ರಕ್ಷಿಸಿರುವ ಇಬ್ಬರು ಮಕ್ಕಳು ಸುರಕ್ಷಿತರಾಗಿದ್ದು, ಮತ್ತೊಂದು ಮಗು ಸುಮಾರು 15 ನಿಮಿಷಗಳ ಕಾಲ ನೀರೊಳಗಿದ್ದ ಕಾರಣ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಂಗ್ ಎರಡು ವರ್ಷಗಳ ಹಿಂದೆ ಭಾರತದಿಂದ ಕ್ಯಾಲಿಫೋರ್ನಿಯಾಗೆ ತೆರಳಿದರು.