ಬೆಂಗಳೂರು: ನಮ್ಮೆಲ್ಲರ ಗುರಿ ಸಹನಶೀಲವಾದ ಸಮಾಜ ನಿರ್ಮಾಣ, ಹಾಗೂ ನಮ್ಮ ಮಕ್ಕಳ ಭವ್ಯ ಭವಿಷ್ಯವಷ್ಟೇ ಮುಖ್ಯ, ಉಳಿದೆಲ್ಲವೂ ಅರ್ಥಹೀನವಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದು, ಆರ್.ಟಿ.ಇ ಶುಲ್ಕ ಮರುಪಾವತಿಯಾಗಿಲ್ಲ ಎನ್ನುವ ಆರೋಪಕ್ಕೆ ಸ್ಪಷ್ಟನೆನೀಡಿದ್ದಾರೆ.
ಸುದೀರ್ಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್, ಈ ಎಲ್ಲ ಶಾಲೆಗಳೂ ನಿರೀಕ್ಷಿತ ದಾಖಲೆಗಳನ್ನು ತಂತ್ರಾಂಶದ ಮೂಲಕ ಸಲ್ಲಿಸಿದ ಬಳಿಕವೂ ಹಣ ಪಾವತಿ ವಿಳಂಬವಾದ ಪ್ರಕರಣಗಳೇನಾದರೂ ಕಂಡು ನನ್ನ ಗಮನಕ್ಕೆ ತಂದಲ್ಲಿ ಅಂತಹ ಶಾಲೆಗಳಿಗೆ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನಾನು ನೀಡುತ್ತೇನೆ. ಈ ಲೋಪಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೂ ಮುಂದಾಗುತ್ತೇನೆ. ದಾಖಲೆಗಳನ್ನು ಸಲ್ಲಿಸದೆಯೂ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸುವವರಿಗೆ ನನ್ನಲ್ಲಿ ಉತ್ತರವಿಲ್ಲ ಎಂದಿದ್ದಾರೆ.
ಬಹಳ ಪ್ರಮುಖವಾದ ಅಂಶವೆಂದರೆ, ಆರ್.ಟಿ.ಇ ಶುಲ್ಕ ಮರುಪಾವತಿಯೆನ್ನುವುದು ಸರ್ಕಾರವು ಯಾವುದೇ ವಿದ್ಯಾರ್ಥಿಯ ಕಲಿಕೆಗೆ ತೊಡಕಾಗಬಾರದೆನ್ನುವ ಸದುದ್ದೇಶದಿಂದ. ತನ್ನ ಸೀಮಿತ ಸಂಪನ್ಮೂಲಗಳ ನಡುವೆಯೂ ನಿರ್ವಹಿಸುತ್ತಿರುವ ಪ್ರಧಾನ ಜವಾಬ್ದಾರಿಯಾಗಿದೆ. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಪೆÇೀಷಿಸಬೇಕೆನ್ನುವ ಪ್ರಮುಖ ಜವಾಬ್ದಾರಿಯನ್ನು ಹೊಂದಿಯೂ ಯಾವುದೇ ಮಗು ಕಲಿಕೆಯಿಂದ ವಂಚಿತವಾಗಬಾರದೆನ್ನುವ ಸದಾಶಯವನ್ನು ಸರ್ಕಾರ ಈ ಶುಲ್ಕ ಮರುಪಾವತಿಯ ಮೂಲಕ ಶೃತಪಡಿಸುತ್ತದೆ.
ಇನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಮ್ಮಲ್ಲಿ ಕೆಲಸ ಮಾಡುವ ಶಿಕ್ಷಕರು, ಶಿಕ್ಷಕೇತರರಿಗೆ ಯಾವುದೇ ಪ್ರತಿಕೂಲ ಸಂದರ್ಭದಲ್ಲಿಯೂ ಉದ್ಯೋಗ ಭದ್ರತೆಯನ್ನು ನೀಡಬೇಕಾಗಿದೆ. ಅದು ಅವುಗಳ ಪ್ರಾಥಮಿಕ ಜವಾಬ್ದಾರಿಯೂ ಹೌದು. ಆದರೂ ಖಾಸಗಿ ಶಾಲೆಗಳು ನಮ್ಮ ಮಕ್ಕಳಿಗೆ ವಿದ್ಯಾದಾನವನ್ನು ಮಾಡುವ ಶ್ರೇಷ್ಠ ಸಂಸ್ಥೆಗಳೆಂದೇ ಭಾವಿಸಿ ಸರ್ಕಾರವು ಹಲವು ಸುಧಾರಣೆಗಳಿಗೆ ಮುಂದಾಗಿದೆ. ನಿಯಮಗಳ ವ್ಯಾಪ್ತಿಯಲ್ಲಿ ಪಡೆಯಬೇಕಾದ ಎಲ್ಲ ಸವಲತ್ತುಗಳನ್ನು ಸರ್ಕಾರವು ಗಮನಿಸಿಯೇ ಹಲವು ರಿಯಾಯಿತಿಗಳಿಗೆ ಮುಂದಾಗಿದೆ. ಯಾವ ಆಗ್ರಹಗಳನ್ನು ನಿಯಮಗಳ ಆಧಾರದಲ್ಲಿ ಪರಿಗಣಿಸಬಹುದೋ ಅಂತಹವುಗಳನ್ನು ಸರ್ಕಾರವು ಸಹಾನುಭೂತಿಯಿಂದಲೇ ಗಮನಿಸಿದೆ.
ಅದನ್ನು ಬಿಟ್ಟು, “ಆರ್.ಟಿ.ಇ ಶುಲ್ಕ ಮರುಪಾವತಿಯಾಗಿದೆ ಎನ್ನುವ ಶಿಕ್ಷಣ ಸಚಿವರ ಹೇಳಿಕೆ ಸುಳ್ಳು” ಎಂದು ಆಧಾರರಹಿತವಾದ ಆಪಾದನೆ ಮಾಡುವುದು ಅನವಶ್ಯಕ ಪ್ರಚಾರವನ್ನು ಗಿಟ್ಟಿಸುವ ತಂತ್ರವಷ್ಟೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ ಎಂದು ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಆರೋಪಗಳನ್ನು ಮಾಡಿದವರೂ ಸಹ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿ, ಸರ್ಕಾರದ ನಿಯಂತ್ರಣದ ಇತಿಮಿತಿಗಳ ಬಗ್ಗೆಯೂ ಚರ್ಚಿಸಲಿ. ನಮಗೆ ಬೇಕಿರುವುದು ಸಹನಶೀಲವಾದ ಸಮಾಜ, ನಮ್ಮ ಮಕ್ಕಳ ಭವ್ಯ ಭವಿಷ್ಯ. ಅದರಾಚೆಗೆ ಎಲ್ಲವೂ ಅರ್ಥಹೀನ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel