ನೂತನ ಅಂಚೆ ಮತದಾನ ಚುನಾವಣಾ ನಿಯಮ ತಿದ್ದುಪಡಿಗೆ ವಿರೋಧ ಪಕ್ಷಗಳ ವಿರೋಧ
ಹೊಸದಿಲ್ಲಿ, ಜುಲೈ 6: ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಚರ್ಚೆ ಮಾಡದೇ ಜಾರಿಗೆ ತಂದ ನೂತನ ಅಂಚೆ ಮತದಾನ ಚುನಾವಣಾ ನಿಯಮ ತಿದ್ದುಪಡಿಗೆ ವಿರೋಧ ಪಕ್ಷಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿವೆ.
ಏನಿದು ಅಂಚೆ ಮತದಾನ:
ಭಾರತದಲ್ಲಿ ಅಂಚೆ ಮತದಾನವು ಭಾರತದ ಚುನಾವಣಾ ಆಯೋಗದ “ಎಲೆಕ್ಟ್ರಾನಿಕ್ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಪೇಪರ್ಸ್ (ಇಟಿಪಿಬಿ)” ವ್ಯವಸ್ಥೆಯ ಮೂಲಕ ಮಾತ್ರ ನಡೆಯುತ್ತದೆ.
ಅಲ್ಲಿ ನೋಂದಾಯಿತ ಅರ್ಹ ಮತದಾರರಿಗೆ ಮತಪತ್ರಗಳನ್ನು ವಿತರಿಸಲಾಗುತ್ತದೆ ಮತ್ತು ಅವರು ಮತಗಳನ್ನು ಅಂಚೆ ಮೂಲಕ ಹಿಂದಿರುಗಿಸುತ್ತಾರೆ. ಮತಗಳ ಎಣಿಕೆ ಪ್ರಾರಂಭವಾದಾಗ, ಇತರ ಎಲ್ಲ ಮತದಾರರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಿಂದ ಮತಗಳನ್ನು ಎಣಿಸುವ ಮೊದಲು ಈ ಅಂಚೆ ಮತಗಳನ್ನು ಮೊದಲು ಎಣಿಸಲಾಗುತ್ತದೆ. ಕೆಲವು ವರ್ಗದ ಜನರು ಮಾತ್ರ ಅಂಚೆ ಮತದಾರರಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ.
ಯಾರಿಗೆಲ್ಲ ಅನ್ವಯ:
80 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು ತೀವ್ರ ವಿಕಲಾಂಗ ಮತದಾರರು.
ಯೂನಿಯನ್ ಸಶಸ್ತ್ರ ಪಡೆ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಜನರು ಮತ್ತು ಅವರ ಪತ್ನಿ ಯರು. ಅಧಿಕೃತವಾಗಿ ವಿದೇಶದಲ್ಲಿ ನೇಮಕಗೊಂಡಿರುವ ಭಾರತ ಸರ್ಕಾರದಲ್ಲಿ ಕೆಲಸ ಮಾಡುವ ನೌಕರರು ಅಂಚೆ ಮತಕ್ಕಾಗಿ ನೋಂದಾಯಿಸಿಕೊಳ್ಳಬಹುದು. ಇವರನ್ನು ಸೇವಾ ಮತದಾರರು ಎಂದೂ ಕರೆಯುತ್ತಾರೆ.
1961 ರ ಚುನಾವಣಾ ನಿಯಮಗಳಿಗೆ ಕೇಂದ್ರ ಸರಕಾರದ ನೂತನ ತಿದ್ದುಪಡಿ;
ಇದೀಗ ಕೋವಿಡ್ -19 ಸೋಂಕಿನಿಂದಾಗಿ ಕೇಂದ್ರ ಸರಕಾರ 1961 ರ ಚುನಾವಣಾ ನಿಯಮಗಳಿಗೆ ತಿದ್ದುಪಡಿ ಮಾಡಿ, ಮೊದಲಿದ್ದ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದ್ದ ಅಂಚೆ ಮತದಾನವನ್ನು ಆರೋಗ್ಯದ ಹಿತದೃಷ್ಟಿಯಿಂದ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ವಿಸ್ತರಣೆ ಮಾಡಿದೆ. ದೇಶಾದ್ಯಂತ ಈಗಾಗಲೇ ಕೋವಿಡ್ -19 ರುದ್ರನರ್ತನಕ್ಕೆ ಸಿಲುಕಿದ್ದು ಅನೇಕ ಕೊರೊನಾವೈರಸ್ ಸೋಂಕಿತರು ಅಥವಾ ಸೋಂಕು ಶಂಕಿತ ಜನರಿಗೆ ಮತದಾನದಿಂದ ದೂರ ಇರಬೇಕಾದ ಪರಿಸ್ಥಿತಿ ಬಂದಿದ್ದು ಇದೀಗ ಅವರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದು, ಯಾವುದೇ ವೈದ್ಯಕೀಯ ಸೌಲಭ್ಯದಲ್ಲಿಲ್ಲದೇ ತಮ್ಮ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆದ ಮತದಾರರಿಗೆ ಸಹ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಅವಕಾಶ ನೀಡಿದೆ.
ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಆರೋಪ :
ಅಂಚೆ ಮತಪತ್ರಗಳು “ಹೆಚ್ಚಿನ ಸಂಖ್ಯೆಯ ಮತದಾರರ ಪರಿಶೀಲನೆಗೆ ಪ್ರತಿಕೂಲ ಪರಿಣಾಮ ಬೀರುತ್ತವೆ, ಹೀಗಾಗಿ, ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಆರೋಪಿಸಿದೆ.
ಕಳೆದ ವಾರದ ಆರಂಭದಲ್ಲಿ, ತಿದ್ದುಪಡಿಯನ್ನು ಮರುಪರಿಶೀಲಿಸುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಮತದಾನ ಸಮಿತಿಯನ್ನು ಒತ್ತಾಯಿಸಿದ್ದರು ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆತುರದ ನಿರ್ಧಾರವೆಂದು ಅನುಮಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು,ಅರ್ಜಿಯಲ್ಲಿ ಈ ತಿದ್ದುಪಡಿಯನ್ನು ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವದ ರಚನೆಯ ಮೇಲೆ ಮಾಡಿದ ಲಜ್ಜೆಗೆಟ್ಟ ದಾಳಿ ಎಂದು ಬಣ್ಣಿಸಿದೆ. ಈ ತಿದ್ದುಪಡಿಯು ಸರ್ಕಾರ ಮತ್ತು ಆಡಳಿತವು ಮತದಾರರ ಮೇಲೆ ಪ್ರಭಾವ ಬೀರಲು ಅಥವಾ ಒತ್ತಾಯಿಸಲು ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ವಿರೋಧ ಪಕ್ಷ ಆರೋಪಿಸಿದೆ. ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ಮಾಡದೇ ಏಕಾಏಕಿ ತೆಗೆದುಕೊಂಡ ನಿರ್ಧಾರ ಆಘಾತಕಾರಿ ತಪ್ಪನ್ನು ತೋರಿಸುತ್ತದೆ. ಮತದಾನದ ರಹಸ್ಯವು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಅಂತರ್ಗತವಾಗಿರುತ್ತದೆ, ಸುಪ್ರೀಂ ಕೋರ್ಟ್ನ ಪ್ರಕಾರ ಸಂವಿಧಾನದ ಮೂಲ ಲಕ್ಷಣವಾಗಿದೆ ಮತ್ತು ತಿದ್ದುಪಡಿಯ ಅಧಿಕಾರಗಳಿಗೆ ಇದು ಸೂಕ್ತವಲ್ಲ ಎಂದು ತಿಳಿಸಿದೆ.
ನ್ಯಾಯಯುತ ಚುನಾವಣೆಗಳಿಗೆ ಗೌಪ್ಯತೆ ಹೇಗೆ ನಿರ್ಣಾಯಕವಾಗಿದೆ ಎಂಬುದನ್ನು ಸಾಭೀತುಪಡಿಸಲು ಸುಪ್ರೀಂ ಕೋರ್ಟ್ ನ ಎರಡು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.
ಅಂಚೆ ಮತಪತ್ರಗಳನ್ನು ಬಳಸಲು ಅರ್ಹರಾದವರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುವ ತಿದ್ದುಪಡಿ ಗೌಪ್ಯತೆಯ ತತ್ವವನ್ನು ಹೇಗೆ ಉಲ್ಲಂಘಿಸುತ್ತದೆ ಎಂದು ಪಕ್ಷ ವಿವರಿಸಿದೆ. ಜನಸಂಖ್ಯೆಯ ಹೆಚ್ಚಿನ ಭಾಗವು ಅಶಿಕ್ಷಿತವಾಗಿದೆ, ಅಂಚೆ ಮತಪತ್ರ ಸೌಲಭ್ಯವನ್ನು ಬಳಸುವ ಮತದಾರರು ಇತರರಿಂದ ಸಹಾಯ ಪಡೆಯಬಾರದು. ಆದರೆ ಇದರಿಂದ ಹಲವಾರು ಹಂತಗಳಲ್ಲಿ ತಮ್ಮ ಆದ್ಯತೆಯ ಅಭ್ಯರ್ಥಿಯನ್ನು ಬಹಿರಂಗಪಡಿಸಬಹುದು. ಇದು ಮತದಾರರನ್ನು ಸಂಘಟಿತ ಆಡಳಿತ ಮತ್ತು ರಾಜಕೀಯ ಪ್ರಭಾವಕ್ಕೆ ಒಡ್ಡುತ್ತದೆ. ಆಡಳಿತ ಪಕ್ಷವು ಈ ಮತದಾರರನ್ನು ಮುಂಚಿತವಾಗಿ ಗುರುತಿಸಲು ಮತ್ತು ಅವರ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ, ಮತದಾನ ಪ್ರಕ್ರಿಯೆಯು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ನಡವಳಿಕೆ ಚುನಾವಣಾ ನಿಯಮ 1961 ರ ನಿಯಮ 24 (2) ರ ಪ್ರಕಾರ, ಅಂಚೆ ಮತಪತ್ರದ ಜೊತೆಗೆ ಫಾರ್ಮ್ 13 ಎ ಅನ್ನು ಸರಿಯಾಗಿ ದೃಡಿಕರಿಸಬೇಕು ಮತ್ತು ನೋಟರೈಸ್ ಮಾಡಬೇಕು. ಆದ್ದರಿಂದ, ಮತದಾರನು ನೋಟರಿ ಮತ್ತು ದೃಡಿಕರಣದ ಉದ್ದೇಶಗಳಿಗಾಗಿ ಅಧಿಕಾರಿಯನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕು. ಹಾಗಾಗಿ, ಇದು ಮತದಾರನನ್ನು ಮಾತ್ರವಲ್ಲದೆ ನೋಟಿಸ್ನ ಉಸ್ತುವಾರಿ ಅಧಿಕಾರಿಯನ್ನೂ ಸಹ ಕೋವಿಡ್ -19 ಸೋಂಕಿನ ಅಪಾಯಕ್ಕೆ ಒಡ್ಡುತ್ತದೆ ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ’
ಇನ್ನು ಮತದಾರ ತನ್ನ ಅಂಚೆ ಮತಪತ್ರವನ್ನು ಕಳುಹಿಸಲು ಸರ್ಕಾರಿ ಅಂಚೆ ಕಚೇರಿಯ ಸೇವೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಮತ್ತು ಆದ್ದರಿಂದ, ಕೋವಿಡ್ -19 ಸೋಂಕು ಹರಡುವ ಅಪಾಯವನ್ನು ಮತ್ತೊಮ್ಮೆ ಎದುರಿಸಬೇಕಾಗುತ್ತದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತದಾನ ಕೇಂದ್ರವನ್ನು ಹೊಂದಿರುವುದು ಉತ್ತಮ ಪರ್ಯಾಯವಾಗಿದೆ ಎಂದು ಜ್ಞಾಪಕ ಪತ್ರದಲ್ಲಿ ತಮ್ಮ ಅಭಿಪ್ರಾಯ ತಿಳಿಸಲಾಗಿದೆ.
ಕಳೆದ ತಿಂಗಳು ಒಂಬತ್ತು ರಾಜ್ಯಗಳಲ್ಲಿ ರಾಜ್ಯಸಭೆಯಲ್ಲಿ ಖಾಲಿ ಇದ್ದ 19 ಹುದ್ದೆಗಳನ್ನು ಭರ್ತಿ ಮಾಡುವ ಚುನಾವಣೆ ಮೂಲತಃ ಮಾರ್ಚ್ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಅದನ್ನು ಮುಂದೂಡಲಾಯಿತು. ಬಳಿಕ ಅದನ್ನು ಜೂನ್ನಲ್ಲಿ ನಡೆಸಲಾಯಿತು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಸದಸ್ಯರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ದೆಹಲಿ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು ತೀವ್ರ ವಿಕಲಾಂಗ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇಲ್ಲಿ ಯಾವುದೇ ಆಕ್ಷೇಪ ವ್ಯಕ್ತವಾಗದಿರುವುದು ವಿಪರ್ಯಾಸ. ಒಟ್ಟಿನಲ್ಲಿ ಕೊರೊನ ಮಹಾಮಾರಿ ಅನೇಕ ಬದಲಾವಣೆಗಳನ್ನು ತಂದಿರುವುದು ಸುಳ್ಳಲ್ಲ.