2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಮರೆಯೋಕೆ ಸಾಧ್ಯವೇ ಇಲ್ಲ. ಅಂದಿನ ಪಂದ್ಯ ವಿಶ್ವ ಕ್ರಿಕೆಟ್ ನ ರೋಚಕ ಪಂದ್ಯಗಳಲ್ಲಿ ಒಂದು. ಅಂದು ವಿಶ್ವಕಪ್ ಗಾಗಿ ಇಂಗ್ಲೆಂಡ್- ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಮುಖಾಮುಖಿ ಆಗಿದ್ದವು. ಈ ರಣರೋಚಕ ಪಂದ್ಯದಲ್ಲಿ ವಿಜಯ ಲಕ್ಷ್ಮಿ ಎರಡೂ ತಂಡಗಳ ಪರವೂ ಇದ್ದಳು. ಆದ್ರೆ ಸೂಪರ್ ಓವರ್ ಕಾರಣದಿಂದಾಗಿ ಇಂಗ್ಲೆಂಡ್ ಗೆ ಅದೃಷ್ಠ ಲಕ್ಷ್ಮಿ ಬಾಗಿಲು ತೆರೆದು ಪ್ರಶಸ್ತಿಯನ್ನು ತಂದುಕೊಟ್ಟಳು.
ಆದ್ರೆ ಈ ಪಂದ್ಯ ಗೆದ್ದು ಚೊಚ್ಚಲ ವಿಶ್ವಕಪ್ ಗೆ ಮುತ್ತಿಡಬೇಕು ಎಂದುಕೊಂಡಿದ್ದ ನ್ಯೂಜಿಲೆಂಡ್ ಗೆ ಮಾತ್ರ ಸೂಪರ್ ಓವರ್ ಶನಿಯಂತೆ ವಕ್ಕರಿಸಿತ್ತು. ಫೈನಲ್ ಮ್ಯಾಚ್ ನ ನಿಗದಿತ ಓವರ್ಗಳ ಆಟ ಮುಗಿದಾಗ ಪಂದ್ಯ ‘ಟೈ’ ಆಗಿತ್ತು. ಸೂಪರ್ ಓವರ್ ಕೂಡ ‘ಟೈ’ ಆಗಿತ್ತು. ಹೀಗಾಗಿ ಅತಿ ಹೆಚ್ಚು ಬೌಂಡರಿ ಗಳಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಅಂದಿನ ಫೈನಲ್ ಪಂದ್ಯದ ಫಲಿತಾಂಶದ ಬಗ್ಗೆ ಇಂದಿಗೂ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗಳು ಆಗುತ್ತಲೇ ಇವೆ. ಅದರಲ್ಲೂ ಕಿವೀಸ್ ಕ್ರಿಕೆಟರ್ಸ್ ಅಂತೂ ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶದ ಕುರಿತಾಗಿ ಸಾಕಷ್ಟು ಬಾರಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಈ ನಿಯಮವನ್ನು ಹಲವರು ಟೀಕಿಸುತ್ತಲೇ ಇದ್ದಾರೆ.
ಇದೀಗ ಅಂದಿನ ಫಲಿತಾಂಶದ ಬಗ್ಗೆ ಕಿವೀಸ್ ಕ್ರಿಕೆಟರ್ ರಾಸ್ ಟೇಲರ್ ಮಾತನಾಡಿದ್ದು, ‘ವಿಶ್ವಕಪ್ನಂತಹ ಮಹತ್ವದ ಟೂರ್ನಿಯಲ್ಲಿ ಫೈನಲ್ ಪಂದ್ಯವು ಟೈ ಆದರೆ ಉಭಯ ತಂಡಗಳಿಗೂ ಜಂಟಿಯಾಗಿ ಪ್ರಶಸ್ತಿ ನೀಡಬೇಕು. ಏಕದಿನ ಮಾದರಿಯಲ್ಲಿ ‘ಸೂಪರ್ ಓವರ್’ ಅಗತ್ಯವೇ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಎಸ್ಪಿಎನ್ ಕ್ರಿಕ್ ಇನ್ಫೊ ಜೊತೆಗಿನ ಸಂವಾದದಲ್ಲಿ ರಾಸ್ ಮಾತನಾಡುತ್ತಾ, ‘ಏಕದಿನ ಪಂದ್ಯವು ಟೈ ಆದರೆ ಆ ಫಲಿತಾಂಶವೇ ಅಂತಿಮವಾಗಬೇಕು. ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ಆಡಿಸುವುದರಲ್ಲಿ ಅರ್ಥವಿಲ್ಲ’. ಟ್ವೆಂಟಿ-20 ಮಾದರಿಯ ಪಂದ್ಯದಲ್ಲಿ ಫಲಿತಾಂಶ ಬರುವವರೆಗೂ ‘ಸೂಪರ್ ಓವರ್’ ಆಡಿಸಬಹುದು. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಏಕದಿನ ಮಾದರಿಯು ಸುದೀರ್ಘವಾದುದು. ಅದಕ್ಕೆ ಈ ನಿಯಮ ಸರಿಹೊಂದುವುದಿಲ್ಲ’ ಎಂದು ನುಡಿದಿದ್ದಾರೆ.