ಧಾರವಾಡ : ಭಾರತೀಯ ಮೂಲದ ಮಹಿಳಯೊಬ್ಬರು ಆಸ್ಟ್ರೇಲಿಯಾದ (Australia) ನೀತಿ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಅವರ ಮಕ್ಕಳನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ದೆಹಲಿಯ ಜಂತರ್ ಮಂತರ್ ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಧಾರವಾಡದ ಪ್ರಿಯದರ್ಶಿನಿ ಪಾಟೀಲ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಪ್ರಿಯದರ್ಶಿನಿ ಅವರು, ಲಿಂಗರಾಜ ಪಾಟೀಲ್ ಅವರೊಂದಿಗೆ ವಿವಾಹವಾಗಿ, ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಪ್ರಿಯದರ್ಶಿನಿ ಅವರ ಪುತ್ರನಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಡ್ನಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಗನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಪ್ರಿಯದರ್ಶಿನಿ ಅಲ್ಲಿನ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಈ ವೇಳೆ ಅಲ್ಲಿನ ಸರ್ಕಾರ ಪ್ರಿಯದರ್ಶಿನಿ ಅವರೇ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಿ, ಅಲ್ಲಿನ ಸರ್ಕಾರವು ಇಬ್ಬರು ಮಕ್ಕಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಹೀಗಾಗಿ ಭಾರತಕ್ಕೆ ಬಂದ ಪ್ರಿಯದರ್ಶಿನಿ, ಮಲಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.