ಆಪರೇಷನ್ ಗಂಗಾ ಪೂರ್ಣ | 22,500 ವಿದ್ಯಾರ್ಥಿಗಳು ವಾಪಸ್
ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಿಂದ ಈವರೆಗೂ 22,500 ವಿದ್ಯಾರ್ಥಿಗಳನ್ನು ಮರಳಿ ತಯ್ನಾಡಿಗೆ ಕರೆತರಲಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ಆಪರೇಷನ್ ಗಂಗಾ ಯೋಜನೆ ಅಡಿ ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು, ಭಾರತಕ್ಕೆ ಕರೆ ತಂದಿತು. ರಷ್ಯಾ ಉಕ್ರೇನ್ನ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಅಲ್ಲಿನ ವಿಶ್ವವಿದ್ಯಾಲಯಗಳು ನಾಶವಾಗಿದೆ. ಇದರಿಂದಾಗಿ ಉಕ್ರೇನ್ನಿಂದ ವಾಪಸ್ ಆದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಸಂಬಂಧ ಅರ್ಜಿಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದರು. ಈ ಅರ್ಜಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.
ಅಟಾರ್ನಿ ಜನರಲ್ ವೇಣುಗೋಪಾಲ್ ಇಲ್ಲಿಯವರೆಗೆ 22,500 ವಿದ್ಯಾರ್ಥಿಗಳು ಸ್ವದೇಶಕ್ಕೆ ಬಂದಿದ್ದು, ಈ ದೊಡ್ಡ ಮಿಷನ್ ಪೂರ್ಣವಾಗಿದೆ ಎಂದು ತಿಳಿಸಿದರು
ಈ ವೇಳೆ ಅವರ ಶಿಕ್ಷಣದ ಬಗ್ಗೆ ಕೇಳಿದ ಮುಖ್ಯ ನ್ಯಾ. ರಮಣ ಅವರು ಕೇಳಿದ ಪ್ರಶ್ನೆಗೆ, ಉಕ್ರೇನ್ನಿಂದ ವಾಪಸ್ ಆಗಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಲಾಗುತ್ತಿದೆ. ಭಾರತದಲ್ಲೇ ಅಧ್ಯಯನ ನಡೆಸಲು ಒತ್ತು ನೀಡಲಾಗುವುದು. ಈ ಬಗ್ಗೆ ತಿರ್ಮಾನ ಕೈಗೊಳ್ಳಲು ಸಮಯ ಬೇಕಾಗಬಹುದು ಎಂದು ಉತ್ತರಿಸಿದರು.
ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ಭಾರತಕ್ಕೆ ವಾಪಸ್ ಆದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಫಾತಿಮಾ ಅಹಾನಾ ಸೇರಿದಂತೆ ಹಲವು ಜನರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಇತ್ಯರ್ಥ ಪಡಿಸುವ ಸಂಬಂಧ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಉಕ್ರೇನ್ ನಿಂದ ವಾಪಸ್ ಆದ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಕೋರಿಕೊಂಡರು. ಇಷ್ಟು ಮಾತ್ರವಲ್ಲದೇ ಆನ್ಲೈನ್ ಶಿಕ್ಷಣದ ಮೂಲಕ ಎಂಬಿಬಿಎಸ್ ಪಡೆದ ಉಕ್ರೇನ್ ವಿದ್ಯಾರ್ಥಿಗಳ ಪದವಿಯನ್ನು ಭಾರತ ಸರ್ಕಾರ ಒಪ್ಪಿಕೊಳ್ಳಲು ಸೂಚಿಸುವಂತೆ ಅವರು ಮನವಿ ಮಾಡಿದ್ದರು.
ಕಳೆದ ಫೆಬ್ರವರಿ ಅಂತ್ಯದಿಂದ ಇಲ್ಲಿಯವರೆಗೂ ಆಪರೇಷನ್ ಗಂಗಾ ಯೋಜನೆಯಡಿ ಭಾರತೀಯರನ್ನು ರಕ್ಷಣೆ ಮಾಡಿ ತವರಿಗೆ ಕರೆ ತರಲಾಗಿದೆ. ಈ ಪೈಕಿ ಬಹುತೇಕರು ವಿದ್ಯಾರ್ಥಿಗಳೇ ಅನ್ನೋದು ವಿಶೇಷವಾಗಿತ್ತು.