ಹಣಕಾಸಿನ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನವು ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಈಗ ಹೊಸ ತಂತ್ರಕ್ಕೆ ಮೊರೆ ಹೋಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಪ್ರತಿಯಾಗಿ ಇಸ್ಲಾಮಾಬಾದ್ ಈಗ ವಾಷಿಂಗ್ಟನ್ ಬಳಿ ಬರೋಬ್ಬರಿ 10 ಶತಕೋಟಿ ಡಾಲರ್ ಅಂದರೆ ಸುಮಾರು 10 ಬಿಲಿಯನ್ ಡಾಲರ್ ಗಳ ಮಧ್ಯಸ್ಥಿಕೆ ಶುಲ್ಕ ಅಥವಾ ಮಿಡಿಯೇಟರ್ ಫೀಸ್ ಕೇಳಿದೆ. ಈ ಮೂಲಕ ಜಾಗತಿಕ ರಾಜತಾಂತ್ರಿಕತೆಯಲ್ಲಿ ಪಾಕಿಸ್ತಾನವು ಒಂದು ವ್ಯಾಪಾರಿ ಅಥವಾ ಬ್ರೋಕರ್ ರೀತಿ ವರ್ತಿಸುತ್ತಿದೆ ಎಂಬ ಭಾರತದ ಆರೋಪ ಈಗ ಅಕ್ಷರಶಃ ಸಾಬೀತಾಗಿದೆ.
ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರಿಗೆ ಈ ಕುರಿತು ಅಧಿಕೃತ ಮನವಿ ಸಲ್ಲಿಸಿದ್ದಾರೆ. ಐದು ವರ್ಷಗಳ ಅವಧಿಯ ದ್ವಿಪಕ್ಷೀಯ ವಿನಿಮಯ ಸ್ಥಿರೀಕರಣ ಬೆಂಬಲ ಸೌಲಭ್ಯದ ಅಡಿಯಲ್ಲಿ ಈ ಹಣವನ್ನು ನೀಡುವಂತೆ ಕೋರಲಾಗಿದೆ. ಈ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಏಳು ಬಿಲಿಯನ್ ಡಾಲರ್ ಸಾಲ ಪಡೆದಿದ್ದರೂ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ತನ್ನ ರಾಜತಾಂತ್ರಿಕ ನಡೆಯನ್ನೇ ಬಂಡವಾಳ ಮಾಡಿಕೊಂಡು ಅಮೆರಿಕದಿಂದ ಹಣ ವಸೂಲಿ ಮಾಡಲು ಪಾಕಿಸ್ತಾನ ಮುಂದಾಗಿದೆ.
ಈ ಬೆಳವಣಿಗೆಯಿಂದಾಗಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಮಾತುಗಳು ಈಗ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿವೆ. ಮಧ್ಯಪ್ರಾಚ್ಯದ ಸಂಘರ್ಷಗಳಲ್ಲಿ ಭಾರತ ಏಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಜೈಶಂಕರ್, ಭಾರತವು ಪಾಕಿಸ್ತಾನದಂತೆ ಬ್ರೋಕರ್ ಕೆಲಸ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಟೀಕಿಸಿದ್ದರು. ಈಗ ಪಾಕಿಸ್ತಾನವು ತಾನು ಮಾಡಿದ ಸಂಧಾನ ಕಾರ್ಯಕ್ಕೆ ಹಣದ ಬೇಡಿಕೆ ಇಟ್ಟಿರುವುದು ಅದು ಕೇವಲ ಲಾಭಕ್ಕಾಗಿ ಕೆಲಸ ಮಾಡುವ ದೇಶ ಎಂಬ ಭಾರತದ ನಿಲುವನ್ನು ಎತ್ತಿಹಿಡಿದಿದೆ.
ಸದ್ಯಕ್ಕೆ ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣವಾಗಿ ಐಎಂಎಫ್ ಮತ್ತು ಚೀನಾ, ಸೌದಿ ಅರೇಬಿಯಾದಂತಹ ದೇಶಗಳ ನೆರವಿನ ಮೇಲೆ ನಿಂತಿದೆ. 2023ರಲ್ಲಿ ದಿವಾಳಿ ಘೋಷಣೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರೂ, ಅಲ್ಲಿನ ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಮೆರಿಕದ ಈ 10 ಬಿಲಿಯನ್ ಡಾಲರ್ ಸಹಾಯ ಸಿಕ್ಕರೆ ಮಾತ್ರ ಪಾಕಿಸ್ತಾನ ಬದುಕುಳಿಯಲು ಸಾಧ್ಯ. ಆದರೆ ಹಣಕ್ಕಾಗಿ ಸಂಧಾನದ ಕೆಲಸ ಮಾಡಿದೆ ಎನ್ನುತ್ತಿರುವ ಪಾಕಿಸ್ತಾನದ ಈ ಬೇಡಿಕೆಗೆ ಅಮೆರಿಕ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ ಪಾಕಿಸ್ತಾನದ ಈ ನಡೆ ಜಾಗತಿಕ ಮಟ್ಟದಲ್ಲಿ ಅದರ ಗೌರವವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಿದೆ.








