ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷಾಂತರ ಮಾಡುವುದು ಹೆತ್ತ ತಾಯಿಗೆ ಅನಾರೋಗ್ಯ ಕಾಡಿದಾಗ ಆಕೆಯನ್ನು ಅನಾಥೆಯನ್ನಾಗಿ ಮಾಡಿ ಓಡಿಹೋಗುವುದಕ್ಕೆ ಸಮಾನ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ದ್ರೋಹಿಗಳಿಗೆ ಕ್ಷಮೆಯಿಲ್ಲ
ಉತ್ತರ ಕೋಲ್ಕತಾದಲ್ಲಿ ನಡೆದ ಪಕ್ಷದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ದೀದಿ, ಜೀವನ ಪೂರ್ತಿ ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಈಗ ತನಿಖಾ ಸಂಸ್ಥೆಗಳ ಭಯಕ್ಕೆ ಅಥವಾ ಹಣದ ಆಸೆಗೆ ಬಿದ್ದು ಓಡಿಹೋಗುತ್ತಿರುವವರು ಇಂದು ಬಚಾವ್ ಆಗಬಹುದು. ಆದರೆ ಭವಿಷ್ಯದಲ್ಲಿ ಬಂಗಾಳದ ಜನತೆ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಿಮ್ಮನ್ನು ಬಿಡುವುದಿಲ್ಲ, ಪ್ರತಿಯೊಂದಕ್ಕೂ ಲೆಕ್ಕ ಕೇಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸ್ವಾರ್ಥಕ್ಕಾಗಿ ನೈತಿಕತೆ ಮಾರಿಕೊಂಡಿದ್ದಾರೆ
ತಮ್ಮ ಸ್ವಂತ ಆಸ್ತಿಪಾಸ್ತಿಗಳನ್ನು ಉಳಿಸಿಕೊಳ್ಳಲು ಮತ್ತು ಇಡಿ, ಸಿಬಿಐನಂತಹ ಸಂಸ್ಥೆಗಳ ಕೇಸ್ಗಳಿಂದ ತಪ್ಪಿಸಿಕೊಳ್ಳಲು ಕೆಲವರು ಪಕ್ಷ ಬದಲಾಯಿಸುತ್ತಿದ್ದಾರೆ. ಯಾರ ವಿರುದ್ಧ ನಾವು ಹೋರಾಟ ಮಾಡಿದ್ದೇವೋ, ಇಂದು ಅವರ ಕಾಲಡಿಗೆ ಹೋಗಿ ಕುಳಿತುಕೊಳ್ಳಲು ಇವರಿಗೆ ನಾಚಿಕೆಯಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಹಣ ಮತ್ತು ಸ್ವಾರ್ಥಕ್ಕಾಗಿ ಧರ್ಮ ಹಾಗೂ ನೈತಿಕ ಮೌಲ್ಯಗಳನ್ನು ಬಲಿ ಕೊಡಲಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ, ಬುದ್ಧಿ ಇರುವವರು ವಾಪಸ್ ಬನ್ನಿ, ಇಲ್ಲದಿದ್ದರೆ ರಾಜಕೀಯವಾಗಿ ನೀವು ಅವನತಿ ಹೊಂದುತ್ತೀರಿ ಎಂದು ಎಚ್ಚರಿಸಿದರು.
ಸರ್ವಾಧಿಕಾರದ ವಿರುದ್ಧ ಕಿಡಿ
ದೇಶದಲ್ಲಿ ಈಗ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಆರೋಪಿಸಿದ ಮಮತಾ, ಬಿಜೆಪಿಗೆ ಒಂದು ದೇಶ ಮತ್ತು ಒಂದು ಪಕ್ಷ ಎನ್ನುವ ಅಜೆಂಡಾ ಬೇಕಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಬಂಧಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನದ ಹತ್ಯೆಯಾಗುತ್ತಿದೆ ಎಂದು ಕಿಡಿಕಾರಿದರು. ಪೊಲೀಸರು ಕೂಡ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬದಲ್ಲೂ ದ್ರೋಹಕ್ಕೆ ಜಾಗವಿಲ್ಲ
ಪಕ್ಷದ್ರೋಹದ ಬಗ್ಗೆ ಮಾತನಾಡುತ್ತಾ ತಮ್ಮ ಕುಟುಂಬದ ಉದಾಹರಣೆ ನೀಡಿದ ಮಮತಾ, ತಮಗೆ ದ್ರೋಹ ಮಾಡಿದ ಕಾರಣಕ್ಕಾಗಿಯೇ ತಮ್ಮ ಇಬ್ಬರು ಸ್ವಂತ ಸಹೋದರರಿಂದ ದೂರ ಸರಿದಿರುವುದಾಗಿ ತಿಳಿಸಿದರು. ಆದರೆ ಸಂಕಷ್ಟದ ಸಮಯದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ತಮ್ಮ ಜೊತೆ ನಿಂತಿದ್ದಾರೆ. ಕೇಂದ್ರ ಸರ್ಕಾರ ಅಭಿಷೇಕ್ ಮೇಲೆ ಪದೇ ಪದೇ ಸಮನ್ಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಂತಹ ದಬ್ಬಾಳಿಕೆ ನಡೆದರೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಧೈರ್ಯ ಗೆಡಬಾರದು ಎಂದು ಅವರು ಕರೆ ನೀಡಿದರು.








