ತೈಲ ಬೆಲೆ ಇಳಿಕೆ | ಸೋಶಿಯಲ್ ಮೀಡಿಯಾದಲ್ಲಿ ಟೀಕೆ
ಬೆಂಗಳೂರು : ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿಹಿ ಸುದ್ದಿ ನೀಡಿವೆ.
ಪೆಟ್ರೋಲ್ ಬೆಲೆ ಮತ್ತು ಡಿಸೇಲ್ ಬೆಲೆಯನ್ನು ಕಡಿಮೆ ಮಾಡಿ ದೀಪಾವಳಿಗೆ ಸರಕಾರಗಳು ಗಿಫ್ಟ್ ನೀಡಿವೆ.
ಬೆಲೆ ಇಳಿಕೆ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ ಜನರಿಗೆ ದೀಪಾವಳಿ ಉಡುಗೊರೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇಂಧನ ದರ ಇಳಿಕೆ ಮಾಡಿ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಜನರಿಗೆ ನೆರವಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ನಿಲ್ಲದ ಟೀಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಿದ್ದರೂ ಸೋಶಿಯಲ್ ಮಿಡಿಯಾದಲ್ಲಿ ಟೀಕೆ ಎದುರಾಗಿದೆ.
ಬಿಜೆಪಿ ಸರ್ಕಾರ ಬೈ ಎಲೆಕ್ಷನ್ ಸೋಲಿನಿಂದಾಗಿ ಬೆಲೆ ಕಡಿಮೆ ಮಾಡಿದೆ. ಜನರಿಗೆ ಬೆಲೆ ಕಡಿತಗೊಳಿಸಬೇಕಾದರೇ ಎಲೆಕ್ಷನ್ ನಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಟೀಕಿಸಿದ್ದಾರೆ.
”ಚುನಾವಣೆಯಲ್ಲಿ ಮತದಾರ ಮಾಡಿದ ಮ್ಯಾಜಿಕ್ನಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 5 ರೂ, 10 ರೂ.ನಷ್ಟು ಕಡಿತಗೊಳಿಸಿದೆ.
40 ರೂ. ಹೆಚ್ಚು ಮಾಡಿ, 5 ರೂ.ಕಡಿಮೆ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ಬಿಜೆಪಿ ಸೋತಂಗೆಲ್ಲ ಜನರಿಗೆ ಬಂಪರ್. ಹ್ಯಾಪಿ “ದಿವಾಳಿ” ಟು ಬಿಜೆಪಿ” ಎಂದು ನೆಟ್ಟಿಗರು ಕೇಸರಿ ಪಡೆಯನ್ನು ಕುಟುಕಿದ್ದಾರೆ.